ಬೊಗಳೆ ರಗಳೆ

header ads

ಗಾಳ ಹಾಕುವ ಕೋತಿಗಳ ಪತ್ತೆ: ಬೊ.ರ. ನಾಪತ್ತೆ!

(ಬೊಗಳೂರು ಗಾಳಗಾರಿಕೆ ಬ್ಯುರೋದಿಂದ)
ಬೊಗಳೂರು. ಜೂ.12- ಬೊಗಳೂರಿನ ವಿಶೇಷವಾಗಿ ಬೊಗಳೆ ರಗಳೆ ಬ್ಯುರೋದ ಮಂದಿ ತಲೆಮರೆಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಅವರಿಗೆಲ್ಲ ಮೀನು ಹಿಡಿಯಲು ತಿಳಿದಿರುವುದೇ ಇದಕ್ಕೆ ಪ್ರಧಾನ ಕಾರಣವಾಗಿದೆ.

ಮೀನು ಹಿಡಿಯಲು ತಿಳಿದಿರುವ ಮಂಕಿಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ಎಂದು ಇಲ್ಲಿ ವರದಿ ಪ್ರಕಟವಾಗಿರುವ ಬೆನ್ನಿಗೇ ಬೊಗಳೆ ರಗಳೆ ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಪತರಗುಟ್ಟಲಾರಂಭಿಸಿದ್ದರು. ಮಾತ್ರವಲ್ಲದೆ, ಈ ಅಜ್ಞಾನಿಗಳು ತಮ್ಮನ್ನೇ ಪತ್ತೆ ಹಚ್ಚಿರಲೂಬಹುದೇ ಎಂಬ ಶಂಕೆಯಿಂದ ಪರಾರಿಯಾಗಲು, ನಾಪತ್ತೆಯಾಗಲು, ತಲೆಮರೆಸಿಕೊಳ್ಳಲು, ಅಡಗಿ ಕೂರಲು... ಇತ್ಯಾದಿ ಎಲ್ಲದಕ್ಕೂ ಸಿದ್ಧತೆಗಳನ್ನು ಮಾಡತೊಡಗಿದ್ದಾರೆ ಎಂದು ನಿಗೂಢ ರಹಸ್ಯ ತಾಣವೊಂದರಿಂದ ಬ್ಯುರೋದ ವರದ್ದಿಗಾರರು ಎಸ್ಎಂಎಸ್ ಮೂಲಕ ವರದಿ ಕಳುಹಿಸಿದ್ದಾರೆ.

ಈ ಕುರಿತು ತೀವ್ರ ಸಂಚೋದನೆ ಕೈಗೊಂಡ ಬೊ.ರ., ಹಲವಾರು ಚಿತ್ರ ವಿಚಿತ್ರವಲ್ಲದ, ಸಾಮಾನ್ಯ ಸಂಗತಿಗಳನ್ನೆಲ್ಲಾ ಬಯಲಿಗೆಳೆದಿದೆ. ಇದೇನೂ ಹೊಸ ಸಂಚೋದನೆಯಲ್ಲ. ಈ ಹಿಂದೆಯೇ ನಮ್ಮ ಜಾರಕಾರಣಿಗಳು ಗಾಳ ಹಾಕಿ ಮೀನು ಹಿಡಿಯುತ್ತಿರುವುದನ್ನು ಕರಗತ ಮಾಡಿಕೊಂಡು, ಬೇರೆಯವರಿಗೂ ಅದನ್ನು ಕಲಿಸುವಷ್ಟರ ಮಟ್ಟಿಗೆ ಪ್ರಾವೀಣ್ಯ ಸಾಧಿಸಿದ್ದಾರೆ. ಇದರ ಬಗ್ಗೆ ನೂರಾರು ವರ್ಷಗಳ ಹಿಂದೆಯೇ ಬೊಗಳೆ ರಗಳೆ ಬ್ಯುರೋ ಇಲ್ಲಿ ವರದಿ ಮಾಡಿತ್ತು ಎಂದು ನಮ್ಮ ಸೊಂಪಾದಕರು ಚಿರಸ್ಮರಣೆ ಮಾಡಿಕೊಂಡಿದ್ದಾರೆ.

ಇದೀಗ ಕರ್ನಾಟಕದಲ್ಲಿ ನಾಟಕಗಳ ತಂಡಕ್ಕೆ ಕೊಂಚ ವಿರಾಮ ಸಿಕ್ಕಂತೆ ಕಂಡುಬಂದರೂ, ವಿರಾಮದಲ್ಲಿ ಬೇಸರ ಕಳೆಯುವುದಕ್ಕಾಗಿ ಗಾಳಗಾರಿಕೆ, ಮೀನುಗಾರಿಕೆ ಇತ್ಯಾದಿ ಎಲ್ಲ ಸೌಲಭ್ಯಗಳೂ ಇವೆ. ಹೀಗಾಗಿ ಬಿಜ್ಜೆಪ್ಪಿ ಸರಕಾರ ಸ್ಥಿರವಾಗಿರುತ್ತದೆ ಎಂದು ತೋರಿಕೆಗೆ ಕಂಡು ಬಂದರೂ 6 ಮೀನುಗಳು ನೀರಿನಿಂದ ಹೊರ ತೆಗೆದಂತೆ ಆಗಾಗ್ಗೆ ಚಡಪಡಿಸುತ್ತಲೇ ಇವೆ. ಅವುಗಳಿಗೆ ಎಲ್ಲಿ ಒಳ್ಳೆಯ ನೀರು ಸಿಗುತ್ತದೋ ಅಲ್ಲಿಗೇ ಮತ್ತೆ ಹಾರಿದರೆ ಆಶ್ಚರ್ಯವೇನಿಲ್ಲ ಎಂಬ ಕಾರಣಕ್ಕೆ, ಅಧಿಕಾರಕ್ಕೇರಲು ಸಾಧ್ಯವಾಗದೆ ಚಡಪಡಿಸುತ್ತಿರುವವರು ಈ ಮೀನುಗಳನ್ನು ಹಿಡಿಯಲು ಗಾಳ ಹಾಕುತ್ತಲೇ ಇರುತ್ತಾರೆ.

ಬಹುಶಃ ಅಜ್ಞಾನಿಗಳು ಇವರನ್ನೂ ಪತ್ತೆ ಮಾಡಿರಬಹುದೇ? ಎಂಬುದು ಎಲ್ಲರ ಶಂಕೆಗೆ ಕಾರಣವಾಗುವ ಬೊ.ರ.ಕ್ಕೇ ಮೂಡಿರುವ ಶಂಕೆಗಳಲ್ಲೊಂದಾಗಿದೆ. ತನಿಖೆ ನಡೆಯುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಸದ್ಯಕ್ಕೆ ಗಾಳ ಹಾಕುವ ಕೋತಿಗಳು ಕರ್ನಾಟಕ ಸರಕಾರದಲ್ಲೇ ಇವೆ, ಇವು ಕೆಲಸಕ್ಕೆ ಬಾರದ, ನಾಲಾಯಕ್ ಪಕ್ಷೇತರರಿಗೆ ಗಾಳ ಹಾಕಿ ಈಗ ಸದ್ಯಕ್ಕೆ ಉಸಿರಾಟದ ಸ್ಥಿತಿಯಲ್ಲಿದೆ.
    ಇನ್ನು ದರಿದ್ರ ಕೇಂದ್ರ ಸರಕಾರವಂತೂ ಅಲ್ಪಸಂಖ್ಯಾತರ, ದೇಶದ್ರೋಹಿಗಳ, ಬುದ್ಧಿಇಲ್ಲದ ಜೀವಿಗಳ, ದಲಿತರ, ಐ.ಎಸ್. ಐ ಏಜೆಂಟರ, ಅಲ್.ಟಿ.ಟಿ.ಇಗಳ, ನಕ್ಸಲೈಟ್ ಗಳ ಒತ್ತಾಯದ ಮೇರೆಗೆ ತನ್ನ ಗಾಳವನ್ನು ಅವರಿಗೆ ಹಾಕಿ, ಮತ್ತೆ ಅಧಿಕಾರಕ್ಕೇರಿ ಈ ದೇಶವನ್ನೇ ಮಾರಿತಿಂದು ಸದ್ಯಕ್ಕೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿ, ಫಾರಿನ್ ನಲ್ಲಿ ಸೆಟ್ಲ್ ಆಗುವ ಕನಸು ಕಾಣುತ್ತಿದೆ. ಈ ಗಾಳಕ್ಕೆ ಯಾರು ಬೀಳುತ್ತಾರೋ ಕಾದು ನೋಡಿ.

    ಪ್ರತ್ಯುತ್ತರಅಳಿಸಿ
  2. ಬುಡುಬುಡುಕಿಯವನ (ಅಸತ್ಯ ಅನ್ವೇಷಿಯ) ಹಾಡು:

    “ಮೀನು ಹಿಡಿಯೊ ಕೋತೀನ್ನ
    ನೋಡೀರೇನಣ್ಣಾ,
    ಕೋತಿ ಆಡಿಸೊ ನಾನು ಯಾರು
    ಗೊತ್ತೇನೇನಣ್ಣಾ?
    ಬುಡು ಬುಡುಕ್ ಬುಡುಕ್,
    ಬುಡು ಬುಡುಕ್ ಬುಡುಕ್!”

    ಪ್ರತ್ಯುತ್ತರಅಳಿಸಿ
  3. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಹೆಲೋ! ಅಸತ್ಯ ಅನ್ವೇಷಿಯವರೇ....ನಮ್ಮ ರೈಲ್ವೇ ಮಂತ್ರಿ...ಅದೇ, ಇಂಡಿಯಾಸ್ ಫೇಮಸ್ ಕಿಡ್ನ್ಯಾಪರ್. ..ಲಾಲೂ ಯಾದವ್ ತನ್ನ ಸ್ವಂತ ಬ್ಲಾಗ್ ಒಂದನ್ನು ಪಬ್ಲಿಷ್ ಮಾಡಿದ್ದಾನಂತೆ. ಅವನು ನಿಮಗೇ ಗಾಳ ಹಾಕುವ ಬಗ್ಗೆ ಯೋಚಿಸುತ್ತಿದ್ದಾನಂತೆ....ಸ್ವಲ್ಪ ಎಚ್ಚರದಿಂದಿರಿ ಮಾರಾಯ್ರೆ...

    ಪ್ರತ್ಯುತ್ತರಅಳಿಸಿ
  5. ಗುರು ಅವರೆ,
    ಗಾಳ ಹಾಕುವ ಕೋತಿಗಳು ಸರಕಾರದಲ್ಲೇ ಇವೆ ಎಂಬೋ ಸತ್ಯವನ್ನು ಬಯಲಾಗಿಸಿ, ನಮ್ಮ ಬ್ಯುರೋದವರ ಉದ್ಯೋಗಕ್ಕೆ ತಡೆಯೊಡ್ಡುವ ನಿಮ್ಮ ಪ್ರಯತ್ನ ಶ್ಲಾಘನೀಯ. ದೇಶ ಮಾರುವವರಿಗೇ ಗಾಳ ಹಾಕುವುದಂತೂ ನಮ್ಮ ದೇಶ ಉದ್ಧಾರವಾಗುವ ಲಕ್ಷಣಗಳಲ್ಲೊಂದು ಎಂದು ನಮಗೆ ಸ್ಪಷ್ಟವಾಗಿ ಗೋಚರವಾಗಿದೆ.

    ಪ್ರತ್ಯುತ್ತರಅಳಿಸಿ
  6. ಸುನಾಥರೆ,
    ನಮ್ಮ ಹಾಡನ್ನು ನಮಗೇ ಬರೆದು ನೀವು ಕೃತಾರ್ಥರಾಗಿದ್ದೀರಿ...
    ಆದ್ರೆ ಅದು ಸದ್ದುಮಾಡೋದು ಮಾತ್ರ.... ಚಡಪಡಿಕ್ ಚಡಪಡಿಕ್ ಅಂತ... !!!!

    ಪ್ರತ್ಯುತ್ತರಅಳಿಸಿ
  7. ಗುರು ಅವರೆ,
    ನಮ್ಮ ಬ್ಯುರೋದ ಮಂದಿ ಆಲೂ ಪ್ರಸಾದರ ಬಲೆಗೆ ಬೀಳುವುದು ಗ್ಯಾರಂಟಿ. ಯಾಕೆಂದರೆ ಅವರೀಗಾಗಲೇ ಮೇವು ತಿಂದು ತಿಂದು ಶೇಖರಿಸಿಟ್ಟಿದ್ದಾರೆ... ಆ ಮೇವಿನ ಆಸೆಗಾದರೂ... ದನ, ನಾಯಿ, ಕೋತಿಗಳೆಲ್ಲಾ ಮುಗಿಬೀಳುತ್ತವೆ... ಒಟ್ಟಿನಲ್ಲಿ ನಮಗೆ ಸುಗ್ಗಿ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D