ಬೊಗಳೆ ರಗಳೆ

header ads

ಮಾವನ ಸಂಪನ್ಮೂಲ ಅಭಿವೃದ್ಧಿಗೆ ಸೊಸೆಯರಿಂದ ತಡೆ

(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ಜು.31- ಮಾವನ ಸಂಪನ್ಮೂಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಾನು ಶ್ರಮಿಸುತ್ತಿದ್ದರೆ, ತಮ್ಮ ಮೇಲೆಯೇ ಸೊಸೆಯರು ಕೇಸು ಜಡಿಯತೊಡಗಿದ್ದಾರೆ ಎಂದು ಕೇಂದ್ರ ಮಾವನ ಸಂಪತ್-ಮೂಲ ಸಚಿವರಾದ ದುರ್ಜನ ಸಿಂಹರವರು ಅಲವತ್ತುಕೊಂಡಿದ್ದಾರೆ.

ತಮ್ಮ ಮಾವ ಕೇಂದ್ರದ ಯುಪಿಎ ಸರಕಾರದ ಮಾವನ ಸಂಪನ್ಮೂಲಗಳ ಅಭಿವೃದ್ಧಿ ಸಚಿವರಾಗಿರಬಹುದು. ಆದರೆ ಈ ಮಾವ ತಮ್ಮ ಸಂಪನ್ಮೂಲಗಳ ಅಭಿವೃದ್ಧಿಗಾಗಿ mercy ಇಲ್ಲದೆಯೇ ಮರ್ಸಿಡಿಸ್ ಬೆಂಜ್ ಕಾರು ಕೇಳಿದ್ದಾರೆ. ಇದು ಒಂದು ರೀತಿಯಲ್ಲಿ ಸರಿಯಾದುದೇ. ಯಾಕೆಂದರೆ ಅವರ ಉದ್ಯೋಗವೇ ಸಂಪನ್ಮೂಲ ಅಭಿವೃದ್ಧಿ ಮಾಡುವುದು ಎಂದು ಸೊಸೆಯಂದಿರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ನೂರಾರು ಸಿಬ್ಬಂದಿಗಳು ಕೇಂದ್ರ ಮಂತ್ರಿಯನ್ನು ಮಾತನಾಡಿಸಲು ಯತ್ನಿಸಿದರು. ಹರಸಾಹಸ ಪಟ್ಟರೂ ನೂರಾರು ಸಿಬ್ಬಂದಿಗಳಲ್ಲಿ ಶೇ.33 ಮಂದಿಗೆ ತಮ್ಮ ಭೇಟಿಗೆ ಅವಕಾಶದ ಮೀಸಲಾತಿ ಕಲ್ಪಿಸುವುದಾಗಿ ಮಂತ್ರಿಗಳ ಕಚೇರಿಯಿಂದ ಪ್ರಕಟಣೆ ಹೊರಬಿತ್ತು.

ಹೀಗಾಗಿ ಅಳಿದುಳಿದ ಸಿಬ್ಬಂದಿಗಳ ಕೈಗಳು, ಕಾಲುಗಳು, ತಲೆಗಳು, ದೇಹದ ಭಾಗಗಳನ್ನು ಶೇಕಡಾವಾರು ಮೀಸಲಾತಿಯಂತೆ ಜೋಡಿಸಿಕೊಂಡು ಕೇಂದ್ರ ಮಂತ್ರಿ ಕಚೇರಿಗೆ ತೆರಳಿದಾಗ ತಲೆಗಳ ಸಂಖ್ಯೆ ಕಡಿಮೆಯಾದರೂ ಸಾವರಿಸಿಕೊಂಡು ಅವರನ್ನು ಮಾತನಾಡಿಸಿದಾಗ, ತಾನು ಸೊಸೆಯರಿಗೂ ಮೀಸಲಾತಿ ಜಾರಿಗೆ ತರುವ ಇರಾದೆ ಹೊಂದಿದ್ದೆ. ಆದರೆ ಅವರೀಗ ತಮಗೆ ಜೈಲಿನಲ್ಲಿ ಮೀಸಲಾತಿ ದೊರಕಿಸಲು ಯತ್ನಿಸುತ್ತಿದ್ದಾರೆ. ಸೊಸೆಯರ ಸಂಖ್ಯೆ ಹೆಚ್ಚು, ಮಾವನಾದ ನಾನು ಒಬ್ಬನೇ ಇರುವುದರಿಂದ ಅವರು ಬಹುಸಂಖ್ಯಾತರು. ಅವರಿಗೆ ಸಕಲ ಸವಲತ್ತುಗಳೂ ಇವೆ. ಹಾಗಾಗಿ ಸೊಸೆಯರಿಗೆ ಮೀಸಲಾತಿ ಬೇಡ, ಅಲ್ಪಸಂಖ್ಯಾತರಾದ ನಮ್ಮಂತ ಮಾವಂದಿರಿಗೇ ಮೀಸಲಾತಿ ಕಲ್ಪಿಸಲು ಮುಂದಿನ ಅಧಿವೇಶನದಲ್ಲಿ ವಿಚಾರ ಮಂಡಿಸುವುದಾಗಿ ನುಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

3 ಕಾಮೆಂಟ್‌ಗಳು

  1. ದುರ್ಜನಸಿಂಹರ ಮೂಲಭೀತ ಮಾವನ ಹಕ್ಕುಗಳಿಗೇ ಅವರ ಸೊಸೆ ಕೊಡಲಿ ಹಾಕುತ್ತಿರುವದು ಅನ್ಯಾಯ.ದುರ್ಜನಸಿಂಹರ ಯೋಗ್ಯತೆಗೆ ತಕ್ಕಂತೆ ಅವರು ಹೆಲಿಕಾಪ್ಟರ ಕೇಳಿದರೂ ತಪ್ಪಿಲ್ಲ.ಇಂತಹ ಸಂವಿಧಾನದತ್ತ ಹಕ್ಕನ್ನು ನಿರಾಕರಿಸುವ ಸೊಸೆಗೆ ಆತ್ಮಹತ್ಯೆಯ ಶಿಕ್ಷೆ ಕೊಡುವದೆ ಸರಿ.ಆತ್ಮಹತ್ಯೆಗೆ ಬೇಕಾಗುವ ಅವಶ್ಯಕ ಸಾಮಗ್ರಿಗಳನ್ನು (ಉದಾ: ನೇಣಿನ ಹಗ್ಗ,ಕೆರೊಸಿನ್ ಇತ್ಯಾದಿ)ತಮ್ಮ ಸೊಸೆಗೆ ದುರ್ಜನಸಿಂಹರು ಅನುಕಂಪದ ಆಧಾರದ ಮೇಲೆ ಒದಗಿಸಬಹುದು. ಯಾವುದಕ್ಕೇ ಆಗಲಿ,ತಮ್ಮ ವದರಿಗಾರರು ಮುಂದಿನ ಆಗುಹೋಗುಗಳ ಮೇಲೆ ಒಂದು ಕಣ್ಣಿಟ್ಟಿರಿ. ದುರ್ಜನಸಿಂಹರಿಗೆ ನ್ಯಾಯ ಸಿಗಲಿ. ಅಸತ್ಯಮೇವ ಜಯತೆ!

    ಪ್ರತ್ಯುತ್ತರಅಳಿಸಿ
  2. ಏನ್ಗುರುಗಳೆ, ನಿಮ್ಮ ಕನ್ನಡ ಸೇವೆ ಸಾಗಲಿ... ನಿರಂತರವಾಗಿರಲಿ...

    ಪ್ರತ್ಯುತ್ತರಅಳಿಸಿ
  3. ಸುಧೀಂದ್ರರೆ,

    ಆತ್ಮಹತ್ಯೆ ಪರಿಕರಗಳ ಪೂರೈಕೆಯಲ್ಲಿಯೂ ಮೀಸಲಾತಿ ಇರುವುದರಿಂದಾಗಿ ಆತ್ಮಹತ್ಯೆಗೆ ಯೋಗ್ಯರಾದವರಿಗೆ ಆ ಕೆಲಸ ಸಿಗುವ ಭರವಸೆಯಿಲ್ಲ. ಹಾಗಾಗಿ ನಾವು ದುರ್ಜನರ ಮೇಲೆ ಎರಡೂ ಕಣ್ಣಿಟ್ಟು ನೋಡುತ್ತಿದ್ದೇವೆ... ಬೇಕಿದ್ದರೆ ಒಂದಿಷ್ಟು ಎಣ್ಣೆ ಹಾಕಿಕೊಂಡು.... ಹೊಟ್ಟೆಗಲ್ಲ.... ಕಣ್ಣಿಗೆ!!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D