ಬೊಗಳೆ ರಗಳೆ

header ads

ನಾಯಕರ ಬಾಯಿಯಲ್ಲಿ 'ನಾಯಿ'ಕರು: ಪ್ರತಿಭಟನೆ

(ಬೊಗಳೂರು ನಾಯಿ-ಕರ ಬ್ಯುರೋದಿಂದ)
ಬೊಗಳೂರು, ಡಿ.5- ಇಲ್ಲ, ಇಲ್ಲ, ಶ್ವಾನ ಸಂಘದ ಅಧ್ಯಕ್ಷರು ಇಷ್ಟೊಂದು ಕುಪಿತರಾಗಿರುವುದನ್ನು ಜೀವಮಾನದಲ್ಲೇ ಬೊಗಳೆ ಬ್ಯುರೋ ಕಂಡಿಲ್ಲ. ನಿಷ್ಠೆಗೆ, ಪ್ರಾಮಾಣಿಕತೆಗೆ ಹೆಸರಾಗಿರುವ ತಮ್ಮ ಹೆಸರನ್ನು ಈ ಹೊಣೆಗೇಡಿ ರಾಜಕಾರಣಿಗಳ ಬಾಯಲ್ಲಿ ಕೇಳಿ ಅವರು ದಿಗಿಲುಗೊಂಡಿದ್ದರು.

ಈ ಕಾರಣಕ್ಕೆ, ತ್ವರಿತವಾಗಿ ಬೊಗಳೆ ರಗಳೆಯನ್ನು ಮಾತ್ರವೇ ಪತ್ರಿಕಾ ಗೋಷ್ಠಿಗೆ ಕರೆದು ಹೀನಾಮಾನವಾಗಿ ಜಾರಕಾರಣಿಗಳ ಮೇಲೆ ಕೆಂಡ ಕಾರಿರುವ ಅವರು, ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆಗೆ ಹೆಸರಾದವರು ನಾವು. ನಿಷ್ಠೆ, ಪ್ರಾಮಾಣಿಕತೆ, ಜನ ಸೇವೆ ಮುಂತಾದವು ಈ ನಾಯಿಕರ ಬಾಯಲ್ಲಿ ಬಂದರೆ ಆ ಶಬ್ದಗಳಿಗೇ ಸಂಚಕಾರ ಎಂಬಷ್ಟರ ಮಟ್ಟಿಗೆ ಕುಲಗೆಟ್ಟು ಹೋಗಿದೆ ನಮ್ಮ ವ್ಯವಸ್ಥೆ. ಇಂಥದ್ದರಲ್ಲಿ ನಮ್ಮ ಹೆಸರು ಆ ಜಾರಕಾರಣಿಗಳ ಬಾಯಲ್ಲಿ ಬರುವಂತೆ ಮಾಡಿದ್ದು ಯಾರು ಎಂದು ಬಾಲ ಅಲ್ಲಾಡಿಸಲು ಜಾಗವಿಲ್ಲದಿದ್ದರೂ ಜೋರಾಗಿಯೇ ಬಾಲ ಅಲುಗಾಡಿಸುತ್ತಾ ಬೊಗಳಿದರು.

ಇದನ್ನು ಇಡೀ ವಿಶ್ವದ ಅಷ್ಟೇಕೆ, ನಮ್ಮ ಬೊಗಳೂರಿನ ಶ್ವಾನಸಂಘಗಳು ಪ್ರತಿಭಟಿಸಲಿವೆ. ಈ ಜಾರಕಾರಣಿಗಳು ಹೋದಲ್ಲೆಲ್ಲಾ ಎರಡೂ ಕೈಮುಗಿಯುವ ಮಾದರಿಯಲ್ಲಿ, ನಾವು ಕೂಡ ಅವರನ್ನು ಕಂಡ ತಕ್ಷಣ ಒಂದು ಕಾಲನ್ನು ಮಾತ್ರವೇ ಎತ್ತಿ ಪ್ರತಿಭಟನೆ ನಡೆಸಲಿದ್ದೇವೆ. ಇದರಿಂದ ದೇಶದಲ್ಲಿ ಹೆಚ್ಚಾಗಿರುವ ಉಗ್ರಗಾಮಿಗಳ ಹಾವಳಿಯನ್ನು ಕೂಡ ಪರಿಣಾಮ ಬೀರದಂತೆ ಮಾಡಬಹುದು ಎಂದು ಶ್ವಾನಶ್ರೇಷ್ಠರು ಹೇಳಿದರು.

ಅದು ಹೇಗೆ ಎಂದು ತಬ್ಬಿಬ್ಬಾದ ಬೊಗಳೆಯೆದುರು ಜೋರಾಗಿಯೇ ಬೊಗಳಿದ ಅವರು, ಅಷ್ಟೂ ಗೊತ್ತಾಗಲ್ವೇನ್ರೀ..? ಉಗ್ರಗಾಮಿಗಳು ಅಲ್ಲಲ್ಲಿ ಬಾಂಬ್ ಬಿಸಾಕಿ ಹೋಗುತ್ತಾರೆ. ಅವುಗಳು ಸ್ಫೋಟಗೊಳ್ಳದಂತೆ ನಾವು ಕಾಲೆತ್ತಿ ಬಾಂಬ್ ಶಾಮಕ ಪದಾರ್ಥವನ್ನು ಸಿಂಪಡಿಸುತ್ತೇವೆ, ಇದರಿಂದ ಜಾರಕಾರಣಿಗಳಿಗೆ ಪ್ರತಿಭಟನೆ ಸೂಚಿದಂತೆಯೂ ಆಗುತ್ತದೆ, ನಮ್ಮ ಕರ್ತವ್ಯನಿಷ್ಠೆಯ ಮೂಲಕ ದೇಶದ ಜನರನ್ನು ರಕ್ಷಿಸಿದಂತೆಯೂ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಬೊಗಳೂರು ಬ್ಯುರೋದ ಮಂದಿ ಕಕ್ಕಾಬಿಕ್ಕಿಯಾಗಿ ಈ ಹೇಳಿಕೆಯನ್ನು ಇನ್ನೂ ಕೇಳಿಸಿಕೊಳ್ಳುತ್ತಾ, ಅರಗಿಸಿಕೊಳ್ಳಬೇಕೆಂಬಷ್ಟರಲ್ಲಿ ಮತ್ತೊಂದು ಬಾಂಬನ್ನೂ ಅವರು ಹಾಕಿದರು. ಇತ್ತೀಚೆಗೆ ಬಾಂಬ್ ನಿಷ್ಕ್ರಿಯ ದಳಕ್ಕೆ ನಿಷ್ಠಾವಂತ ನಾಯಿಗಳ ಬದಲು, ಕಂತ್ರಿನಾಯಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿಯೇ, ಬಾಂಬ್ ಸ್ಫೋಟದ ಪೂರ್ವ ಸೂಚನೆ ದೊರೆತರೂ ನಮ್ಮ ನಾಯಿ-ಕರು ಯಾವುದೇ ರೀತಿಯಲ್ಲಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ರಹಸ್ಯವನ್ನೂ ಅವರು ಬಿಚ್ಚಿಟ್ಟರು.

ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳಕ್ಕೆ "ನಾನು ಜನನಾ'ಯಿ'ಕ" ಎಂದು ಬೊಗಳೆ ಬಿಡುವ ಮಂದಿ ಶಿಫಾರಸು ಮಾಡುವವರನ್ನೇ ನೇಮಿಸಿಕೊಳ್ಳಲಾಗುತ್ತದೆ. ಹೀಗಾಗಿ ಅವರಿಗೆ ಕಮ್ಮಿ ನಿಷ್ಠೆ. ಅರ್ಹರನ್ನು ಮಾತ್ರವೇ ಶ್ವಾನದಳಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾಗರಿಕರ ಶ್ವಾಸ ಹೋಗಬಹುದು ಎಂದವರು ಎಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಲಕ್ಷ್ಮಿ ಅವರೆ,
    ಶ್ವಾನಗಳ ಪರಿಸ್ಥಿತಿಯನ್ನು ಇಲ್ಲಿ ಸಮರ್ಥವಾಗಿ ಮಲ್ಟಿಮೀಡಿಯಾ ಧ್ವನಿಯ ಮೂಲಕ ಬಿಂಬಿಸಿದ್ದೀರಿ. ಆದ್ರೆ ಇದಕ್ಕೆ ಧನ್ಯವಾದ ಹೇಳಿದ್ರೆ, ಶ್ವಾನ ಸಂಘದವರು ನಮ್ಮನ್ನೂ ತಪ್ಪಾಗಿ ತಿಳಿದುಕೊಂಡು, ಸಂಘಕ್ಕೆ ಸೇರಿಸಿಕೊಂಡಾರೆಂಬ ಭಯ. ;-)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D