ಬೊಗಳೆ ರಗಳೆ

header ads

'ಕೌನ್ ಬನೇಗಾ ಕಾಮಿಡಿಪತಿ' ಕ್ವಿಜ್ !

(ಬೊಗಳೂರು ಎಲ್ಲಾ ಬಯಲು ಬ್ಯುರೋದಿಂದ)
ಬೊಗಳೂರು, ಜ.2- KBC (ಕೌನ್ ಬನೇಗಾ ಕಾಮಿಡಿಪತಿ) ಸ್ಪರ್ಧೆಯಲ್ಲಿ ಲಾಕ್ ಮಾಡುವವರು ಬದಲಾದ ಹಿನ್ನೆಲೆಯಲ್ಲಿ ದೇಶದಲ್ಲಿ ವಿಚಿತ್ರ ವಿದ್ಯಮಾನಗಳೂ ನಡೆಯುತ್ತಿದ್ದು, ಕೆಬಿಸಿಯಲ್ಲಿ ಕೇಳಬಹುದಾದ ಪ್ರಶ್ನೆ ಪತ್ರಿಕೆ ಬಯಲಾಗಿದೆ. ಈ ಪ್ರಶ್ನೆ ಪತ್ರಿಕೆ ಬೊಗಳೆ ರಗಳೆ ಕೈಗೆ ಸಿಕ್ಕಿದ್ದು, ಅದನ್ನು ಓದುಗರಿಗಾಗಿ ಇಲ್ಲಿ ಬಯಲು ಮಾಡಲಾಗುತ್ತಿದೆ.
ಕ..ಕ..ಕ..ಕ...ಕೌನ್ ಬನೇಗಾ ಕ...ಕ...ಕ...ಕ...ಕಾಮಿಡಿಪತಿ ಪ್ರಶ್ನೆ ಪತ್ರಿಕೆಯ ಪ್ರಮುಖ ಪ್ರಶ್ನೆಗಳು ಈ ರೀತಿಯಾಗಿರುತ್ತವೆ.
 
1. ಕ್ಲೂ: ಇದು ಎಡಪಕ್ಷಗಳಿಗೆ ಕೇಳಲಾಗುವ ಪ್ರಶ್ನೆ.
ಮುಷ್ಕರ ಅಂದರೇನು?
ಎ) ವೇತನಸಹಿತ ರಜಾದಿನ
ಬಿ) ಉಸಿರಿನಷ್ಟೇ ನೈಸರ್ಗಿಕವಾದ ಒಂದು ಕ್ರಿಯೆ
ಸಿ) ಇದನ್ನು ಮಮತಾ ಬ್ಯಾನರ್ಜಿಯಂಥವರು ನಕಲಿ ಹೊಡೆದರೆ ಅದನ್ನೇ ನಾಚಿಕೆಗೇಡಿನ ಸಂಗತಿ ಎಂದು ಹೇಳಲಾಗುತ್ತದೆ.
ಡಿ) ನೀವು ಯಾವತ್ತೂ ಮಾಡುತ್ತಿರುವುದನ್ನು ಜನತೆ ಮಾಡುವಂತೆ ಪ್ರೇರೇಪಿಸುವುದು. (ಅಂದರೆ ಏನೂ ಇಲ್ಲ!)
ಯಾವ ಮಿತ್ರನಿಗೆ ಫೋನ್ ಕರೆ ಮಾಡಲು ಬಯಸುತ್ತೀರಿ?
ಮನಮೋಹನ್ ಸಿಂಗ್‌ಗೆ ಖಂಡಿತಾ ಬೇಡ ಎಂಬ ಉತ್ತರ.

2. ಜನತಾ ದಳ ಎಂಬ ವಿದಳನಾ ಪಕ್ಷಕ್ಕೆ ಕೇಳುವ ಪ್ರಶ್ನೆ.
ಪಕ್ಷ ಎಂದರೇನು?
ಎ) ಅವಕಾಶಕ್ಕಾಗಿ ಹಾತೊರೆಯುತ್ತಾ ಅದು ಸಿಕ್ಕಿದ ತಕ್ಷಣ ಒಡೆದು ಚೂರಾಗುವುದು.
ಬಿ) ಅಧಿಕಾರಕ್ಕಾಗಿ ಚೌಕಾಶಿಯ ಪ್ರಧಾನ ಅಸ್ತ್ರ
ಸಿ) ಪರಮಾಣುವಿಗಿಂತಲೂ ಕಿರಿದಾದ ಗಾತ್ರದಷ್ಟಕ್ಕೆ ಒಡೆಯಬಲ್ಲ ಒಂದು ವೈಜ್ಞಾನಿಕ ಅದ್ಭುತ
ಡಿ) ಚುನಾವಣೆಗಳು ಬಂದಾಗ ರಾಜಕಾರಣಿಗಳು ಅತ್ಯಂತ ಇಷ್ಟಪಡುವ ವಸ್ತು
ಯಾವ ಮಿತ್ರನಿಗೆ ಕರೆ ಮಾಡಲು ಬಯಸುತ್ತೀರಿ?
ರಾಜಕೀಯದಲ್ಲಿ ಯಾರು ಕೂಡ ಯಾವಾಗ ಬೇಕಾದರೂ ಮಿತ್ರರಾಗಬಹುದು, ಶತ್ರುಗಳೂ ಆಗಬಹುದು. ಹಾಗಿರುವುದರಿಂದ ಯಾರಿಗೆ ಬೇಕಾದರೂ ಕರೆ ಮಾಡುತ್ತೇವೆ!

3. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಗೆ ಪ್ರಶ್ನೆ.
ತಮಿಳು ಅಂದರೇನು?
ಎ) ಚಿತ್ರೋದ್ಯಮಕ್ಕೆ ತೆರಿಗೆ ಉಳಿಸುವ ಒಂದು ಅಸ್ತ್ರ
ಬಿ) ಅಕ್ಷರಗಳು, ಉಚ್ಚಾರಣೆಗಳು ಕಡಿಮೆ ಇದ್ದರೂ ಶಾಸ್ತ್ರೀಯ ಭಾಷೆ ಸ್ಥಾನಕ್ಕೆ ಅರ್ಹವಾದ ಸಂಗತಿ
ಸಿ) ಆಂಗ್ಲ ಹೆಸರುಳ್ಳ ತಮ್ಮ ಕೌಟುಂಬಿಕ ಒಡೆತನದ ಚಾನೆಲ್‌ನಲ್ಲಿ ಕಡಿಮೆ ಬಳಸಲಾಗುವ ಭಾಷೆ
ಡಿ) ತಮಿಳುನಾಡಿನಾದ್ಯಂತ ಇದೇ ಚಾನೆಲನ್ನೇ ಬಲವಂತವಾಗಿ ನೋಡಬೇಕಾಗಿರುವುದರಿಂದ ತಮಿಳು ಬಗ್ಗೆ ಯೋಚಿಸಲು ಯಾರಿಗಾದರೂ ಸಮಯವೆಲ್ಲಿದೆ?
ಯಾರಿಗೆ ಫೋನ್ ಮಾಡಲು ಬಯಸುತ್ತೀರಿ?
ತಮಿಳು ಕುರಿತಾಗಿ ವಿಶೇಷಣ ಸೇರಿಸಿ ಮಾತನಾಡುವ ಯಾರಿಗಾದರೂ ಸೈ!

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಎಲ್ಲ ಪ್ರಶ್ನೆಗಳಿಗೂ ನನಗೆ ಉತ್ತರ ಗೊತ್ತು. ಆದರೆ ಪುಕ್ಕಟೆಯಾಗಿ ಚೆನ್ನೈನಲ್ಲಿರುವ ನನ್ನ ಸ್ನೇಹಿತರೊಂದಿಗೆ ಫೋನ್ ಮಾಡುವ ಸಂದರ್ಭವನ್ನು ತಪ್ಪಿಸಿಕೊಳ್ಳಲು ಇಷ್ಟವಿಲ್ಲ. ಹಾಗಾಗಿ ಫೋನ್ ಮಾಡುವೆ. ಎಲ್ಲಕ್ಕಿಂತ ಎಷ್ಟು ಹಣವನ್ನು ಬಹುಮಾನವಾಗಿ ಕೊಡುವಿರಿ ಎಂದು ತಿಳಿಸಿದರೆ ನಾನು ಈಗಲೇ ಉತ್ತರಿಸುವೆ. ತಿಳಿಸದಿದ್ದರೆ ಗೊತ್ತಲ್ಲ, ನಿಮ್ಮ ತಲೆ ...

    ಪ್ರತ್ಯುತ್ತರಅಳಿಸಿ
  2. ಮಾವಿನರಸರೆ,
    ಉತ್ತರ ಗೊತ್ತಿದ್ದರೆ ನೀವೇ ಹೇಳಿಬಿಡಿ. ಯಾಕೆಂದರೆ ಇಲ್ಲಿ ಹಣದುಬ್ಬರ... ಅಲ್ಲಲ್ಲ ಹಣದ ಇಳಿತ ಜಾಸ್ತಿಯಾಗಿದೆ. ಬಹುಮಾನ ಎಷ್ಟಿದ್ದರೂ ನಿಮಗೆ ಅದರ 0.5 ಶೇ. ಪಾಲು ಕೊಡಲಾಗುತ್ತದೆ. ಉಳಿದದ್ದೆಲ್ಲಾ ಗುಳುಂಕರಿಸಲಾಗುತ್ತದೆ.

    ಪ್ರತ್ಯುತ್ತರಅಳಿಸಿ
  3. ಅನ್ವೇಷಿಗಳೇ,
    ಉತ್ತರ ಏನೋ ಗೊತ್ತು, ಆದರೆ ನೀವು ಬಹುಮಾನ ಕೊಡ್ತೀರೋ ಎಲ್ಲವೋ ಅನ್ನೋದೇ ಅನುಮಾನ ನನಗೆ! :)

    ಪ್ರತ್ಯುತ್ತರಅಳಿಸಿ
  4. ಅಸತ್ಯಿಗಳೇ,

    ಸೂಪರ್ ಪ್ರಶ್ನೆಗಳು!
    ಇದರಲ್ಲಿ ಆಡಿಯನ್ಸ್ ಪೋಲ್ ಇಲ್ವೆ?

    ಪಕ್ಷ ಅಂದರೇನು :ಹ್

    ಪ್ರತ್ಯುತ್ತರಅಳಿಸಿ
  5. ಶ್ರೀನಿಧಿ ಅವರೆ,
    ನೀವೆಲ್ಲಾದರೂ ಸರಿ ಉತ್ತರ ಹೇಳಿಬಿಡ್ತೀರೋ ಅಂತ ನಮಗೂ ಅನುಮಾನ ಇರುವುದರಿಂದ ಬಹುಮಾನದ ಗಂಟಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲು ಕೇಂದ್ರ ಸರಕಾರಕ್ಕೆ ಸೂಚಿಸಲಾಗಿದೆ.

    ಪ್ರತ್ಯುತ್ತರಅಳಿಸಿ
  6. ಶಿವ್ ಅವರೆ,
    ಆಡಿಯನ್ಸ್ ಪೋಲ್ ಇದೆ. ಆಡಿಯನ್ಸೇ ಎಲ್ಲರನ್ನೂ ಕೇಳುವ ಪ್ರಶ್ನೆ. ಸರಕಾರ ಎಂಬುದು ಇದೆಯೇ? ಇದ್ದರೆ ಯಾರಿಗಾಗಿ ಎಂಬುದೇ ಅವರು ಕೇಳುವ ಪ್ರಶ್ನೆ!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D