ಬೊಗಳೆ ರಗಳೆ

header ads

ಕೋಲಸಭೆಯ 'ಸ್ಪೀಕರ್' ಬಂದ್ ಮಾಡಿಸುವ ಹುನ್ನಾರ!

(ಬೊಗಳೂರು ಕೋಲಾ(ಹಲ) ಸಭಾ ಬ್ಯುರೋದಿಂದ)
ಬೊಗಳೂರು, ಮಾ.15- ಕೋಲಾ(ಹಲ)ಸಭಾ ಸ್ಪೀಕರ್ ಅವರು ತಮ್ಮ ಸದಸ್ಯತ್ವವನ್ನೇ ಕಳೆದುಕೊಳ್ಳುವ ಎಲ್ಲ ಲಕ್ಷಣಗಳಿವೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇತ್ತೀಚೆಗೆ ನಮ್ಮ ಬೊಗಳೆ ರಗಳೆ ಬ್ಯುರೋಗೂ ಅಪಥ್ಯವಾದ ಸತ್ಯವಾಕ್ಯಗಳನ್ನೇ ಅವರು ನುಡಿಯುತ್ತಿರುವುದು ಅವರ ಸಂಸತ್ಸದಸ್ಯತ್ವ ಅನರ್ಹತೆಗೆ ಪ್ರಧಾನ ಕಾರಣ ಎಂಬುದನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ.

ಸಂಸದರನ್ನು 'ಪ್ರಜಾಸತ್ತೆಯನ್ನು ಸತ್ತೇಹೋಗುವಂತೆ ಮಾಡುವವರು', ಸದನದ ಗೌರವಕ್ಕೆ ಚ್ಯುತಿ ಬರುತ್ತಿದೆ, ನಾನೇ ಸ್ಪೀಕರ್ ಆಗಿದ್ದರೂ, ಯಾರು ಕೂಡ ನನಗೆ ಸ್ಪೀಕ್ ಮಾಡಲು ಬಿಡುತ್ತಿಲ್ಲ, ಎಲ್ಲರೂ ಸ್ಪೀಕರ್‌ಗಳಾಗುತ್ತಿದ್ದಾರೆ. ಇನ್ನು ಮುಂದೆ ನೀತಿ ನಿಯಮಗಳನ್ನೆಲ್ಲಾ ಗಾಳಿಗೆ ತೂರುವ ಬದಲು ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು (ಬೇರಾವುದನ್ನೂ ಬಳಸದೆ)ಬೆಂಕಿ ಹಾಕಿಯೇ ಸುಟ್ಟುಹಾಕಬೇಕು ಎಂಬಿತ್ಯಾದಿಯಾಗಿ ಅವರು ಮಂಗಗಳಾರತಿ ಮಾಡಿದ್ದೇ ಈ ರಾದ್ಧಾಂತಕ್ಕೆ ಕಾರಣ ಎಂದು ಅಸತ್ಯಾನ್ವೇಷಿಗಳು ವರದ್ದಿ ಕಳುಹಿಸಿದ್ದಾರೆ.

ಅದೂ ಅಲ್ಲದೆ ಸದಸ್ಯರದು ನಾಚಿಕೆಗೇಡಿನ ವರ್ತನೆ ಎಂದು ತಮ್ಮ ಜೀವಮಾನದಲ್ಲಿ ಕಂಡು ಕೇಳರಿಯದ ನಾಚಿಕೆ ಎಂಬ ಪದವನ್ನು ಉಲ್ಲೇಖಿಸಿದ್ದಾರೆ. ಮಾತ್ರವಲ್ಲದೆ ಮಾನ, ಮರ್ಯಾದೆ ಇತ್ಯಾದಿ ಅಸಾಂವಿಧಾನಿಕವಾದ ಪದಗಳನ್ನು ಬಳಸಿದ್ದಾರೆ ಎಂಬುದು ಹೋಂ ಥಿಯೇಟರ್ ಸ್ಪೀಕರ್ ವಿರುದ್ಧ ಕೋಲಸಭೆ ಸದಸ್ಯರ ಆಕ್ರೋಶ.

ಒಟ್ಟಿನಲ್ಲಿ ಸ್ಪೀಕರ್ ಬಂದ್ ಮಾಡಲು ಎಲ್ಲ ಸಂಸದರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಯಾವುದೇ ಮೂಲಗಳು ವರದಿ ಮಾಡಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ‘ಹಾಸ್ಯ ಲೋಕ ಸಭೆ’ ಯ ಕಾರ್ಯ ಕಲಾಪಗಳನ್ನು ದೊಡ್ಡ ರಿಯಾಲಿಟಿ ಶೋ ಮಾಡಿದರೆ ಈ ಐ-ಪಿಲ್ ಬಿಡ್ಡರಿಗಿಂತ ಹೆಚ್ಚಿನ ಹಣಕಾಸಿನ ವಹಿವಾಟಿನಲ್ಲಿ ಸಂ-ಸದರನ್ನು ಹರಾಜು ಹಾಕಬಹುದು ಎಂಬ ಕ್ರಾಂತಿಕಾರಿ ಐಡಿಯಾವನ್ನು ನಾವು ಬಹಿರಂಗಗೊಳಿಸುವುದಿಲ್ಲ.
    ಎಡ ಬಾಧೆಯ ಸ್ಪೀಕರ್ ಸಡನ್ನಾಗಿ ಹೀಗೆ ಮಾತನಾಡಲು ಅವರ ತಲೆಯ ಮೇಲೆ ಬೋಧಿ ಮರದ ಎರಡು ಒಳಗಿದ ಎಲೆಗಳೇ ಕಾರಣ ಎಂದು ಪರಮ ನಾಸ್ತಿಕ ನೆರೆಯ ‘ಹೊರೆ’ ಕರು-ರಣಾ ನಿಧಿ ಹೇಳಿಕೆ ನೀಡಿದ್ದು ನಮಗೆ ಮಾತ್ರ ತಿಳಿದುಬಂದಿದೆ.

    ಪ್ರತ್ಯುತ್ತರಅಳಿಸಿ
  2. ಕೋಲಸಭೆಯ ಸ್ಪೀಕರ್ ಹುದ್ದೆ ಎಂದರೆ ಗಾಂಧೀಜಿಯ ಮೂರು ಮಂಗಗಳಿದ್ದ ಹಾಗೆ.ಒಳ್ಳೆಯದನ್ನು ನೋಡುವದಿಲ್ಲ, ಕೇಳುವದಿಲ್ಲ ಹಾಗು ಮಾತಾಡುವದಿಲ್ಲ ಎಂದು ಅವರು ಮಾರ್ಕ್ಸ್‌ನ ತಲೆಯ ಮೆಲೆ ಕಾಲಿಟ್ಟು ಆಣೆ ಹಾಕಿ ’ಒದರಪ್ಪ’ ಆಗಿಲ್ಲವೆ?

    ಪ್ರತ್ಯುತ್ತರಅಳಿಸಿ
  3. ನಿಮ್ಮ ಬ್ಲಾಗುಗಳ ಪಟ್ಟಿಗೆ ಇದನ್ನು ಸಹ ಸೇರ್ಪಡಿಸಬೇಕಾಗಿ ವಿನಂತಿ

    http://kiranjayanth.blogspot.com/ (ಚುರ್ ಮುರಿ)

    ಧನ್ಯವಾದಗಳು.
    ಕಿರಣ್

    ಪ್ರತ್ಯುತ್ತರಅಳಿಸಿ
  4. ಸುಪ್ರೀತರೆ,
    ಸಂ-ಸದರನ್ನು ಹರಾಜು ಹಾಕಿದ್ದಿದ್ದರೆ ಸಾಕಷ್ಟು ಮೂರು ಕಾಸುಗಳು ಲಭ್ಯವಾಗುತ್ತಿದ್ದವು ಎಂಬುದನ್ನು ನಾವೀಗಲೇ ಬಹಿರಂಗಪಡಿಸಿ ಎಚ್ಚರಿಸುತ್ತಿದ್ದೇವೆ,

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ಆದರೆ ಗಾಂಧೀಜಿಯವರ ಮಂಗಗಳಲ್ಲಿ ಕೊನೆಯ ಮಂಗವೊಂದು ತಪ್ಪಿಸಿಕೊಂಡಿದ್ದೇ ಎಲ್ಲಾ ಕೋಲಾಹಲಕ್ಕೆ ಕಾರಣವಂತೆ. ಆಧುನಿಕ ಯುಗದ ಮಂಗಗಳೂ ಹೀಗೆ ಮಾಡುತ್ತವೆ: ಒಳ್ಳೆಯದನ್ನು ನೋಡುವುದಿಲ್ಲ, ಒಳ್ಳೆಯದನ್ನು ಮಾಡುವುದಿಲ್ಲ, ಒಳ್ಳೆಯದನ್ನು ಆಡುವುದಿಲ್ಲ.

    ಪ್ರತ್ಯುತ್ತರಅಳಿಸಿ
  6. ಕಿರಣ್ ಜಯಂತ್ ಅವರೆ,

    ಬೊಗಳೆ ಬ್ಯುರೋಗೆ ಸ್ವಾಗತ.

    ನೀವು ಕೊಟ್ಟ ಧನ್ಯವಾದಕ್ಕಾಗಿ ನಾವು ನಿಮ್ಮನ್ನು ಲಿಂಕಿಸಿಕೊಂಡಿದ್ದೇವೆ. ಬರ್ತಾ ಇರಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D