ಬೊಗಳೆ ರಗಳೆ

header ads

ಬ್ರಿಟ್ನಿ ಸ್ಪಿಯರ್ಸ್ ಮಾದಕ ದ್ರವ್ಯ ಸೇವನೆ 'ವಿಳಂಬ'!

(ಬೊಗಳೂರು ಪಡ್ಡೆ ಬ್ಯುರೋದಿಂದ)
ಬೊಗಳೂರು, ಜ.28- ಇಲ್ಲಿ ಪ್ರಕಟವಾಗಿರುವ ವರದಿಯೊಂದನ್ನು ಬೊಗಳೂರಿನ ಬಾಲ-ಕರುಗಳ ಸಂಘವು ಹಾಗೂ ಬಾಲವಿಲ್ಲದ-ಕರುಗಳ ಸಂಘವು ಉಫ್ ಅಂತ ಊದಿ ನಿರ್ಲಕ್ಷಿಸಿದೆ.

ಒಂದು ಬೆಂಕಿ ಪೊಟ್ಟಣದಲ್ಲಿ ಹಿಡಿಸುವಷ್ಟು ಪ್ರಮಾಣದ ಬಟ್ಟೆಯನ್ನು "ಮೈ ತುಂಬಾ" ಹಾಕಿಕೊಂಡು, ಚಳಿಯಲ್ಲಿ ನಡುಗುತ್ತಿದ್ದ ಪಡ್ಡೆ ಹುಡುಗರನ್ನೆಲ್ಲಾ ಬಿಸಿ ಮಾಡಿ, ಅವರಿಗೆ ಜೀವದಾನ ನೀಡುತ್ತಿದ್ದ ಬ್ರಿಟ್ನಿ ಸ್ಪಿಯರ್ಸ್ 14ನೇ ವಯಸ್ಸಿನಲ್ಲಿ ಕುಡಿತ, ಮಾದಕ ದ್ರವ್ಯ ಸೇವಿಸಲು ಆರಂಭಿಸಿದ್ದಳು ಎಂಬ ಅಪ್ಪನ ಮಾತು ಕೇಳಿ ಈ ಕರುಗಳು ಬಿದ್ದು ಬಿದ್ದು ನಕ್ಕಿದ್ದಾರೆ.

ಇದೇನ್ ಮಹಾ... ನಾವೆಲ್ಲಾ ಈಗ ಹುಟ್ಟಿದ ತಕ್ಷಣವೇ ಮಾದಕ ವಸ್ತುವನ್ನು ಕೈಯಲ್ಲಿ ಹಿಡಿದುಕೊಂಡೇ ಹುಟ್ಟಿರುತ್ತೇವೆ. ಅವಳು ಇದಕ್ಕಾಗಿ 14 ವರ್ಷ ಕಾಯಬೇಕಾಗಿದ್ದು ಆಕೆಯ ಅದೃಷ್ಟವನ್ನು ತುಂಬಾ ಕಿರಿದಾಗಿಸಿದೆ. ಆಕೆ ತಮ್ಮ ಜೀವನದ ಅಮೂಲ್ಯ 14 ವರ್ಷಗಳನ್ನು ವ್ಯರ್ಥ ಮಾಡಿದಳು. ಮೊದಲೇ ನಮ್ಮ ಹಾಗೆ ಆರಂಭಿಸಿದ್ದಿದ್ದರೆ, ಮತ್ತಷ್ಟು ಮಾದಕವಾಗಬಹುದಿತ್ತು ಎಂದು ಈ ಬಾಲ-ಕರುಗಳ ಸಂಘವು ಸಲಹೆ ಮಾಡಿದೆ.

ಇನ್ನಷ್ಟು ಮಾದಕವಾಗಬಹುದಿತ್ತು ಹೌದು... ಆದರೆ ಇದರಿಂದ ನಮಗೇನಾದರೂ ಪ್ರಯೋಜನವಿದೆಯೇ ಎಂದು ನಮ್ಮ ಏನೂ ಅರಿಯದ ಮುಗ್ಧ ಬೊಗಳೆ ರಗಳೆ ಬ್ಯುರೋ ಸದಸ್ಯರು ಕೇಳಿದ ಪ್ರಶ್ನೆಗೆ ಈ ಬಾಲಕುರುಗಳ ಸಂಘದ ಅಧ್ಯಕ್ಷ ಗೋಪ-ಬಾಲಕ ಉತ್ತರಿಸಿದ್ದು ಹೀಗೆ:

"ನೋಡಿ, ನಮ್ಮ ದೇಶದ ಉತ್ತರ ಭಾಗದಲ್ಲಿ ಚಳಿಯಿಂದಾಗಿ ಸಾಕಷ್ಟು ಜನ ಸಾಯ್ತಾ ಇದ್ದಾರೆ. ಒಮ್ಮೆ ಬ್ರಿಟ್ನಿಯನ್ನು ಅವರಿಗೆಲ್ಲಾ ತೋರಿಸಿಬಿಟ್ಟರೆ, ಅವರೆಲ್ಲಾ ಬಿಸಿಯಾಗಿಬಿಡುತ್ತಾರೆ. ಹಾಗಾಗಿ ಬದುಕಿಸುವ ಕಾಯಕ ಮಾಡಬಹುದಿತ್ತು" ಎಂದು ಸಲಹೆ ನೀಡಿದ್ದಾರೆ.

ಈಗ ಎಲ್ಲಾ ಬಿಟ್ನಿಯಂಥವರಿದ್ದರೆ, ಜಾಗತಿಕ ತಾಪಮಾನ ಹೆಚ್ಚಳವಾಗಬಹುದಲ್ಲವೇ ಎಂದು ಕೇಳಿದಾಗ, " ಅದು ಹೌದು... ಆದರೆ... ಎಲ್ಲಾ ಬಿಟ್ನಿಯಂಥವರನ್ನು ಕರೆತಂದ್ರೆ ಎಲ್ಲಿ ತಾಪಮಾನ ಹೆಚ್ಚಾಗಬೇಕೋ ಅಲ್ಲಿ ಮಾತ್ರ ಹೆಚ್ಚಿಸಬಹುದು. ಮೊದಲೇ ಬಿಸಿಯಾಗಿರುವಲ್ಲಿ ಆಕೆಯನ್ನು ಕರೆದೊಯ್ಯದಿದ್ದರಾಯಿತು" ಎಂದು ಕೊಂಕು ನೋಟ ಬೀರಿದ ಉತ್ತರವೊಂದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

12 ಕಾಮೆಂಟ್‌ಗಳು

  1. ಬಿಟ್ಟಿ ಪಿಯರ್ಸ್ ಅಂದ್ರೆ ಬೆಂಕಿಪೊಟ್ಟಣಾನಾ? ಮಾದಕ ದ್ರವ್ಯ ಅಂದ್ರೇನು? ಬೆಂಕಿಪೊಟ್ಟಣದಲ್ಲಿರುವ ಮದ್ದಾ? ಛಳಿ ಕಡಿಮೆ ಮಾಡುವ ಶಕ್ತಿ ಈ ಬಿಟ್ಟಿ ಬೆಂಕಿಪೊಟ್ಟಣಕ್ಕೆ ಇರೋ ಹಾಗಿದ್ರೆ, ನಮ್ಮೂರಿಗೆ ಒಂದು ಡಜನ್ ಕಳುಹಿಸಿಕೊಡಿ. ಬಿಟ್ಟಿ ಆದ್ರಿಂದ ನಮಗೇನು ನೀವು ಕಮಿಷನ್ ಕೊಡುವ ಅಗತ್ಯವಿಲ್ಲ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಕೊಂಕು ಡೊಂಕಿಗೆ ನಮ್ಮ ಸಂಪೂರ್ಣ ಸಮ್ಮತಿ ಹಾಗೂ ಸಹಕಾರವಿದೆ. ನಿಮ್ಮ ಈ ಪಡ್ಡೆ ಬ್ಯೂರೋದ ವರದಿಯನ್ನು ಕೂಲಂಕುಷವಾಗಿ ವಿಚಾರಿಸಿ ಸಮಾಜದ ಬೇರೆ ಬೇರೆ ವಎಗದವರ ಅಭಿಪ್ರಾಯವನ್ನು ಪಡೆಯುವ ಸಾಹಸವನ್ನು ಮಾಡಿದ ನಮ್ಮ ಸಂಸ್ಥೆಯವರಿಗೆ ಸಿಕ್ಕ ಅತ್ಯುತ್ತಮ ಅಭಿಪ್ರಾಯ ಸರ್ಕಾರಿ ನೌಕರರದ್ದು. ಜಾಗತಿಕ ಭೂತಾಪಮಾನ ಏರಿಕೆಗೂ ಬಿಟ್ಟಿ ಪಿಯರ್ಸ್ ಗೂ ಯಾವ ಸಂಬಂಧವೂ ಇಲ್ಲ ಎಂದು ಸಾಬೀತು ಪಡಿಸುವಾಗ ತಾವು ‘ಎಲ್ಲೆಲ್ಲಿ ಬಿಸಿಯಾಗ ಬೇಕೊ ಅಲ್ಲಿ ಮಾತ್ರ ಬಿಸಿಯಾಗುತ್ತದೆಯೇ ಹೊರತು ಜಾತಗಿಕವಾಗಿ ಯಾವ ಪರಿಣಾಮವೂ ಆಗುವುದಿಲ್ಲ’ ಎಂಬ ವಿಚಾರವನ್ನು ಕೇಳಿದ ಈ ತಕರಾರಿ ನೌಕರರು ತಮ್ಮ ಕೈಗಳನ್ನು ಕೆರೆದುಕೊಂಡು ಇನ್ನು ಟೇಬಲ್ ಕೆಳಗೆ ಅದನ್ನು ಚಾಚಿ ಬಿಸಿ ಮಾಡಿಸಿಕೊಳ್ಳುವ ಅಪಾಯದ ಕೆಲಸ ತಪ್ಪಬಹುದು ಎಂದು ಉಲ್ಲಾಸಗೊಂಡಿದ್ದಾರೆ ಎಂದು ತಿಳಿದುಬಂದಿದೆ.


    ಸುಪ್ರೀತ್

    ಪ್ರತ್ಯುತ್ತರಅಳಿಸಿ
  3. ಬೊಗಳೂರು ಬ್ಯೂರೋದಿಂದ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಸಹಾಯ ಮಾಡಲು ನಮ್ಮ ಬ್ರಿಟ್ನಿ ಸ್ಪಿಯರ್ಸ್ ಗೆ ಒಂದು ವಿನಂತಿಯನ್ನು ಕಳುಹಿಸುವಿರಾ??

    ಪ್ರತ್ಯುತ್ತರಅಳಿಸಿ
  4. ಬೊಗಳೂರು ಬ್ಯೂರೋ ತುಂಬಾ ಚೆನ್ನಾಗಿ ಮೂಡಿ ಬರುತ್ತಿದ್ದೆ....... ನಿಮ್ಮ ಹಾಸ್ಯಮಯ ವಿಶ್ಲೇಷಣೆಗೆ ತುಂಬಾ ಚೆನ್ನಾಗಿರುತ್ತದೆ....

    ಪ್ರತ್ಯುತ್ತರಅಳಿಸಿ
  5. ಒಂದು ಕಡ್ಡಿಪೆಟ್ಟಿಗೆಯಲ್ಲಿರುವ ಅರಿವೆಯನ್ನು ಬ್ರಿಟ್ನಿ ಧರಿಸುತ್ತಾಳಾ? ಹಾಗಿದ್ದರೆ, ಇನ್ನು ಅವಳ ಕೈಗೆ ಕಡ್ಡಿ ಪೆಟ್ಟಿಗೆ ಸಿಕ್ಕದಂತೆ ನೋಡಿಕೊಳ್ಳಬೇಕಾಯಿತು. ಬೊಗಳೂರಿನಲ್ಲಿಯ ಪಡ್ಡೆ ಹುಡುಗರ ಆರೋಗ್ಯದ ದೃಷ್ಟಿಯಿಂದ ಇದು ಅವಶ್ಯಕ.

    ಪ್ರತ್ಯುತ್ತರಅಳಿಸಿ
  6. ‘ಪಡ್ಡೆ ಹುಡುಗರೇ ದೇಶದ ಭವಿಷ್ಯ. ಅವರಿಗೆ ನಾನೆಂದರೆ ಪ್ರಾಣ. ನನ್ನಿಂದಾಗಿ ಒಂದು ದೇಶದ ಭವಿಷ್ಯ ಹಾಳಾಗುವುದನ್ನು ನಾನು ಸಹಿಸಲಾರೆ. ಅದಕ್ಕಾಗಿ ಇನ್ನು ಮೇಲೆ ಐಟಂ ಸಾಂಗುಗಳಲ್ಲ ಕುಣಿಯುವುದಿಲ್ಲ.’ ಎಂದು ಹೇಳುವ ಮೂಲಕ ದೇಶ ಸೇವೆ ಮಾಡಲು ಮುಂದಾಗಿರುವ ಮುಮೈತ್ ಖಾನ್ ರಿಂದ ಬಿಟ್ಟಿಗೆ ಉಪದೇಶ ಕೊಡಿಸಬಹುದಲ್ಲವಾ... ಇದರಿಂದ ತಾಪಮನ ಏರಿಕೆಗೆ ಉಪಶಮನ ಸಿಗಬಹುದು.

    ನಗೆ ಸಾಮ್ರಾಟ್

    http://nagenagaaridotcom.wordpress.com/2008/01/28/ನಗಾರಿ-ಸದ್ದು-ಮುಗಿಲು-ಮುಟ್ಟ/

    ಪ್ರತ್ಯುತ್ತರಅಳಿಸಿ
  7. ಶ್ರೀನಿವಾಸರೆ,
    ಮಾದಕ ದ್ರವ್ಯ ಎಂದರೆ ಮತ್ತೇರಿಸುವವರು ಮೈ ವಾಸನೆ ತೊಲಗಿಸಿಕೊಳ್ಳಲು ಹಾಕಿಕೊಳ್ಳುವ ದ್ರವ. ಆದ್ರೆ ನೀವು ಬಿಟ್ಟಿಯೇ ಬೇಕು ಅಂತ ಕೇಳುತ್ತಿರುವ ಉದ್ದೇಶವಾದರೂ ಏನು ಎಂಬುದು ನಮಗೆ ಖಂಡಿತಾ ಅರ್ಥವಾಗಲಿಲ್ಲ.

    ಪ್ರತ್ಯುತ್ತರಅಳಿಸಿ
  8. ಸುಪ್ರೀತರೆ,

    ನಿಮ್ಮ ತರಕಾರಿ ನೌಕರರನ್ನು ಹೆಚ್ಚು ಬಿಸಿ ಮಾಡಿದಲ್ಲಿ ಬೆಂದು ಬೆಂದು ಅದನ್ನೆಲ್ಲಾ ಇರಿಸಲು ದೊಡ್ಡ ದೊಡ್ಡ ಬೆಂ-ಗಲೆಯೇ ಕಟ್ಟಿಸಬೇಕಾದೀತು.

    ಪ್ರತ್ಯುತ್ತರಅಳಿಸಿ
  9. ಅನುರಾಗಿಗಳಿಗೆ ಸ್ವಾಗತ.
    ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆದರೆ ನಾವು ಟ್ರೈ ಮಾಡುವ ಮೊದಲೇ ಬಿಟ್ಟಿ ಬಿಯರ್ಸ್ ನಮಗೇ ವಿನಂತಿ ಕಳಿಸಿ, ಚಳಿ ತಗ್ಗಿಸುವ ಕೆಲಸ ಮಾಡದಂತೆ ವಿನಂತಿಸಕೊಂಡಿದ್ದಾರೆ.

    ಪ್ರತ್ಯುತ್ತರಅಳಿಸಿ
  10. ತುಂಬಾ ಕ್ಲೋಸ್ ಅಪ್ ಸೆಟ್ ಅವರೆ,

    ನಿಮ್ಮ ನೋಡಿದ ಬಳಿಕವೇ ನೆನಪಾದ ಕಾರಣ ಇಂದು ಕ್ಲೋಸಪ್ ಟೂಥ್ ಪೇಸ್ಟ್ ಹಿಡಿದು ಹಲ್ಲುಜ್ಜಿದ್ದೇವೆ.

    ಆದ್ರೆ ಬೊಗಳೂರು ಬ್ಯುರೋದಿಂದ ಚೆನ್ನಾಗಿ ಮೂಡಿ ಬರುತ್ತಿದೆ ಅಂತ ಹೇಳಿ ಚೆನ್ನಾಗಿಯೇ ಅವಮಾನಿಸಿದ್ದಕ್ಕೆ ಧನ್ಯವಾದ.

    ಪ್ರತ್ಯುತ್ತರಅಳಿಸಿ
  11. ಸುನಾಥರೆ,
    ನೀವು ಹೇಳೋದು ಸರಿ. ಕಡ್ಡಿಪೆಟ್ಟಿಗೆಯಲ್ಲಿ ತುಂಬುವಷ್ಟು ಬಟ್ಟೆ ಹಾಕಿಕೊಂಡರೆ ಪಡ್ಡೆ ಹುಡುಗರಿಗೆ ಏನೂ ರಂಜನೆ ಸಿಗಲ್ಲ. ಹಾಗಾಗಿ ಅದರೊಳಗಿರುವ ಕಡ್ಡಿಯಲ್ಲಿ ಒಂದು ಬಾರಿ ಸುತ್ತುವಷ್ಟು ಅರಿವೆಯನ್ನು ಮಾತ್ರವೇ ಬಿಟ್ಟಿ ಪಿಯರ್ಸಿಗೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ.

    ಪ್ರತ್ಯುತ್ತರಅಳಿಸಿ
  12. ನಗೆ ಸಾಮ್ರಾಟರೆ,

    ಪಡ್ಡೆ ಹುಡುಗರೇ ದೇಶದ ಭವಿಷ್ಯ, ಅವರಿಗೆ ನೀವೆಂದರೆ ಪ್ರಾಣ ಮತ್ತು ನಿಮ್ಮಿಂದಾಗಿ ದೇಶದ ಭವಿಷ್ಯ ಹಾಳಾಗುವುದನ್ನು ಸಹಿಸುವುದಿಲ್ಲ ಅಂತ ಮುಮೈತ್ ಖಾನ್ ಹೇಳಿದ್ದು ಕೇಳಿ ನಿಮ್ಮ ಮೇಲೆ ಸಂಶಯ ಬರತೊಡಗಿದೆ.

    ಎಷ್ಟೇ ಉಪದೇಶ ಕೊಡಿಸಿದರೂ, ತಾಪ ಏರುತ್ತದೆ, ಮಾನ ಇಳಿಯುತ್ತದೆ.!!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D