ಬೊಗಳೆ ರಗಳೆ

header ads

ಆಗಸದಲ್ಲಿ ಆಲ್-ಕೋಲಾಹಲ!

(ಬೊಗಳೂರು ಅಮಲು ಬ್ಯುರೋದಿಂದ)
ಬೊಗಳೂರು, ಜು.15- ದೇಶದಲ್ಲಿ ಅಲ್-ಖಾಯಿದಾ ಉಗ್ರರಿಂದಾಗಿ ದೇಶಾದ್ಯಂತ ಆಲ್-ಕೋಲಾಹಲ ಎದ್ದಿದ್ದರೆ, ಇನ್ನೊಂದೆಡೆ Unprecedented Price Agenda ಹೊತ್ತಿರುವ ಕೇಂದ್ರ ಸರಕಾರದ ನೀತಿಗಳಿಂದಾಗಿ ಕೋಲಾಹಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಲ್-ಕೋಲಾಹಲಕ್ಕೂ ಕೋಲಾಹಲಕ್ಕೂ ಮತ್ತು ಆಲ್ಕೋಹಾಲಿಗೂ ಸಂಬಂಧವಿದೆಯೇ ಎಂದು ಅನ್ವೇಷಿಸಲು ಹೊರಟಾಗ ಹೇಳಬಾರದ ಅಸತ್ಯಗಳು ಆಗಸದಿಂದ ಕೆಳಗುರುಳಿದವು.
 
ಈ ಸರಕಾರವನ್ನು ನಡೆಸುತ್ತಿರುವ ನಿಧಾನಿ ಆಲ್-ಕೋಲಾಹಲಕ್ಕೀಡಾಗಲು ಹೊರಟಿದ್ದೇ ಇವೆಲ್ಲವುಗಳಿಗೆ ಮೂಲ ಕಾರಣ ಎಂಬುದು ಇಲ್ಲಿ ಪತ್ತೆಯಾಗಿದೆ.
 
ಸರಕಾರವು ಜೀವನಾವಶ್ಯಕ ವಸ್ತುಗಳ ಬೆಲೆಗಳನ್ನು ಯಾರ ಕೈಗೂ ಎಟುಕದಷ್ಟು ಮೇಲೇರಿಸಿರುವುದರಿಂದ ಈ ಬೆಲೆಗಳು ಆಗಸದಲ್ಲಿ ಎಲ್ಲಾದರೂ ಗೋಚರಿಸುತ್ತದೋ ಎಂದು ತಿಳಿದುಕೊಳ್ಳುವ ಸಲುವಾಗಿಯೇ ನಿಧಾನಿ ಅವರು ಇತ್ತೀಚೆಗೆ ಜರ್ಮನಿ ಭೇಟಿಯ ವೇಳೆ ಉದ್ದೇಶಪೂರ್ವಕವಾಗಿಯೇ ವಾಯು ಮಾರ್ಗದಲ್ಲಿ ಪ್ರಯಾಣಿಸಿದ್ದರು.
 
ಸಾಧ್ಯವಾದಲ್ಲಿ ಗಗನಕ್ಕೇರಿರುವ ಬೆಲೆಗಳನ್ನು ಹಿಡಿದು ಕೆಳಗೆ ತರೋಣ ಎಂದುಕೊಂಡಿರಬಹುದು ಅವರು. ಆದರೆ ಗಗನ ಯಾತ್ರೆಗೆ ಹೋದಾಗ ಅವರಿಗೆ ತಲೆ ತಿರುಗಿದರೆ ಎಂಬ ಆತಂಕ ಅವರ ಹಿಂಬಾಲಕರಿಗೆ. ಈ ಕಾರಣಕ್ಕೆ ತಿರುಗಿದ ತಲೆಯನ್ನು ಸರಿಪಡಿಸಲೋಸುಗ ಅವರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸಾಕಷ್ಟು ಮದ್ಯದ ಬಾಟಲಿಗಳಿದ್ದವು.
 
ಈ ಮದ್ಯದ ಬಾಟಲಿಗಳು ಎಲ್ಲರ ಕೈಗೆಟುಕುವಂತೆ ಮಧ್ಯದಲ್ಲೇ ಇದ್ದರೂ ಅದು ಹೇಗೋ ಆಲ್-ಕೋಲಾಹಲಿಗರು ಇದನ್ನು ಪತ್ತೆ ಮಾಡಿದ್ದರು. ಅಷ್ಟರಲ್ಲಿ ಬಹುಶಃ ಅಲ್ಲಿ ಅವರಿಗೆ ಭಾರತದಿಂದ ಗಗನಕ್ಕೇರಿದ ಬೆಲೆಗಳು ಕಾಣಿಸಿರಬೇಕು. ಆಗ ಕಣ್ಣು ಕತ್ತಲೆ ಕವಿದು ತಲೆ ತಿರುಗಿದಂತಾಗಿರಬೇಕು. ತಿರುಗಿದ ತಲೆಯನ್ನು ಮತ್ತೆ 360 ಡಿಗ್ರಿ ತಿರುಗಿಸಿ ಪೂರ್ವಸ್ಥಿತಿಗೆ ಮರಳಿಸುವ ಯೋಚನೆಯಲ್ಲಿ ಅವರು ಮಧ್ಯದಲ್ಲಿದ್ದ ಮದ್ಯವನ್ನು ಸುರುವಿಕೊಳ್ಳಲೆಂದು ಬಾಟಲಿಯ ಮುಚ್ಚಳವನ್ನು ತಿರುವಿರಬೇಕು.
 
ಕುಡಿದು ಅಮಲೇರಿದಾಗ ಮದ್ಯದ ಬಾಟಲಿಗಳಿಗಾಗಿ ಕಿತ್ತಾಟ ಆಗಿರಬೇಕು, ಮದ್ಯ ಸಿಗದವನೊಬ್ಬ ಇಷ್ಟು ಸಮಯದವರೆಗೂ ಕೊರಗುತ್ತಾ ಕೊರಗುತ್ತಾ ಸೋತು ಸುಣ್ಣವಾದಾಗ ಕೊನೆಗೊಂದು ನಿರ್ಧಾರಕ್ಕೆ ಬಂದು "ಮದ್ಯ ಎಲ್ಲಿ" ಎಂಬ ಬಾಂಬ್ ಸಿಡಿಸಿದ್ದಾನೆ. ಅಲ್ಲಿಗೆ ತನಿಖೆ ಆರಂಭವಾಗಿದೆ.
 
ಪ್ರಧಾನಿಯಿರುವ ವಿಮಾನದಲ್ಲಿ ಮದ್ಯವೇಕೆ, ಪ್ರಧಾನಿ ಮಾತ್ರವೇ ವಿಮಾನದೊಳಕ್ಕೆ ಮದ್ಯ ಹೊತ್ತೊಯ್ಯಬಹುದೇ, ಪ್ರಧಾನಿಗೊಂದು ನೀತಿ, "ಮದ್ಯ"ಮ ವರ್ಗದವರಿಗೊಂದು ನೀತಿ ಸರಿಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಾನ್ವೇಷಣೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

13 ಕಾಮೆಂಟ್‌ಗಳು

  1. madya elli anno tanikena madya ilasi madyadalli kiabidabaradu !!!
    e madya hotteyalli ilid takshan ellaru tavu agasdalli idivi anta tiltare...adakke irabeku i kolhal...

    ಪ್ರತ್ಯುತ್ತರಅಳಿಸಿ
  2. ಅಸತ್ಯಿಗಳೇ,

    ಪ್ರಧಾನಿಗಳಿಗೆ ಮಾತ್ರ ವಿಮಾನದಲ್ಲಿ ಮದ್ಯ ಅಂತಾ ಯಾರೀ ಹೇಳಿದ್ದು.ಈಗ ಎಲ್ಲೆಲ್ಲೂ ಆಕಾಶಯಾನದಲ್ಲಿ ಮದ್ಯ ಹರಿಸಲು ತಯಾರಿದ್ದಾರೆ.ಮದ್ಯದ ಕಂಪೆನಿಯ ಎರೋಪ್ಲೆನ್‍ಗಳು ಓಡಾಡುವ ಈ ಕಾಲದಲ್ಲಿ ಆಕಾಶದಲ್ಲಿ ತೇಲಿಸೋಕೆ ನಾ ಮುಂದು ತಾ ಮುಂದು ಅಂತಾ ಎರ್‍ವೇಸ್‍ಗಳು ಕಾಯ್ತಿರುತ್ತವೆ.

    ಇನ್ನು ಪ್ರಧಾನಿ ಮದ್ಯ ಕದ್ದರೆ ಅದು ಸುದ್ದಿಯಾಗಬೇಕೇ? ಅದು ಬಾಟೆಲ್‍ಗಳ ಬಟಾವಣೆಯಲ್ಲಿ ಜಗಳವಾಗಿ ಆಕಾಶದಿಂದ ಸುದ್ದಿ ಇಲ್ಲಿಗೆ ಇಳಿದಿದೆ.ಇಲ್ಲವಾದರೆ ಇಷ್ಟು ವರ್ಷಗಳಿಂದ ಸುಗಮವಾಗಿ ನಡೆದು ಬರುತ್ತಿದ್ದು ಈಗ ನಿಮ್ಮ ಕಣ್ಣಿಗೆ ಹೇಗೆ ಬಿತ್ತು?

    ಪ್ರತ್ಯುತ್ತರಅಳಿಸಿ
  3. ಹಲೋ ಬೊಗಳೇಶ್, ನೀವು ಆಲ್ಕೋಹಾಲಿಗೂ ಅಲ್-ಖೈದಾಗೂ ಸಂಬಂಧ ಕಲ್ಪಿಸುತ್ತಿದ್ದೀರಾ. Al-Qaeda is the regular customer of our Mental Dot Com. ನೀವು ಇನ್ನೊಮ್ಮೆ ಅಲ್-ಖೈದಾ ಬಗ್ಗೆ ಇಲ್ಲಸಲ್ಲದ್ದು ಪ್ರಸ್ತಾಪ ಮಾಡಿದಲ್ಲಿ ನಿಮಗೆ ಹತ್ತಿರುವ ಅಮಲನ್ನು ಇಳಿಸಬೇಕಾಗುತ್ತದೆ.

    ಪ್ರತ್ಯುತ್ತರಅಳಿಸಿ
  4. ಕ್ಯಾಬಿನ್ ಕೃ, ಎಣ್ಣೆ ಲಪಟಯ್ಸಿರೋದರ ಬಗ್ಗೆ ಗುಮಾನಿ ಮೂಡಿರೋದು ಒಳ್ಳೆದೆ ಆಯ್ತು. ಇಲ್ ದಿದ್ರೆ ಇದು ಭೂತ ಚೇಶ್ಟೆ ಅಂತ ನಮ್ಮ ಮೇಲೆ ಮಿತ್ಯರೋಪ ಬರ್ತ ಇತ್ತು. ಸದ್ಯ, ಭೂತಗಳು ಈ ವಿಶಯದಲ್ಲಿ ನಿರಾತಂಕವಾಗಿ ಓಡಾಡಬೊಹುದು.

    ಇಂತಿ
    ಭೂತ

    ಪ್ರತ್ಯುತ್ತರಅಳಿಸಿ
  5. ಗುರ್ಗಾಂವ್‌ನಿಂದ ಗುರಾಯಿಸುವ ಮಹಾಂತೇಶರೇ,

    ಆಕಾಶದ ಮಧ್ಯದಲ್ಲೇ ಮದ್ಯವನ್ನು (ಹೊಟ್ಟೆಗೆ) ಇಳಿಸಿದರೆ ಮಾತ್ರ ತನಿಖೆ ಪೂರ್ತಿಯಾಗುತ್ತದೆ.

    ಮತ್ತೆ ಮದ್ಯ ಇಳಿದ ತಕ್ಷಣ ಅಮಲು ಏರುತ್ತದೆ, ಇದರಿಂದ ಆಗಸದಲ್ಲೇ ಇರುವಂತಾಗುತ್ತದೆ ಎಂಬ ನಿಮ್ಮ ಅನುಭವ ನಮಗೂ ಹಿತಾನುಭವ ನೀಡಿತು.!

    ಪ್ರತ್ಯುತ್ತರಅಳಿಸಿ
  6. ಶಿವ್ ಅವರೆ,
    ಗಣ್ಯರು ಅಂತ ಅನಿಸಿಕೊಂಡವರ ಎಲ್ಲಾ ಕಾರ್ಯಕ್ರಮಗಳ ಮಧ್ಯ ಮಧ್ಯ ಮದ್ಯ ಬೇಕೇ ಬೇಕು ಅನ್ನೋದು ಹೌದು.

    ಮತ್ತೆ ನೀವು ಹೇಳಿದಂತೆ ಮದ್ಯದ ಕಿಂಗ್‌ಗಳು ಫಿಶ್‌ಗಳನ್ನು ಹುಡುಕುತ್ತಾ ಆಗಸದಲ್ಲಿ ಹಾರಾಡುತ್ತಿರುವಾಗ ಜಗತ್ತಿನ ಸರ್ವರೂ ತೇಲಾಡುವ ದಿನಗಳು ದೂರವಿಲ್ಲ.

    ಆಮೇಲೊಂದು ಮಾತು. ಬಾಟಲಿಗಳ ಬಟಾವಣೆಯಲ್ಲಿ ನನಗೆ ಪಾಲು ದೊರೆತಿಲ್ಲ ಅಂತ ನಾನು ತನಿಖೆಗೆ ಮುಂದಾಗಿಲ್ಲ ಅನ್ನೋದು ನೆನಪಿರಲಿ. !!!!!

    ಪ್ರತ್ಯುತ್ತರಅಳಿಸಿ
  7. ಯಾರೀ ಮೆಂಟಲಾನಂದ ಸ್ವಾಮೀಜಿ ? ನಮಗಿಂತ ದೊಡ್ಡ ಮೆಂಟಲ್ ಯಾರು ಎಂಬುದರ ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ, ಅಲ್-ಕೋಲಾಹಲಕ್ಕೋಸ್ಕರ ನಮ್ಮ ಮೇಲೆ ಅಲ್-ಖಾಯಿದಾವನ್ನು ತೂರಿ ಬಿಡೋದನ್ನು ನಮಗೆ ತಡೆದುಕೊಳ್ಳಲಾಗುತ್ತಿಲ್ಲ.

    ಅದಕ್ಕಾಗಿ ಈಗಲೇ ಒಂದಿಷ್ಟು ಅಮಲೇರಿಸಲು ಹೊರಟಿದ್ದೇವೆ. ದಯವಿಟ್ಟು ಇಳಿಸಬೇಡಿ. ಬೇಕಿದ್ರೆ ನೀವು ಬಂದುಬಿಡಿ. ಬಂದ್ರೆ ನೋಡುತ್ತಾ ಕೂರಬೇಕಷ್ಟೆ. ಬಾಟಲಿಗೆ ಕೈಹಾಕಿದ್ರೆ ಜೋಕೆ!!!!

    ಪ್ರತ್ಯುತ್ತರಅಳಿಸಿ
  8. ಓ ಭೂತವೆ,

    ತನಿಖೆ ವೇಳೆ ನಿಮ್ಮ ಹೆಸರೂ ಸೇರಿಸಬೇಕೆಂಬ ನಿಮ್ಮ ಇಂಡೈರೆಕ್ಟ್ ಒತ್ತಾಯಕ್ಕೆ ನಾವು ಅ(ಮಲು)ಭಾರಿಯಾಗಿದ್ದೇವೆ.

    ಭೂತ ಚೇಷ್ಟೆಗೇ ಜೈಲಾಗಲಿ...!!!!

    ಪ್ರತ್ಯುತ್ತರಅಳಿಸಿ
  9. ನಾನು ಒಂದೆರಡು ದಿನ ಈ ಕಡೆ ಬರಲಿಲ್ಲಾಂತ ನಮ್ಮೋರ ಬಗ್ಗೆ ಏನೇನೋ ಬರೀತಿದ್ದೀರಾ? ಅಲ್-ಬಕ್ರಾಗಳಿಗೆ ನಿಮ್ಮ ಮೇಲೆ ಕಂಪ್ಲೇಂಟ್ ಕೊಡ್ತೀನಿ. ಈಗ ಸಮಯವಿಲ್ಲ, ಆಮೇಲೆ ಬಂದು ಒಂದು ಕೈ ನೋಡಿಕೊಳ್ತೀನಿ (ಇನ್ನೊಂದು ಕೈ ಸರಿ ಇಲ್ಲ ಅದಕ್ಕೇ).

    ಪ್ರತ್ಯುತ್ತರಅಳಿಸಿ
  10. ಮಾವಿನರು ರಸಾಯನ ಹಾಕದೆ ಬೊಗಳೆ ಸಪ್ಪೆಯಾಗಿದೆ ಅಂತ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ನೀವು ಅಡಗಿದ್ದ ಬಿಲದಿಂದ ಎಬ್ಬಿಸಲು ಈ ರೀತಿಯಾದರೂ ಹೊಗೆ ಹಾಕಬೇಕಾಯಿತು.

    ಅಂತೂ ಹೊರಗೆ ಬಂದ್ರಲ್ಲಾ....

    ಇನ್ನೊಂದು ಕೈ ಯಾರಿಗೆ ಕೊಟ್ರಿ?

    ಪ್ರತ್ಯುತ್ತರಅಳಿಸಿ
  11. ಇನ್ನೊಂದು ಕೈ ಯಾರಿಗೂ ಕೊಟ್ಟಿಲ್ಲ. ಅದು ಉಕ್ಕಿನ ಕೈ. ಅದನ್ನು ಹಿಡಿಯಲು, ಕುಲುಕಲು ಯಾರೂ ತಯಾರಿಲ್ಲ.

    ಪ್ರತ್ಯುತ್ತರಅಳಿಸಿ
  12. ಯಾರೋ ನಿಮ್ಮ ಕೈ ಹಿಡಿದಿದ್ದಾರೆ ಅಂತ ಕೇಳಿದ್ದೆ. :)

    ಪ್ರತ್ಯುತ್ತರಅಳಿಸಿ
  13. Greets to the webmaster of this wonderful site. Keep working. Thank you.
    »

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D