ಬೊಗಳೆ ರಗಳೆ

header ads

ರೈತರ ಬೀಜ ಕಸಿಯುವ ಹಕ್ಕು ಸರಕಾರಕ್ಕಿಲ್ಲ

(ಬೊಗಳೂರು ಕೃಷಿ ಬ್ಯುರೋ)
ಬೊಗಳೂರು, ಮೇ 30- ಕರ್ನಾಟಕದಲ್ಲಿ ಮುಂಗಾರು ಮಾರುತವು ಮಳೆಗಾಲಕ್ಕೆ ಮೊದಲೇ ಅವಸರವಸರವಾಗಿ ಬಂದುದರಿಂದ ಬಿತ್ತನೆ ಕಾರ್ಯಕ್ಕಿಳಿದಿರುವ ರೈತರಿಗೆ ಅವರ ಬೀಜದ್ದೇ ಸಮಸ್ಯೆಯಾಗಿದೆ ಎಂಬ ವಿಷಯ ತಿಳಿದುಬಂದಿದೆ.

ಸರಕಾರದ "ಮಿಶ್ರ ತಳಿ"ಯ ಬೀಜ ಒಣಗಿ ಹಾಳಾಗಿದೆ. ಖಾಸಗಿಯವರ ಬೀಜ ದಷ್ಟಪುಷ್ಟವಾಗಿದ್ದರೂ ಒಳ್ಳೆಯ ಫಲ ಕೊಟ್ಟು ಸಂತಾನೋತ್ಪತ್ತಿ... ಅಲ್ಲಲ್ಲ ಸಂಪತ್ ಉತ್ಪತ್ತಿಗೆ ಕಾರಣವಾಗುತ್ತಿಲ್ಲ ಎಂದು ರೈತರು ಆಪಾದಿಸಿದ್ದಾರೆ. ಅಧಿಕೃತ ಬೀಜ ವಿತರಣಾ ಕೇಂದ್ರಗಳಲ್ಲೂ ಸರಕಾರೀ ಬೀಜದ ಬದಲಿಗೆ ಖಾಸಗಿ ಬೀಜಗಳನ್ನೇ ಇರಿಸಿದ್ದಾರೆ. ಅದರ "ಫಲವತ್ತತೆ" ಕಡಿಮೆ. ಇನ್ನು ನಾವು ನಮ್ಮದೇ ಬೀಜವನ್ನು ಬೆಳೆಸಿ ಅದನ್ನೇ ಬಳಸುತ್ತೇವೆ ಎಂದು ಅವರು ಹೆಬ್ಬೆರಳಿನಿಂದ ಅಬ್ಬರಿಸಿದ್ದಾರೆ.

ಆದರೆ ತಮ್ಮ ಬೀಜದಿಂದ ಬೆಳೆಸಿದ ಫಸಲನ್ನು ಮಧ್ಯವರ್ತಿಗಳಿಗೇ ನೀಡಿ ಮಾರಾಟ ಮಾಡಬೇಕೆಂಬ ಸರಕಾರದ ಕಾನೂನಿನಿಂದ ರೊಚ್ಚಿಗೆದ್ದಿರುವ ರೈತರು, ನಮ್ಮ ಬೀಜ ಮುಟ್ಟಲು ಬಿಡಲಾರೆವು ಎಂದಿದ್ದಾರಲ್ಲದೆ, ರೈತರ ಬೀಜ ಕಸಿಯುವ ಹಕ್ಕು ಸರಕಾರಕ್ಕಿಲ್ಲ ಎಂದು ಕ್ಯಾಕರಿಸಿ ಆಗ್ರಹಿಸಿದ್ದಾರೆ.

ಒಬ್ಬನೇ ರೈತ ಹಲವಾರು ಬೀಜಗಳನ್ನು ಒಂದೇ ಬಾರಿಗೆ ಇರಿಸಿಕೊಳ್ಳುವುದು ಅಸಾಧ್ಯ. ಇದಕ್ಕಾಗಿ ಒಬ್ಬೊಬ್ಬರು ಒಂದೊಂದು ಬೀಜವನ್ನಷ್ಟೇ ಹೊಂದಿದ್ದೇವೆ ಎಂದು ರೈತರ ಕುಟುಂಬದ ಎಲ್ಲಾ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.

ಬೀಜದ ಸಮಸ್ಯೆಯಿಂದ ಬಳಲುತ್ತಿರುವ ರೈತರ ಪುನರ್ವಸತಿಗೆ ಬೊಗಳೂರು ಬ್ಯುರೋ ಹೋರಾಡುತ್ತದೆ.

ಸೂಚನೆ: ಕನ್ನಡ ಬ್ಲಾಗ್‌ಗಳ ಕುರಿತು ಬೆಂಗಳೂರಿನ ಸಂಕೇತ್ ಪಾಟೀಲ್ ಬರೆದಿರುವ ಲೇಖನ ಆನ್‌ಲೈನ್‌ನಲ್ಲಿ ಇಲ್ಲಿ ಪ್ರಕಟವಾಗಿದೆ. ಬೊಗಳೆ ರಗಳೆ ಬ್ಯುರೋದವರು ಬಾರ್‌ಗೆ ಹೋಗಿದ್ದನ್ನು ಉಲ್ಲೇಖಿಸಿ ಪತ್ರಿಕೆಗಿದ್ದ ಲವಲೇಶದ ಹೊಣೆಗಾರಿಕೆಯನ್ನು ಕೆಡವಿದ್ದಾರೆ ಮತ್ತು ನಮ್ಮ ಪತ್ರಿಕೆಗೆ 2000 ಒದೆತಗಳು ಬೀಳುತ್ತಿರುವ ಈ ಸಂದರ್ಭ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳಿಗೆ ಎಮ್ಮೆ ತಂದುಕೊಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

11 ಕಾಮೆಂಟ್‌ಗಳು

  1. ನಿಮ್ಮ ಬ್ಲಾಗ್ ಗೆ 2000 ಒ(ಹೊ)ದೆ(ಡೆ)ತ ಬಿದ್ದಿದ್ದಕ್ಕೆ ಶುಭಾಷಯಗಳು. ದಿನೇ ದಿನೇ ನಿಮಗೆ ಇನ್ನೂ ಹೆಚ್ಚು ಒದೆತಗಳು ಬೀಳಲಿ ಎಂಬುದು ಹಾರೈಕೆ.

    ರೈತರ ಬೀಜದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಕೃಷಿ ಬ್ಯೂರೊದ ವರದಿ ಸಕಾಲಿಕ.

    ಇನ್ನೇನು ಕರ್ನಾಟಕದಲ್ಲಿ ಮುಂಗಾರು ಕಾಲಿಟ್ಟಿದೆ. ಕೃಷಿ ಚಟುವಟಿಕೆಗಳ ಕುರಿತ ಹೆಚ್ಚಿನ ವರದಿಗಳು ಬರಲಿ.

    ಪ್ರತ್ಯುತ್ತರಅಳಿಸಿ
  2. ಅಬ್ಬಾ ಈ ಸರಕಾರಕ್ಕೆ ಎಷ್ಟು ಧೈರ್ಯ! ರೈತರ ಬೀಜಕ್ಕೇ ಕೈ ಹಾಕಿದ್ದಾರಲ್ಲಾ. ಅದಿರ್ಲಿ ಈ ಕೆಲಸ ಮಾಡಿರೋದು ಬರಿಯ ಕರ್ನಾಟಕ ಸರ್ಕಾರ ಮಾತ್ರ ತಾನೆ. ಸದ್ಯ ನಾನು ಬಚಾವಾದೆ. ಕೃಷಿ ಕಾರ್ಮಿಕರ ತಂಟೆಗೇನಾದರೂ ಹೋದರೆ ನಿಮ್ಮ ಖುಷಿ ಕಡಿಮೆಯಾಗಿ ಋಷಿಯಾಗುವ ಸಾಧ್ಯತೆ ಇದೆ ಎಂಬುದು ನನ್ನ ಅನುಭವದ ಮಾತು. ಇದನ್ನು ನಿಮ್ಮ ಒಳ್ಳೆಯದಕ್ಕೆ ಕಿವಿಯಲ್ಲಿ ಹೇಳುತ್ತಿರುವೆ.

    ೨೦೦೦ ಒದೆತಗಳನ್ನು ತಿಂದ ಸಲುವಾಗಿ ಏನಾದ್ರೂ ವಿಶೇಷ ಅಡುಗೆ ಮಾಡಿ ಉಣಬಡಿಸುವಿರಾ? ಪ್ರತಿ ನಿತ್ಯ ಕಹಿಯುಂಡು ಬಾಯೆಲ್ಲಾ ಕೆಟ್ಟು ಹೋಗಿದೆ. ಸ್ವಲ್ಪ ಮಸಾಲೆ ಬರ್ಲಿ.

    ಪ್ರತ್ಯುತ್ತರಅಳಿಸಿ
  3. ವಿಶ್ವನಾಥ್ ಅವರೆ,
    ಹೊಡೆತ ತಿಂದವರಿಗೇ ಗೊತ್ತು ಅದರ ರುಚಿ ಏನಂತ! ಬಿದ್ದವನ ಮೇಲೆ ಆಳಿಗೊಂದು ಕಲ್ಲು ಎಂಬಂತೆ ನೀವು ಕೂಡ ಹಾರೈಕೆಯ ಕಲ್ಲು ಎತ್ತಾಕಿಬಿಟ್ರಲ್ಲಾ....
    ಅಯ್ಯಯ್ಯೋ....

    ಪ್ರತ್ಯುತ್ತರಅಳಿಸಿ
  4. ಮಾವಿನಯನಸ ಅವರೆ,

    ಹೌದು ಮತ್ತೆ... ಸರಕಾರ ಕೊಡುವ ಬೀಜ ಕೆಟ್ಟು ಹೋದರೆ ಕೃಷಿ ಕಾಯಕ ಕೈಬಿಟ್ಟು ಸರ್ವಸಂಗ ತ್ಯಾಗ ಮಾಡಿ ಋಷಿ ಆಗಬೇಕಾಗುತ್ತದೆ. ನಾನಂತೂ ರೈತರ ಬೀಜಕ್ಕೆ ಕೈಹಾಕುವುದಿಲ್ಲ.

    ಒದೆ ಕೊಟ್ಟಿದ್ದೂ ಅಲ್ಲದೆ, ಈಗ ಮಸಾಲೆ ಬರ್ಲಿ ಅಂತ ಆರ್ಡರ್ ಮಾಡ್ತಿದೀರಲ್ಲಾ... ಸ್ವಲ್ಪ ಎಚ್ಚೆತ್ತುಕೊಳ್ಳಿ ಸ್ವಾಮಿ, ನೀವು ಎಂದಿನಂತೆ(!) ಬಾರ್‌ಗೆ ಬಂದಿಲ್ಲ ಅನ್ನೋದು ನೆನಪಿರಲಿ! ಈಗ ಗಂಟೆ ಎಷ್ಟು ಗೊತ್ತಾ?

    ಮಸಾಲೆಗೆ ಬೇಕಿರುವ ಬೀಜವೆಲ್ಲಾ ಕೆಟ್ಟು ಹೋಗಿದೆ. ನಿಮಗೆ ಮತ್ತೂ ಮಸಾಲೆ ಬೇಕೂಂತಾನೇ ಆದ್ರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹೇಳಿದ ಕಥೆಯ "ಹೋರಿ ಬೀಜ"ವನ್ನು ಪರಿಗಣಿಸಬಹುದು ಅಂತ ನಮ್ಮ ಅಡುಗೆ ಬ್ಯುರೋ ಹೇಳಿದೆ.

    ಪ್ರತ್ಯುತ್ತರಅಳಿಸಿ
  5. ಇದು 'ಬೀಜ ಮೊದಲೋ ಸಸಿ ಮೊದಲೋ?' ಸಮಸ್ಯೆಗಿಂತಲೂ ಜಟಿಲವಾದದ್ದಾಯ್ತಲ್ಲ! ಬೀಜಗಣಿತದ x + y = z ಸೂತ್ರವೇನಾದರೂ ಉಪಯೋಗಿಸಿ ಸಮಸ್ಯೆಯನ್ನು ಬಿಡಿಸಬಹುದಾ ನೋಡಿ.

    ಪ್ರತ್ಯುತ್ತರಅಳಿಸಿ
  6. ಜೋಷಿಯವರೆ
    ಬೀಜ ಗಣಿತ (ಅಲ್-ಜೀಬ್ರಾ)ಹುಟ್ಟಿದ್ದೇ ಅಲ್ಜೀರಿಯಾದಲ್ಲಿ ಜೀಬ್ರಾದೊಂದಿಗೆ ಕ್ರಾಸ್ ಪಾಲಿನೇಶನ್ ಮಾಡುವ ಮೂಲಕದಿಂದ.

    ನಿಮ್ಮ ಸೂತ್ರದಂತೆ ಇಲ್ಲಿ ಮಿಸ್ಟರ್ x ಯಾರೆಂದು ಗೊತ್ತಿಲ್ಲವಾದುದರಿಂದ ಮತ್ತು ಇದು ರೈತರ ಬೀಜದ ವಿಷಯವಾದುದರಿಂದ m=ec2 (e=mc2 ಅಲ್ಲ!) ಸೂತ್ರ ಬಳಸಬಹುದು. (m=money, ec2=easy square!)

    ಪ್ರತ್ಯುತ್ತರಅಳಿಸಿ
  7. ರೈತರ ಬೀಜ ಕಸಿಯುವ ಹಕ್ಕು ಯಾರಿಗೂ ಇಲ್ಲ. ಆದರೆ ಆಗಿರುವುದು ಏನು ? ಹತ್ತಿಯ ಬೀಜವನ್ನೆ ತೆಗೆದುಕೊಳ್ಳಿ. 'ಮೊನ್ಸ್ಯ್ಯಾಂಟೊ' ಬೀಜಗಳಲ್ಲದೆ ಬೇರೆ ಉಪಾಯವಿಲ್ಲ. ಸರಕಾರ ಮಾಡುವ ಕೆಲಸ ಜವಾಬ್ದಾರಿಯಿಂದ ಮಾಡದಿರುವುದೇ ಇದಕ್ಕೆ ಕಾರಣ ! ಸರಕಾರದ ಎಲ್ಲಾಕೆಲಸಗಳೂ ಹೀಗೆಯೆ ಇವೆ ! ವಿಧಿಯಿಲ್ಲ. ಜನಗಳೂ ರೈತರನ್ನು 'ಬಲಿಪಶು' ಗಳಂತೆ ಉಪಯೋಗಿಸುತ್ತಿದ್ದಾರೆ.

    ಪ್ರತ್ಯುತ್ತರಅಳಿಸಿ
  8. ನಿಮ್ಮ ಬ್ಲಾಗಿಗೆ ೨೦೦೦ ಒದೆತ ಬಿದ್ದಿದ್ದಿಕ್ಕೆ ನನ್ನ ಒಂದು ಒದೆತನೂ ಕಾರಣ ಆದ್ದ್ರಿಂದ ನನ್ಗೂ ಏನಾದ್ರು ಉಣಿಸಿರಪ್ಪ

    ಪ್ರತ್ಯುತ್ತರಅಳಿಸಿ
  9. ನಾನು 'ಬೀ.ಟಿ.ಹತ್ತಿಬೆಳೆ'ಯ ಬಗ್ಯೆ ಒಂದು ಲೇಖನ ಬರೆದಿದ್ದೆ. ನೋಡಿ.(ಸಂಪದದಲ್ಲಿ)ಬೀಜಗಳ ಬಗ್ಯೆ ಒಂದು ಸಮಸ್ಯೆಯಾದರೆ, 'ಕಲಬೆರಕೆ ಬೀಜಗಳ' ವ್ಯಾಪಾರವನ್ನು ಸರಕಾರ ನಿಲ್ಲಿಸಿಲ್ಲ. 'ರೈತನ ಬವಣೆಯನ್ನು ಬಲ್ಲವನು ರೈತನೇ.' ನಾನು ಐ.ಸಿ.ಎ.ಆರ್. ನಲ್ಲಿ ಕೆಲಸ ಮಾಡಿ ಅದನ್ನು ತೀರ ಹತ್ತಿರದಿಂದ ಗಮನಿಸಿದ್ದೇನೆ. ಒಂದಲ್ಲಾ ಎಂದರೆ ನೂರು 'ಲೂಪ್ ಹೋಲ್' ಇರುವ ಸರಕಾರದ ನೀತಿಯನ್ನು ಹೇಗೆ ವಿವರಿಸಬೇಕೋ ಗೊತ್ತಿಲ್ಲ. ಅನುಸಂಧಾನ ಮಾಡಿ ತೋರಿಸಿದರೆ ಸಾಲದು.ಕೊಆರ್ಡಿನೇಶನ್ ಇಲ್ಲ. ಕೃಷಿಯಂತಹ ಬೃಹತ್ ಉದ್ಯಮವನ್ನು ಸರಿಯಾಗಿ ನಡೆಸದಿದ್ದರೆ ದೇಶಕ್ಕೆ ಕ್ಷೇಮವಿಲ್ಲ. "ಇಷ್ಟು ನನ್ನ ಕೆಲಸ;ಅದು ನನ್ನ ವ್ಯಾಪ್ತಿಗೆ ಸೇರಿದ್ದಲ್ಲ". ಹೀಗೆ ಕಣ್ಣು ಮುಚ್ಚಾಲೆ ನಡೆಯುತ್ತಿದೆ. ಯಾರೂ ಯಾವುದಕ್ಕೂ ಸಂಪೂರ್ಣ ಜವಾಬ್ದಾರರಲ್ಲ ! ಇದೇ ನೋಡಿ ಎಲ್ಲಾ ಸಮಸ್ಯೆಗಳ ಮೂಲ !

    ಪ್ರತ್ಯುತ್ತರಅಳಿಸಿ
  10. ವೆಂಕಟೇಶ್ ಅವರೆ, ಬ್ಲಾಗಿಗೆ ಇಣುಕಿದ್ದಕ್ಕೆ ಧನ್ಯವಾದ.
    ನಿಮ್ಮ ಕಾಳಜಿ ನಮಗರ್ಥವಾಗುತ್ತೆ. ಮೊನ್ಸಾಂಟೋ ಬೀಜ ಬಳಸಿ ನಮ್ ರೈತರು ಸೊಂಟ ಮುರಿಸಿಕೊಂಡರೂ ಸರಕಾರಕ್ಕೆ "ಮನಿ"ಗಂಟೋ ಮೇಲೇ ಕಣ್ಣು ಇರುವುದರಿಂದ ಏನೂ ಮಾಡಕ್ಕಾಗಲ್ಲ.

    ಮತ್ತೆ, ಕೃಷಿಯೇ ದೇಶದ ಬೆನ್ನೆಲುಬು ಅಂತ ವಾದಿಸಿದ ದೇಶ ನಮ್ಮದು. ಈಗ ದೇಶದ ಬೆನ್ನೆಲುಬು ಮುರಿದು ಅದನ್ನು ಮಾರಿ ತಿನ್ನುವಂತವರೇ ಹೆಚ್ಚಿರುವಾಗ ಸರಕಾರವನ್ನು ದೂರಿ ಪ್ರಯೋಜನವಿಲ್ಲ. ಯಾಕಂದ್ರೆ ಸರಕಾರಕ್ಕೂ ಬೇಜವಾಬ್ದಾರಿ ಅನ್ನೋದಿದೆಯಲ್ಲ. ಸರಕಾರದಲ್ಲೂ ಬೆನ್ನೆಲುಬಿಲ್ಲದವರೇ ಇದ್ದಾರಲ್ಲ...!

    ಪ್ರತ್ಯುತ್ತರಅಳಿಸಿ
  11. ಕಾರ್ತಿಕ್ ಅವರೆ,
    ನಿಮ್ಮ ಅಮೂಲ್ಯ ಒದೆತದಿಂದಲೇ 2k ಪೂರ್ಣಗೊಂಡಿತು ಅಂತ ಹೇಳಲು ಹೆಮ್ಮೆಯಾಗುತ್ತಿದೆ. ಇದಕ್ಕಾಗಿ I............ Scream....! ಇ-ಮೇಲ್ ಮೂಲಕ ರವಾನಿಸಿದ್ದೇನೆ. ಅದರ ಅವಶೇಷಗಳು ದೊರಕಿರಬಹುದೆಂದು ನಂಬಿದ್ದೇನೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D