ಬೊಗಳೆ ರಗಳೆ

header ads

ಬಜೆಟ್ ಫ್ಲ್ಯಾಶ್: ಈ ಬಾರಿ ಭಾರತದ ಖಜಾನೆ ಭರ್ತಿ!

(ಬೊಗಳೂರು ಬಜೆಟ್ ಕಳ್ಳತನ ಬ್ಯುರೋದಿಂದ ವಿಶೇಷ ಬಜೆಟ್)
ಬೊಗಳೂರು, ಫೆ.29- ಬಹುನಿರೀಕ್ಷಿತ ಆಯವ್ಯಯ ಪತ್ರವನ್ನು ಮಂಡಿಸಲಾಗುತ್ತಿದೆ/ಮಂಡಿಸಲಾಗಿದೆ. ಆದರೆ ಇದರಲ್ಲಿ ಜಾರಕಾರಣಿಗಳಿಗೆ ಆಯ ಎಂದೂ ಬಡಪ್ರಜೆಗೆ ವ್ಯಯವೆಂದೂ ಪ್ರತ್ಯೇಕವಾಗಿ ವ್ಯಾಖ್ಯಾನಿಸಬೇಕಾಗಿಲ್ಲ ಎಂಬ ಸ್ಪಷ್ಟನೆಯೊಂದಿಗೆ ಬಜೆಟ್ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗುತ್ತಿದೆ.

ಭವ್ಯ ಭವಿಷ್ಯದ ಹಿತದೃಷ್ಟಿಯಿಂದ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಲಾಗಿರುವ ಹತ್ತು ಹಲವು ಯೋಜನೆಗಳಲ್ಲಿ ಕೆಲವು ಇಂತಿವೆ:
  • ಸಂಸತ್ತಿನಲ್ಲಿ ಸಂಸದರ ಕೂಗಾಟ, ಅರಚಾಟಗಳೆಲ್ಲಾ ಹೆಚ್ಚುತ್ತಿರುವುದರಿಂದ ಅಲ್ಲಿ ಉತ್ಪನ್ನವಾಗುವ ಶಬ್ದದಿಂದ ವಿದ್ಯುತ್ ಉತ್ಪಾದನೆ ಯೋಜನೆ
  • ಭಯೋತ್ಪಾದನೆ, ರಕ್ತಪಾತ, ಬಾಂಬ್ ಸ್ಫೋಟ... ಇತ್ಯಾದಿಗಳ ಮೇಲೆ ಶೇ.50 ಮೇಲ್ತೆರಿಗೆ
  • ಮಾಹಿತಿ ಹತ್ತಿಕ್ಕು ಕಾಯಿದೆ ಸಮರ್ಪಕ ಜಾರಿ
  • ವಿರೋಧ ಪಕ್ಷಗಳಿಗೆ ಓಟು ಹಾಕುವವರ ಮೇಲೆ ಶೇ.20 ಸೆಸ್
  • ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಪಡೆಯುವ ಲಂಚಕ್ಕೆ ಸೇವಾ ತೆರಿಗೆ
  • ಪೊಲೀಸರು ಪಡೆಯುವ ಹಫ್ತಾಕ್ಕೆ ಸೇವಾ ತೆರಿಗೆ
  • ವೇಶ್ಯಾವಾಟಿಕೆ ವೃತ್ತಿಗೂ ಸೇವಾ ತೆರಿಗೆ
  • ಎಲ್ಲ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಿ, ಪ್ರತಿಭಾ ಪಲಾಯನ ಹೆಚ್ಚಳಕ್ಕೆ ಪ್ರೋತ್ಸಾಹ, ಅವರಿಗಾಗಿ ಪಲಾಯನ ಮಾಡಲು ವಿಶೇಷ ವಿಮಾನ ಮತ್ತು ರೈಲು ವ್ಯವಸ್ಥೆ
  • ಓಟು ಪಡೆದು ಊರು ಮಾರಿ ಐಷಾರಾಮಿ ಜೀವನ ನಡೆಸುತ್ತಿರುವವರಿಗೆ ತೆರಿಗೆ ಕಡಿತ
  • ಪ್ರಶಸ್ತಿಗೆ ಅತೀ ಹೆಚ್ಚು ಬಿಡ್ ಸಲ್ಲಿಸುವವರಿಗೆ ಭಾರ-ತಾ ರತ್ನದಂತಹ ಹತ್ತು ಹಲವು ಪ್ರಶಸ್ತಿಗಳು
  • ಬಡ ಭಾರತೀಯ ಪ್ರಜೆಗಳಿಗೆ ಮನೋರಂಜನೆ ಬದಲು ಮನೋವೇದನೆ ತೆರಿಗೆ
  • ಆವಶ್ಯಕ ವಸ್ತುಗಳ ಬೆಲೆ ಹೊತ್ತ ಉಪಗ್ರಹ ಉಡಾವಣೆ ಯೋಜನೆ
  • ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಕಠಿಣ ಶಿಕ್ಷೆ
  • ಉಗ್ರಗಾಮಿಗಳಿಗೆ ಜೀವ ವಿಮೆ ಕಡ್ಡಾಯ ಪ್ರಸ್ತಾವನೆ
  • ಬಾಂಬ್ ಸ್ಫೋಟಿಸುವ ಉಗ್ರಗಾಮಿಗಳು ತಮ್ಮ ಯೋಜನೆಯನ್ನು ಮೊದಲೇ ಬಹಿರಂಗಪಡಿಸುವುದು ಕಡ್ಡಾಯ.
  • ಗಂಡಸರಿಗೆ ಹೆರಿಗೆ ರಜೆ ಒಂದು ವರ್ಷಕ್ಕೆ ವಿಸ್ತರಣೆ
  • ಪುರುಷ ದೌರ್ಜನ್ಯ ಯೋಜನೆ ಜಾರಿ ಪ್ರಸ್ತಾಪ
  • ಚಳ್ಳೆ ಹಣ್ಣು ತಿನ್ನಿಸುವವರ ಮೇಲೆ ಸೇವಾ ತೆರಿಗೆ
  • ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ಉಗ್ರಗಾಮಿಗಳು ಹೆಚ್ಚುತ್ತಿರುವುದರಿಂದ ಅವರ ಮೇಲೂ ಸ್ಫೋಟ ತೆರಿಗೆ
  • ಕಾಲೇಜು ಪರಿಸರದಲ್ಲಿ ಹೃದಯರೋಗಿಗಳು ಹೆಚ್ಚಾಗುತ್ತಿರುವುದರಿಂದ ಪಕ್ಕದಲ್ಲೇ ಹೃದಯ ಆಸ್ಪತ್ರೆ ಸ್ಥಾಪನೆ ಪ್ರಸ್ತಾಪ
  • ತುಂಡುಡುಗೆ ಧರಿಸುವ ನಟಿಯರ ಉಡುಗೆ ಗಾತ್ರ ಕಿರಿದಾದಷ್ಟೂ ಹೆಚ್ಚಳವಾಗುವ ತೆರಿಗೆ
  • ಸಾಫ್ಟ್ ಡ್ರಿಂಕ್ಸ್ ಬಾಟಲಿಗಳಲ್ಲಿ ಹಾಟ್ ಡ್ರಿಂಕ್ಸ್ ಪೂರೈಕೆ
  • ಹೊಟ್ಟೆಗೆ ಹಿಟ್ಟಿಲ್ಲದೆ ಸಾಯೋದು ನಾನೋ ನೀನೋ ಅಂತ ಗೊಂದಲದಲ್ಲಿರುವವರಿಗೆ ನ್ಯಾನೋ ಕಾರು ಕೊಳ್ಳಲು ತೆರಿಗೆ ಕಡಿತ
  • ಪ್ರತಿವರ್ಷ ಕೋಟಿ ಕೋಟಿ ವ್ಯಯಿಸಿದರೂ ಹಿಂದುಳಿದವರು ಇನ್ನೂ ಮುಂದೆ ಬರುತ್ತಿಲ್ಲವಾದುದರಿಂದ ಅವರಿಗೆ ಸಿಕ್ಸ್‌ಟಿ ಸಿಕ್ಸ್‌ಟಿ ಮೀಸಲಾತಿ
  • ರೈತರ "ಉಪಯೋಗ"ಕ್ಕಾಗಿ ಇಲಿಪಾಷಾಣ, ಸಯನೈಡ್, ಟಿಕ್20 ಮುಂತಾದವುಗಳ ಬೆಲೆ ಇಳಿಕೆ. (ಬಡವರ ನಿರ್ಮೂಲನೆಯ ಗುರಿ)
  • ಕೊಟ್ಟ ಕೊನೆಯದಾಗಿ.. ಬಡತನ ರೇಖೆಯಿಂದ ಕೆಳಗಿರುವವರ ನಿರ್ಮೂಲನೆಗೆ ಎಲ್ಲಾ ಆವಶ್ಯಕ ವಸ್ತುಗಳ ಬೆಲೆ ಏರಿಕೆ ಯೋಜನೆ
ಈ ಯೋಜನೆಗಳಿಂದ ಭಾರತದ ಖಜಾನೆ ತುಂಬಿ ತುಳುಕಲಿದೆ. ಜಾರಕಾರಣಿಗಳ ಖಜಾನೆಯೂ ತುಳುಕುತ್ತದೆ. ಇದರೊಂದಿಗೆ, ಸಾಲದ ಸುಳಿಯಲ್ಲಿ ಸಿಲುಕಿದ ಅಮೆರಿಕ, ರಷ್ಯಾ, ಜಪಾನ್, ಸಿಂಗಾಪುರಗಳ ಸಾಲ ಮನ್ನಾ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ಅದೇರೀತಿ ಮತ್ತೆ ಚುನಾವಣೆ ನಡೆದು ಆರಿಸಿ ಬಂದಲ್ಲಿ, ಖಜಾನೆಯಲ್ಲಿ ಸಾಕಷ್ಟು ಝಣ ಝಣ ಕೇಳಿಬರುತ್ತಿರುತ್ತದೆ. ಇದುವೇ ಚುನಾವಣೆಗೆ ಸ್ಪರ್ಧಿಸಲು ಪ್ರೇರಣೆಯನ್ನೂ, ಉತ್ಸಾಹವನ್ನೂ, ಆತ್ಮಬಲವನ್ನೂ ನೀಡುತ್ತದೆ ಎಂದು ಹೇಳುತ್ತಾ, ಬೊಗಳೆಯು ತನ್ನ ಬಜೆಟ್ ಭಾಷಣವನ್ನು ಕೊನೆಗೊಳಿಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಇದೀಗ ಬರುತ್ತಿರುವ ಮಿಂಚಿನ ಸುದ್ದಿ -
    ಬೊ-ರದಲ್ಲಿ ವರದಿಯಾಗಿರುವ ಬಜೆಟ್ಟಿನ ಬಗೆಗಿನ ವಿಶ್ಲೇಷಣೆಯನ್ನು ಛೀ ಪೀತಾಂಬರ ಅವರು ಓದಿ, ಪಿತ್ತ ಮಂತ್ರಿ ಪದವಿಯನ್ನು ತ್ಯಜಿಸುತ್ತಿದ್ದಾರೆ
    ಅನ್ವೇಷಿಯವರ ಎಡಗೈಬಂಟರಾಗಿರುವ ವದರಿಗಾರರನ್ನು ಇಟಲಿಯ ಡೇಮಮ್ ಅವರ ಸಲಹೆ ಮೇರೆಗೆ ಈ ಪದವಿಗೆ ಆಯ್ಕೆ ಮಾಡುತ್ತಿದ್ದಾರಂತೆ

    ಇಂದಿನ ಬಜೆಟ್ ವಿಶ್ಲೇಷಣೆ ಓದಿ, ನಾನು ಗಳಗಳನೆ ಅಳುತ್ತಿರುವೆ. ಈ ಸಂತೋಷದಲ್ಲಿ ಊಟವೇ ಸೇರುತ್ತಿಲ್ಲ. ಇದಕ್ಕೇನಾದರೂ ಮದ್ದು ನಾಳೆ ಪ್ರಕಟಿಸುವಿರಾ?

    ಪ್ರತ್ಯುತ್ತರಅಳಿಸಿ
  2. ಮುಂಗಡಪತ್ರದಲ್ಲಿ ಈ ಕೆಳಗಿನ itemಗಳನ್ನು ಸೇರಿಸಲು ಪಿತ್ತ ಸಚಿವರಲ್ಲಿ ಕೋರುತ್ತೇನೆ:
    ೧)ಆತ್ಮಹತ್ಯೆ ಮಾಡಿಕೊಳ್ಳ ಬಯಸುವ ರೈತರಿಗೆ ರಿಯಾಯಿತಿ ದರದಲ್ಲಿ ಹಗ್ಗದ ಪೂರೈಕೆ (ಅಯಶಸ್ವಿಯಾದವರಿಗೆ ದಂಡ).
    ೨)ಭಯೋತ್ಪಾದಕರಿಗೆ ರಿಯಾಯತಿ ದರದಲ್ಲಿ ರೇಲು ಪ್ರಯಾಣ ಹಾಗು ಕಚ್ಚಾ ವಸ್ತುಗಳ ಪೂರೈಕೆ. ನ್ಯಾಯಾಲಯಗಳಲ್ಲಿ ಶಿಕ್ಷೆಯಾದರೆ, ಶಿಕ್ಷೆಯಲ್ಲಿ ರಿಯಾಯತಿ.
    ೩)ತೆರಿಗೆಗಳ್ಳರಿಗೆ ತೆರಿಗೆ ವಿನಾಯತಿ.
    ೪)ಶ್ರೀಮಾನ್ ತೆಲಗಿಯವರನ್ನು ನಾಸಿಕ ಟಂಕಸಾಲೆಯ ಮುಖ್ಯಸ್ಥರನ್ನಾಗಿ ಮಾಡುವದು.

    ಪ್ರತ್ಯುತ್ತರಅಳಿಸಿ
  3. ಹೆರಿಗೆ ರಜೆಯನ್ನೂ ಸಹ ಗಂಡ ಸಾರಿಗೆ ಕೇಳುತ್ತಿದ್ದೀರಿ. ಮಹಿಳಾ ದೌರ್ಜನ್ಯವನ್ನೂ ಪುರುಷ ದೌರ್ಜನ್ಯವಾಗಿ ಎತ್ತಾಕಿ ಕೊಂಡಿದ್ದೀರಿ. ಬೊಗಳೆಯ ಬಜೆಟಿನಲ್ಲಿ ಮಹಿಳೆಯರನ್ನು ಪೂರ್ಣ 'ಕಡೆ ಗಣ್ಣಾಗಿಸ'ಲಾಗಿದೆ. ಹಾಗಾಗಿ ಏನೇ ಮಾಡಿದರೂ ಈ ಬಜೆಟನ್ನು ನಾವು ಖಂಡಿಸದಿರಲು ನಿರ್ಧರಿಸಿದ್ದೇವೆ.

    ನೀವು ಬಡತನದ ರೇಖೆಯನ್ನೇ ಕೊಂಚ ಕೆಳಗೆ ಎಳೆಯಿರಿ. ಎಲ್ಲರೂ ಈ ರೇಖೆಯಿಂದ ತಾವಾಗೆ 'ಮೇಲೆ' ಹೋಗುತ್ತಾರೆ.

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ನಮ್ಮ ರದ್ದಿಗಾರರಿಗೂ ರದ್ದಿ ಹೆಕ್ಕುವ ಬದಲು ಖಜಾನೆ ದೋಚೋ ಕೆಲ್ಸ ಕೊಡ್ಸಿದ್ದಕ್ಕೆ ಧನ್ಯವಾದ.

    ಊಟ ಸೇರದಿದ್ದರೆ ಊಟ ಬಿಟ್ಟರಾಯಿತು. ಈ ರೀತಿ ಉಳಿತಾಯ ಮಾಡುವ ಯೋಜನೆಯಿಂದ ತೆರಿಗೆಯೂ ಉಳಿತಾಯವಾಗುತ್ತದೆ ಅಂತ ನಮ್ಮ ವಿ-ಶ್ಲೇಷಕರ ಅಭಿಮತ.

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ನೀವು ಕೋರಿದ ಐಟಂಗಳು ಈಗಾಗಲೇ ಜಾರಿಯಲ್ಲಿರುವುದರಿಂದ ಮತ್ತೆ ಹೊಸದಾಗಿ ಸೇರಿಸಲು ಪಿತ್ತ ಸಚಿವರು ಬಯಸುತ್ತಿಲ್ಲ ಅಂತ ಸ್ಪಷ್ಟನೆ ಕಳುಹಿಸಿದ್ದಾರೆ.

    ಪ್ರತ್ಯುತ್ತರಅಳಿಸಿ
  6. ಪ್ರಮೋದರೆ, ಬನ್ನಿ ಬೊಗಳೆಗೆ ಸ್ವಾಗತ.

    ನೀವು ನಮಗೂ ಟೋಪಿ ಹಾಕಲು ಬಂದಿರೋದು ಕೇಳಿ ತುಂಬಾ ಸಂತೋಷವಾಗಿದೆ. ಮಕ್ಮಲ್ ಟೋಪಿಯನ್ನೇ ಕೊಡಿಸಿಬಿಡಿ.

    ಪ್ರತ್ಯುತ್ತರಅಳಿಸಿ
  7. ಶಾನಿಯವರೆ,
    ಮಹಿಳೆಯರನ್ನು ಕಡೆಗಣ್ಣಿನಿಂದಲೇ ನೋಡುವ ಪದ್ಧತಿಯನ್ನು ಅನಾಚೂನವಾಗಿ ಮುಂದುವರಿಸುತ್ತೇವೆ. ಆದರೆ ಅದರಲ್ಲೂ ಮೀಸಲಾತಿ ಕೇಳಿದರೆ ಮಾತ್ರ... ನಾವು ಸ್ವಲ್ಪ ತಡಬಡಾಯಿಸುತ್ತೇವೆ. ಮಹಿಳೆಯರಿಗೆ ನೂರು ಶೇಕಾಡಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ಮೀಸಲಾತಿ ಘೋಷಿಸಬಹುದು ಎಂಬುದಕ್ಕೂ ನಾವು ಬದ್ಧರಾಗಿದ್ದೇವೆ.

    ಹಾಗಾಗಿ ನಮ್ಮದು ಮಹಿಳಾ ವಿರೋಧಿ ಬಜೆಟ್ ಎಂಬ ನಿಮ್ಮ ಹೊಗಳಿಕೆಯನ್ನು ಹಿಂತೆಗೆದುಕೊಳ್ಳಲು ಶೇ.33ರಷ್ಟು ಆಗ್ರಹಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D