ಬೊಗಳೆ ರಗಳೆ

header ads

ಹಲ್ಲಿ(ಇ)ಲ್ಲದ ತಿಂಡಿ ಪತ್ತೆ: ಅಜ್ಞಾನಿಗಳ ಸಾಧನೆ!

(ಬೊಗಳೂರು ಅಜೀವ ವಿಜ್ಞಾನಿ ಮತ್ತು ಸಜೀವ ಅಜ್ಞಾನಿ ತಂಡದ ಮಹತ್ಸಾಧನೆ)
ಬೊಗಳೂರು, ಮೇ 31- ಒರಿಸ್ಸಾದಲ್ಲಿ ಕಾಲಿಲ್ಲದ ಹಲ್ಲಿ ಪತ್ತೆಯಾಗಿದೆ ಎಂಬ ವರದಿಯಿಂದ ಪ್ರಭಾವಿತಗೊಂಡು ಹೋಟೆಲ್ ಹೋಟೆಲ್‌ಗಳಲ್ಲಿ ಶೋಧನೆ ನಡೆಸಿದ ಬೊಗಳೆ ರಗಳೆ ಬ್ಯುರೋಗೆ, ಆಹಾರದಲ್ಲಿ ಕಬ್ಬಿಣ ಸತ್ವ ಚೆನ್ನಾಗಿ ದೊರೆಯುವ ಈ ಕಾಲದಲ್ಲಿ, ಅಲ್ಲಲ್ಲಿ ಹಲ್ಲಿಲ್ಲದ ಮತ್ತು ಹಲ್ಲಿ ಇಲ್ಲದ ತಿಂಡಿಗಳು ಪತ್ತೆಯಾಗಿರುವುದು ವಿಸ್ಮಯಕ್ಕೆ ಕಾರಣವಾಗಿದೆ.

ಜೀವ ವಿಜ್ಞಾನಿಗಳು ದಟ್ಟಡವಿಯಲ್ಲಿ ಕಾಲಿಲ್ಲದ ಹಲ್ಲಿ ಪತ್ತೆ ಮಾಡಿದ್ದರೆ, ನಮ್ಮ ಬ್ಯುರೋ ನಟ್ಟನಗರದಲ್ಲೇ ಈ ರೀತಿಯ ಹಲ್ಲಿಲ್ಲದ ಮತ್ತು ಹಲ್ಲಿಯಿಲ್ಲದ ತಿಂಡಿಗಳನ್ನು ಪತ್ತೆ ಮಾಡಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.

ಕೆಲವೆಡೆ ಹೋಟೆಲುಗಳಲ್ಲಿ ದುಡಿಯುವ ಕಾರ್ಮಿಕರು ಎದುರು ಮಾತನಾಡಿದ್ದಕ್ಕಾಗಿ ಆಗಾಗ ಮಾಲೀಕರು ಅಥವಾ ಸಹೋದ್ಯೋಗಿಗಳಿಂದ ಹಲ್ಲುದುರಿಸಿಕೊಳ್ಳುತ್ತಿದ್ದರು. ಆ ಹಲ್ಲು ನೇರವಾಗಿ ಯಾವುದೇ ತಿಂಡಿಗೋ... ತೀರ್ಥದೊಳಕ್ಕೋ... ಬೀಳುತ್ತಿತ್ತು. ಅಂಥ ವಿದ್ಯಮಾನ ಈಗೀಗ ಸ್ಥಗಿತವಾಗುತ್ತಿರುವುದರಿಂದಾಗಿಯೇ ಹಲ್ಲಿಲ್ಲದ ಆಹಾರ ಪತ್ತೆಯಾಗತೊಡಗಿದೆ ಎಂಬುದನ್ನು ಶೋಧಿಸಲಾಗಿದೆ.

ಅದೇ ರೀತಿ ಹಲ್ಲಿ ಇಲ್ಲದ ಆಹಾರವೂ ಅಲ್ಲಲ್ಲಿ ಕಂಡುಬಂದಿದ್ದು, ಇದನ್ನು ಪತ್ತೆ ಹಚ್ಚಿದವರು ಬೊಗಳೂರು ಬ್ಯುರೋದ ಅಜೀವ ವಿಜ್ಞಾನಿಗಳು ಹಾಗೂ ಸಜೀವ ಅಜ್ಞಾನಿಗಳ ತಂಡ.

ಬೊಗಳೂರಿನ ಹೋಟೆಲೊಂದರಲ್ಲಿ ಇದರ ಮೂಲ ಪತ್ತೆಯಾಗಿದೆ. ಅಲ್ಲಿರುವ ಎಲ್ಲಾ ನೌಕರರಲ್ಲೂ ಹಲ್ಲುಗಳಿರಲಿಲ್ಲ. ಇದರ ಹಿಂದಿನ ಕಾರಣ ಶೋಧಿಸಿದಾಗ ವಿಷಯ ತಿಳಿಯಿತು. ಅಲ್ಲಿದ್ದ ಕಾರ್ಮಿಕರೆಲ್ಲರೂ ಹೋಟೆಲ್ ಮಾಲಿಕರಿಗೆ ಎದುರು ಮಾತನಾಡಿ ತಮ್ಮ ಬಾಯಿಯನ್ನು ಕ್ಲೀನ್ ಮಾಡಿಸಿಕೊಂಡಿದ್ದಾರೆ! ಒಂದೇ ಬಾರಿ ಮಾಡಿಸಿಕೊಂಡಿದ್ದಲ್ಲ, ಕ್ರಮಾನುಗತವಾಗಿ ದಿನಕ್ಕೊಬ್ಬರಂತೆ ಪಾಳಿಗೆ ಅನುಸಾರವಾಗಿ ಒಂದೊಂದೇ ಹಲ್ಲುಗಳು ಉದುರುತ್ತಿದ್ದವು. ಆ ಸಮಯದಲ್ಲಿ ಹೋಟೆಲ್ ಗ್ರಾಹಕರೆಲ್ಲರಿಗೂ ತಿಂಡಿಯ ಜೊತೆಗೆ ಹಲ್ಲು ಉಚಿತವಾಗಿ ದೊರೆಯುತ್ತಿತ್ತು ಎಂದು ನಮ್ಮ ಪ್ರಾಚೀನ ಅಜ್ಞಾನಿಗಳ ತಂಡ ಪತ್ತೆ ಹಚ್ಚಿದ ಅಲಿಖಿತ ಶಾಸನವೊಂದು ಹೇಳುತ್ತದೆ.

ಇಷ್ಟು ಮಾತ್ರವಲ್ಲದೆ, ತಮಗೆ ಪರಿಪೂರ್ಣ ಹಲ್ಲು ದೊರೆಯಲೇ ಇಲ್ಲ, ಒಡೆದು ಚೂರಾದ ಹಲ್ಲು ದೊರೆತಿದೆ ಎಂದು ಕೆಲವರು ಮಾಲೀಕರೊಂದಿಗೆ ಜಗಳ ಮಾಡಿದ ಪ್ರಸಂಗಗಳ ಉಲ್ಲೇಖವೂ ಬೊಗಳೂರಿನಲ್ಲಿ ಪತ್ತೆಯಾದ ಇತಿಹಾಸ ಶಾಸನದಲ್ಲಿ ಇದೆ. ಹಿಂದಿನ ಕಾಲದಲ್ಲಿ ಈ ಊರಲ್ಲಿ ಶಾಸನ ಬರೆದಿಡಲು ಕಬ್ಬಿಣ, ತಾಮ್ರ, ತಾಳೆಗರಿ ಇತ್ಯಾದಿಗಳು ಲಭ್ಯವಿಲ್ಲದ ಕಾರಣದಿಂದಾಗಿ, ಅವುಗಳನ್ನು ಮಂಜುಗಡ್ಡೆಯಲ್ಲಿ ಕೆತ್ತಿ ಇತಿಹಾಸವನ್ನು ಐಸ್ ಶಾಸನದಲ್ಲಿ ಬರೆದಿಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಹೀಗಾಗಿ ಗ್ರಾಹಕರ ತಗಾದೆ ಹೆಚ್ಚಾದ ಕಾರಣದಿಂದ ಹೋಟೆಲ್ ಮಾಲೀಕರು ಹಲ್ಲಿಲ್ಲದವರನ್ನಷ್ಟೇ ಕೆಲಸಕ್ಕೆ ತೆಗೆದುಕೊಳ್ಳಲಾರಂಭಿಸಿದರು. ಹಲ್ಲಿದ್ದವರು ಬಂದರೆ ಹಲ್ಲು ಒಪ್ಪಿಸಲು ಸಲಹೆ ನೀಡುತ್ತಿದ್ದರು. ಕ್ರಮೇಣ ಇದು ಮುಂದುವರಿದು, ಹೋಟೆಲಿನ ತಿಂಡಿಯಲ್ಲಿ ಹಲ್ಲೇ ದೊರೆಯದಂತಹ ಪರಿಸ್ಥಿತಿ ಬಂದಿತ್ತು. ಇದರಿಂದಾಗಿ ಆ ಹೋಟೆಲಿಗೆ "ಹಲ್ಲಿಲ್ಲದ ಲಂಚ ಹೋಮ" ಎಂದು ಹೆಸರಿರಿಸಲಾಗಿದೆ ಎಂಬ ನಾಮಕರಣ ಮೂಲವನ್ನೂ ಬೊಗಳೆ ರಗಳೆ ಪತ್ತೆ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಬೊಗಳೂರಿನ ಹೊಟೆಲ್ಲುಗಳ ತಿಂಡಿಗಳಲ್ಲಿ ಈಗ ಸಿಗುತ್ತಿರುವದು
    ಗಿರಾಕಿಗಳದೇ ಹಲ್ಲುಗಳು ಎಂದು ವದರಿಗಾರರು ಹೇಳುತ್ತಿಲ್ಲವಂತೆ!

    ಪ್ರತ್ಯುತ್ತರಅಳಿಸಿ
  2. ನಿಮ್ಮ ಬ್ಲೋಗು ರೂಮಾಂಚಲಕಾರಿ ಯಾಗಿದ್ದು ನನಗೇನೆಂದರೆ, ಅಸೂಯೆ ಹುಟ್ಟುತಿದೆ. ನಾನು ನಿಮ್ಮನು ಕೇಳುವುದು ಇಷ್ಟೇ. ಬೆಂಗಳೂರಿನ ಹೋಟಲುಗಾರ ನಾಡ ನಾನು ಈ ವಿಷಯವನ್ನು ಸಂಪೂರ್ಣ ವಾಗಿ ಒಪ್ಪುವುದಿಲ್ಲ! ನೀವು ಹೇಳುವುದು ತಪ್ಪು!
    ಅದು ಇರಲಿ , ಅಸತ್ಯದ ಬ್ಲೋಗೇ ತಾನೆ ;)) ಆದರಿನ್ನೊಂದು, ಹಳ್ಳಿಗಳಲ್ಲ ವಲ್ಲ!

    ಪೂರ್ತಿಯಾಗಿ ವಿಷಯವನ್ನು ಬದಲಾಯಿಸುವುದೇ ಆದರೆ... ನೀವು ನಿಮ್ಮ ಬ್ಲೋಗಿನ ಬರುವಿಕೇಅನ್ನು ಮಾಡುವುದರಲ್ಲಿ ನಾನು ನಿಮಗೆ ಸಹಾಯ ಮಾಡಬಹುದು. ಒಂದು ಸಾರಿ: http://quillpad.in/kannada/ ಅನ್ನು ನೂಡಿರಿ.

    rama shetty

    ಪ್ರತ್ಯುತ್ತರಅಳಿಸಿ
  3. namaste..heege hudukaaduttiddaga nimma blog sikkitu..
    tumbaa chennagide..ide thara bareeta iri..

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ಬೊಗಳೂರಿನಲ್ಲಿರೋ ಹೋಟೆಲು ತಿಂಡಿಯಲ್ಲಿ ಹಲ್ಲು ಸಿಕ್ಕರೆ ಅದರಲ್ಲಿ ಅಸತ್ಯಾನ್ವೇಷಿ ಕೈವಾಡವೇನೂ ಇರುವುದಿಲ್ಲ ಎಂದು ನಿಮ್ಮ ಬ್ಯುರೋದ ಒದರಿಗಾರರಿಗೆ ಹೇಳಿಬಿಡಿ... ಇಲ್ಲವಾದರೆ ಹಲ್ಲು ಹೋದವರಿಂದಾಗಿ ನಮ್ಮ ತಲೆ ಉಳಿಯದು.

    ಪ್ರತ್ಯುತ್ತರಅಳಿಸಿ
  5. ರಾಮ ಶೆಟ್ಟಿ ಅವರಿಗೆ ಸ್ವಾಗತ.
    ನೀವು ಬೆಂಗಳೂರಿನ ಹೋಟೆಲುಗಾರ ಎಂದು ತಿಳಿದು ಹೋದ ಜೀವ ವಾಪಸ್ ಬಂದಂತಾಯಿತು. ನೀವೇನಾದರೂ ಬೊಗಳೂರಿನ ಹೋಟೆಲಿನವರು ಎಂದು ಹೇಳಿದ್ದರೆ, ನಾವು ಆಗಲೇ ಪರಾರಿಯಾಗುತ್ತಿದ್ದೆವು.

    ನಿಮ್ಮ ಕ್ವಿಲ್ ಪ್ಯಾಡ್ ಚೆನ್ನಾಗಿದೆ... ಕೆಲವು ಸುಧಾರಣೆಗಳಾಗಬೇಕಿದೆ ಅನಿಸುತ್ತದೆ. ಬಹುಶಃ ನೀವು ಈ ಕಾಮೆಂಟನ್ನು ಕೂಡ ಕ್ವಿಲ್ ಪ್ಯಾಡ್ ಮೂಲಕವೇ ಮಾಡಿದ್ದೀರಿ ಅನಿಸುತ್ತದೆ... ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  6. ಬೊಗಳೂರಿಗೆ ಸ್ವಾಗತ ಅರ್ಚನಾ ಅವರೆ,

    ಚೆನ್ನಾಗಿದೆ ಅಂತ ಇಲ್ಲಿ ಬಂದು ದೂರು ನೀಡಿದವರಿಗೆಲ್ಲಾ ನಮ್ಮದು ಒಂದೇ ಸ್ಲೋಗನ್ನು. ಇನ್ನು ಮುಂದೆ ಹಾಗಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳುತ್ತಲೇ ಬಂದಿದ್ದೇವೆ. ನೀವು ನಮಗೆ ಇದೇ ಥರಾ ಬರೀತಾ ಇರಿ ಅಂದ್ರೆ, ನಾವು ನಿಮಗೆ ಇದೇ ತರಾ ಬರ್ತಾ ಇರಿ ಅಂತ ಹೇಳ್ತೇವೆ... ಮುಯ್ಯಿಗೆ ಮುಯ್ಯಿ. :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D