ಬೊಗಳೆ ರಗಳೆ

header ads

ಶಾಂತಿಗೆ ಕಾರಣ ಹಣಗೊಬ್ಬರ!

(ಬೊಗಳೂರು ಸುಮ್ಮನಿರುವ ಬ್ಯುರೋದಿಂದ)
ಬೊಗಳೂರು, ಜೂ.೨೬- ದೇಶದಲ್ಲಿ ಮತ್ತು ಭಯೋತ್ಪಾದನೆ, ಹತ್ಯಾಕಾಂಡ ಇತ್ಯಾದಿಗಳಿಗೆ ಇತ್ತೀಚೆಗಿನ ದಿನಗಳಲ್ಲಿ ಕಡಿವಾಣ ಬಿದ್ದಿದ್ದು, ಇದಕ್ಕೆ ಕಾರಣವನ್ನು ಬೊಗಳೆ ರಗಳೆಯ ಹೊಸ ಬ್ಯುರೋ ಪತ್ತೆ ಹಚ್ಚಲು ನಿರ್ಧರಿಸಿದ ತಕ್ಷಣವೇ ಎರಡು ಅಂಶಗಳು ಪತ್ತೆಯಾಗಿವೆ.

ಮೊತ್ತ ಮೊದಲನೆಯದಾಗಿ, ರೈತರಿಗೆ ರಸಗೊಬ್ಬರವೂ ದೊರೆಯುತ್ತಿಲ್ಲ, ಇದರಿಂದ ಕೀಟ ನಾಶಕಗಳೂ ದೊರೆಯುತ್ತಿಲ್ಲ. ಹೀಗಾಗಿ ಆತ್ಮಹತ್ಯೆಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಎರಡನೆಯದಾಗಿ, ಇದೀಗ ದೇಶಾದ್ಯಂತ ಹಣಗೊಬ್ಬರದ ಕೋಲಾಹಲ. ಹಣಗೊಬ್ಬರವು ೧೧.೦೫ ಶೇ. ಮೀರಿರುವುದರಿಂದ ಅಗತ್ಯವಸ್ತುಗಳು ಎಟುಕಲಾರದಷ್ಟು ಹುಳಿಯಾಗಿಬಿಟ್ಟಿವೆ. ಜನ ಸಾಮಾನ್ಯ ತತ್ತರಿಸುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಿ ಆಗಿಬಿಟ್ಟಿರುವುದರಿಂದ ಅದರ ಬಗ್ಗೆ ದೇಶದ ಚುಕ್ಕಾಣಿ ಹಿಡಿದಿರುವ ಯಾರು ಕೂಡ ಗಮನ ಹರಿಸುತ್ತಿಲ್ಲ ಎಂಬುದು ಡೀಫಾಲ್ಟ್ ಆಗಿರುವ ಸಂಗತಿ.

ಇದನ್ನೆಲ್ಲಾ ಬದಿಗಿಟ್ಟು, ಭಯೋತ್ಪಾದಕರ ದಾಳಿ, ಬಾಂಬ್ ಸ್ಫೋಟ ಕೂಡ ಕಡಿಮೆಯಾಗಿರುವುದಕ್ಕೆ ಹಣಗೊಬ್ಬರವೇ ಕಾರಣ. ಈ ಉಬ್ಬರಿಸುವ ಹಣದ ಅಬ್ಬರದಿಂದಾಗಿ , ಗನ್ನು ಇತ್ಯಾದಿಗಳು ಕೂಡ ಭಯೋತ್ಪಾದಕರ ಕೈಗೆಟುಕಲಾರದಷ್ಟು ದುಬಾರಿಯಾಗಿಬಿಟ್ಟಿವೆ. ಇದೇ ಕಾರಣಕ್ಕೆ ದೇಶದಲ್ಲಿ ಒಂದಷ್ಟು ಶಾಂತಿಯ ವಾತಾವರಣ ಕಂಡುಬರುತ್ತಿದೆ. ಅಥವಾ ಅಶಾಂತಿ ಕಂಡು ಬಂದರೂ ವರದಿಯಾಗುತ್ತಿಲ್ಲ. ಇದಕ್ಕೆ ಕಾರಣ ಹಣದುಬ್ಬರದ ಬಿಸಿ ವರದಿಗಾರಿಕೆಗೂ ತಟ್ಟಿದ್ದು, ಒಂದು ವರದ್ದಿ ಕಳುಹಿಸಿದರೆ ಸಾಕಷ್ಟು ಹಣ ಖರ್ಚಾಗುತ್ತದೆ. ಹೀಗಾಗಿ ನಾವು ವರದ್ದಿ ಕಳುಹಿಸಿದರೆ ಬದುಕುವುದಕ್ಕಾಗಿ ತಿನ್ನಲು ಏನು ಮಾಡುವುದು ಎಂಬ ಯೋಚನೆಯಲ್ಲಿ ವರದ್ದಿಗಾರರೆಲ್ಲರೂ ಸುಮ್ಮನಾಗಿಬಿಟ್ಟಿದ್ದಾರೆ.

ದೇಶದಲ್ಲಿ ದ್ವೇಷದ ವಾತಾವರಣವಿಲ್ಲದೆ, ಎಲ್ಲೆಲ್ಲೂ ಶಾಂತಿಯೇ ಗೋಚರಿಸುತ್ತಿರುವುದರಿಂದ ಉಪ (UPA) ಸರಕಾರವು ಈ ಶಾಂತಿಯನ್ನು ಮತ್ತು ಅ ಶಾಂತಿಯನ್ನು ತಾವೇ ಸ್ಥಾಪಿಸಿದ್ದೇವೆ ಎಂದು ಎದೆ ತಟ್ಟಿಕೊಂಡು ಹೇಳಲಾರಂಭಿಸಿದೆ. "ಜನಗಳೇ ಮತ್ತು ದನಗಳೇ, ಹಣಗೊಬ್ಬರದ ಬಗ್ಗೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ, ಎಲ್ಲೆಲ್ಲೂ ಶಾಂತಿ ಇರುವುದರಿಂದ ನೆಮ್ಮದಿಯಲ್ಲಿ ಇರಬಹುದು, ಆದರೆ ಆ ಶಾಂತಿಯನ್ನು ನಿಮ್ಮ ಮನೆಯೊಳಗೇ ಇಟ್ಟುಕೊಳ್ಳಬೇಡಿ. ಚುನಾವಣೆಗಳು ಬರುವಾಗ ಜಾರಕಾರಣಿಗಳಿಗೆ ಅಗತ್ಯವಾಗಿ ಅದನ್ನು ಕೆಡಿಸಬೇಕಾಗಿದೆ" ಎಂಬ ಎಚ್ಚರಿಕೆಯ ಸೂಚನೆಯನ್ನೂ ಉಪ ಸರಕಾರ ಜನತೆಗೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಹಣಗೊಬ್ಬರದ ಉತ್ಪಾದನೆಯಲ್ಲಿ ವಿಕ್ರಮ ಸ್ಥಾಪಿಸುವದಕ್ಕೆ ಕಾರಣರಾದ ಅನರ್ಥ ಮಂತ್ರಿ ದಿಗಂಬರಮ್ ಹಾಗು ನಿಧಾನ ಮಂತ್ರಿ ಸಿಂಗಣ್ಣ ಇವರನ್ನು ಗಿನೆಸ್ ಬುಕ್ಕಿನಲ್ಲಿ ಏರಿಸಲು ವಿನಂತಿ.

    ಪ್ರತ್ಯುತ್ತರಅಳಿಸಿ
  2. ಒಬ್ಬ ಭಯೋತ್ಪಾದಕನನ್ನು ಪ್ರಧಾನಮಂತ್ರಿ ಮಾಡಿ ಬೊಗಳಿದರೆ ಎಂತಯ್ಯ?.
    ಒಬ್ಬ ಎಲ್.ಟಿ.ಟಿ.ಇ ಏಜೆಂಟನ್ನು ಹಣಕಾಸಿನ ಮಂತ್ರಿ ಮಾಡಿ ತೆಗಳಿದರೆ ಎಂತಯ್ಯ?
    ಒಬ್ಬ ಐ.ಎಸ್.ಐ. ಏಜೆಂಟನ್ನು ವಿದೇಶಾಂಗ ಮಂತ್ರಿ ಮಾಡಿ ಕೊರಗಿದರೆ ಎಂತಯ್ಯ?
    ಈ ಮೂವರನ್ನು ಗಿಲ್ಗಿಟ್ ಆಟ ಆಡಿಸುತ್ತಿರುವ ಚೀನಾ ಏಜೆಂಟ್ ಕಾರಟ್,ರಾಜಾ, ಬರ್ಧನ್, ಯೆಚೂರಿಗಳ ಆಟ ನೋಡಿ ಚೆನ್ನಮಲ್ಲಿಕಾರ್ಜುನ ದೇವ ದೇಶಬಿಟ್ಟು ಓಡಿಹೋದನಯ್ಯ...
    ಇಂತಾದರೆ ಎಂತಯ್ಯ ಸರ್ವಜ್ಞನೊಲಿವ ಪರಿ...ಈ ದೇಶ ಆಗಲಿದೆ ಭಿಕಾರಿ...ಇವರಿಗೆ ಓಟು ಕೊಟ್ಟ ಗೆಲ್ಲಿಸಿದವರಿಗೆ ಕುಷ್ಟರೋಗ ಬಂದರೂ ಕಡಿಮೆಯೇ ಸರ್ವಜ್ಞ್ನ!!!!

    ಪ್ರತ್ಯುತ್ತರಅಳಿಸಿ
  3. Hi, I came through your site , I really don't wanna sound like spam but hey, would you like to link my site maxamator.com, we are emerging SEO Specialists / PHP developer from India, I’ll show my link love to you from my Pr5 sites :)

    Let me know if you are interested.

    Deekay


    Email: - dk@maxamator.com

    ಪ್ರತ್ಯುತ್ತರಅಳಿಸಿ
  4. ಸುನಾಥರೆ,

    ನಿಮ್ಮ ವಿನಂತಿಯನ್ನು ಮೇಲಿನ ಲೋಕಕ್ಕೆ ಕಳುಹಿಸಲಾಗಿದೆ. ಹಣಗೊಬ್ಬರದಿಂದ ತತ್ತರಿಸಿ ಈಗಾಗಲೇ ಪರಲೋಕ ಸೇರಿದ ಅದೆಷ್ಟೋ ಮಂದಿ ಮತದಾರರು ಅಲ್ಲೂ ಇದ್ದಾರೆ ಅಂತ ಕೇಳಿಬಲ್ಲೆವು. ಅವರೆಲ್ಲರೂ ಖಂಡಿತ ದಿಗಂಬರಂ ಮತ್ತು ಸಿಂಗಣ್ಣರಿಗೇ ಮತ ಹಾಕುತ್ತಾರೆ.

    ಪ್ರತ್ಯುತ್ತರಅಳಿಸಿ
  5. ಗುರು ಅವರೆ,
    ನಿಮ್ಮ ಅನಿರ್‌ವಚನಗಳನ್ನು ಕೇಳಿ ಆಧುನಿಕ ವಚನಕಾರರು ಆತ್ಮವನ್ನು ಹತ್ಯೆ ಮಾಡಿಕೊಳ್ಳಲು ಓಡಾಡುತ್ತಿದ್ದಾರೆ ಅಂತ ನಮಗೆ ಗೊತ್ತಾಗಿದೆ. ಸರ್ವಜ್ಞ ಕೂಡ ಧಡಕ್ಕನೇ ಮೇಲೆದ್ದು ಕಣ್ಣುಗಳನ್ನು ಸವರಿಕೊಂಡು ಮತ್ತೊಮ್ಮೆ ನೋಡಿಕೊಳ್ಳುತ್ತಿದ್ದಾರಂತೆ.

    ಪ್ರತ್ಯುತ್ತರಅಳಿಸಿ
  6. ಮನೋಜರೆ,
    ಸ್ವಲ್ಪ ಸ್ವಲ್ಪ ಅರ್ಥವಾಯಿತು. SEO, PHP, Pr5 ಇದೆಲ್ಲಾ ಏನೂಂತ ಗೊತ್ತಿಲ್ಲ. ಏನೋ ಒಳ್ಳೇ ಕೆಲ್ಸ ಮಾಡ್ತಿರ್ಬೇಕೂಂತ ಕಾಣಿಸುತ್ತೆ... ಜಯವಾಗಲಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D