ಬೊಗಳೆ ರಗಳೆ

header ads

'ಕೇಶಿ'ರಾಜ ವೇದೇಗೌಡ ನುಡಿಸಿರಿಯಲ್ಲಿ ಪ್ರತ್ಯಕ್ಷ!

(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಡಿ.8- ಮೂಡುಬಿದ್ರಿಯಲ್ಲಿ ನುಡಿಸಿರಿ ಸಮ್ಮೇಳನಕ್ಕೆ ಬರಲೇ ಇಲ್ಲ ಎಂಬ ಅಪಹಾಸ್ಯ, ಅಪವಾದ ಮತ್ತು ಅಪ-ರೋಪದಿಂದ ಕಂಗೆಟ್ಟ ಬೊಗಳೆ, ಅಲ್ಲಿ ಕಂಡುಬಂದ ವಿಷಯವೊಂದನ್ನು ಸಂಚೋದಿಸಿ ಇಲ್ಲಿ ಪ್ರಕಟಿಸಿದೆ. ನುಡಿಸಿರಿಗೆ ಬಂದವರಿಗೆ ಅನ್ವೇಷಿ ಕಾಣಿಸದೇ ಇರುವುದಕ್ಕೆ ಅಲ್ಲಿಗೆ ವೇದೇಗೌಡರು ಬಂದಿದ್ದೇ ಕಾರಣ ಎಂಬುದನ್ನು ಇದೀಗ ಪತ್ತೆ ಹಚ್ಚಲಾಗಿದೆ.

ಮೊದಲ ದಿನ ಒಳಗಿದ್ದ ವೇದೇಗೌಡರು, ಬಳಿಕ ಆಳ್ವಾಸ್ ಕಾಲೇಜಿನ ಬಾಗಿಲಲ್ಲೇ ಬಂದು, ಮಿರಿ ಮಿರಿ ಮಿಂಚುವ ಬೆಳ್ಳಿಬಣ್ಣದ ತಲೆಗೂದಲು ಸವರಿಕೊಳ್ಳುತ್ತಿದ್ದರು! ಅರೆ! ವೇದೇಗೌಡರಿಗೆ ತಲೆಯೇ ಇಲ್ಲ, ಹೀಗಿರುವಾಗ ಕೂದಲೆಲ್ಲಿಂದ? ಬೊಗಳೆ ಬ್ಯುರೋದವರು ಬೊಗಳೆ ಬಿಡುತ್ತಿದ್ದಾರೆ ಎಂದು ಓದುಗರು ಪ್ರಶ್ನಿಸಬಹುದು. ಇದಕ್ಕೂ ಉತ್ತರ/ಕಾರಣ/ನೆಪ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.

ಹೌದು... ವೇದೇಗೌಡರು ಅಲ್ಲಿದ್ದರು. ಜನರನ್ನು ಆಕರ್ಷಿಸುತ್ತಿದ್ದರು. ಅದೇ ಬೆಳ್ಳಿಕೂದಲ ಮೇಲೆ ಕೈಯಾಡಿಸಿಕೊಳ್ಳುತ್ತಾ... ವೇದೇಗೌಡರ ಈ ದುಸ್ಥಿತಿಗೆ ಕಾರಣ... ವಾರೆಕೋರೆಯಾಗಿ ತಾವು ಸಂಚೋದಿಸಿದ ಬಕ್ರೀ ಮೂತ್ರವನ್ನು ವೇದೇಗೌಡರ ತಲೆಗೆ ಹಚ್ಚಿ ಅಲ್ಲಿ ಮಾತ್ರ ಕೂದಲು ಬೆಳೆಯುವಂತೆ ಮಾಡಿದವರು ಪಂಚ್ ಶೆಟ್ಟರು. ಅದೇ ಬಾಯಿಯ ಸುತ್ತಮುತ್ತಲಿನ ಭಾಗದಲ್ಲಷ್ಟೇ ಕುರುಚಲು ಗಡ್ಡ ಇರಿಸಿಕೊಂಡು, ಕೈಯಲ್ಲೊಂದು ಶಾಯಿಪೆನ್ನನ್ನು ಖಡ್ಗದಂತೆ ಝಳಪಿಸುತ್ತಾ, ಕಾಲೇಜಿನ ದ್ವಾರದ ಬಲಭಾಗದಲ್ಲಿ ಅಲ್ಲಿಗೆ ಬಂದವರನ್ನೆಲ್ಲಾ ವಶೀಕರಣ ಮಾಡಿದಂತೆ ಸೆಳೆಯುತ್ತಿದ್ದರು!

ಅವರ ಸಂಚೋದನೆಯ ಫಲವೇ ವೇದೇಗೌಡರ ಬಕ್ಕ ತಲೆಯಲ್ಲಿ (ಹೊರಗೆ ಮಾತ್ರ, ಒಳಗೆ ಗೊತ್ತಿಲ್ಲ) ಕಾಡು ಬೆಳೆದದ್ದು. ಈ ಸುದ್ದಿಯನ್ನು ವಾರೆಕೋರೆ ವರದ್ದಿಗಾರ ಖಾಲಿ ತಲೆಮಾರ್ ಅವರು ತಂದುಕೊಟ್ಟಿದ್ದು, ಈ ಪರಮೌಷಧವನ್ನು ಸಂಚೋದಿಸಿದ್ದು ಬಕ್ರಪ್ಪ ಎಂಬ ಕುರಿಗಾಹಿ ಎಂಬುದನ್ನು ತಿಳಿಸಲು ಪ್ರಕಾಶ್ ಶೆಟ್ಟರು ಮರೆಯಲಿಲ್ಲ. 

ನುಡಿಸಿರಿ ಹೆಬ್ಬಾಗಿಲಲ್ಲೇ ಕತ್ತಿ ಝಳಪಿಸುತ್ತಾ ನಿಂತಿದ್ದ ಪ್ರಕಾಶ್ ಶೆಟ್ಟರು, ಕೇವಲ 100 ರೂಪಾಯಿಗೆ ನಿಮ್ಮ ತಲೆಯಲ್ಲಿ ಇಲ್ಲದ ಕೂದಲನ್ನು ಕೂಡಿಸುತ್ತಿದ್ದರು, ಇದ್ದ ಕೂದಲನ್ನು ಕಳೆಯುತ್ತಿದ್ದರು... ಮುಖಗಳನ್ನು ವಕ್ರವಾಗಿ ಎಳೆದು, ಕೈಕಾಲುಗಳನ್ನು ಅಡ್ಡಡ್ಡ ಜೋಡಿಸಿ... ಕೊನೆಗೆ ಏನೇನೋ ಹರಸಾಹಸ ಮಾಡಿ ನಿಮ್ಮ ವಿ-ರೂಪವನ್ನು ಸೃಷ್ಟಿಸಿ ನಿಮ್ಮ ಕೈಗಿಡುತ್ತಿದ್ದರು! ಆದರೂ ಅದು ನಿಮ್ಮ ರೂಪವಂತೂ ಖಂಡಿತ ಎಂದು ನೀವೇ ಬೆನ್ನು ತಟ್ಟಿಕೊಳ್ಳುತ್ತೀರಿ. ಅದರ ಜೊತೆಗೆ ವಾರೆಕೋರೆ ಎಂಬ ಸಂಚಿಕೆಯ ಕುರಿತ ಜನಾಭಿಪ್ರಾಯ ಸಂಗ್ರಹವೂ ನಡೆಯುತ್ತಿತ್ತು.

ಆದರೆ, ಈ ಬೊಕ್ಕತಲೆಯಲ್ಲಿ, ಅದಕ್ಕೂ ಹೆಚ್ಚಾಗಿ ಇಲ್ಲದ ತಲೆಯಲ್ಲಿ ಕೂದಲು ಮೂಡಿಸಬಲ್ಲ ಸಾಮರ್ಥ್ಯವಿರುವ ಬಕ್ರೌಷಧವನ್ನು ಹೇಗೆ/ಯಾವ ರೀತಿ (ಅಂದರೆ ಲೇಪಿಸಿಕೊಳ್ಳೋದೋ... ಸೇವಿಸೋದೋ) ಬಳಸುವುದು ಹೇಗೆಂಬ ಬಗ್ಗೆ ಅಲ್ಲಿದ್ದವರು ಯಾರೂ ಮುಖ ಸಿಂಡರಿಸುತ್ತಾ... ಬಾಯಿಬಿಡದೇ ಇರುವುದು ಹಲವು ಶಂಕೆಗಳಿಗೆ, ಮೂತ್ರಶಂಕೆಗಳಿಗೆ ಮತ್ತು ಆಮಶಂಕೆಗಳಿಗೆ ಕಾರಣವಾಗಿತ್ತು ಎಂಬುದಂತೂ ದಿಟ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಅಹ್ಹಾ...ಇದು ನಿಜ್ವಾದ ಗುಡಿಸಿರಿ..ಅಲ್ಲಲ್ಲ ನುಡಿಸಿರಿ ನ್ಯೂಸ್!
    ವೇದೇಗೌಡರು ಆಕರ್ಷಣೆಯಲ್ಲಿ ಆಯಸ್ಕಾಂತಕ್ಕೆ ಸ್ಪರ್ಧೆಯೊಡ್ಡುತ್ತಿದ್ದಾರೆ ಅಂತ ನಮ್ಮ ಲ್ಯಾಬಿನ ಆಯಸ್ಕಾಂತಗಳು ದೂರುತ್ತಿವೆಯಲ್ಲ...ಏನು ಮಾಡೋದು ಈಗ ?

    ಪ್ರತ್ಯುತ್ತರಅಳಿಸಿ
  2. ವೇದೇಗೌಡರ ಪುತ್ತರ್ ಗಮಾರಸ್ವಾಮಿಯ ತಲೆಗೂ ಸ್ವಲ್ಪ ಬಕರೀಮೂತ್ರ ಬಳೀರಣ್ಣಾ!

    ಪ್ರತ್ಯುತ್ತರಅಳಿಸಿ
  3. tale iddaaga koodalirOlla
    koodaliruvaa tale iruvudilla
    eraDaralli yaavudu bEku aMta gamaaraNNa dyaavappanavarige kELiddakke, dyaavappanara nuDisiri idaMte

    (idu namma bogaLe beeruvina saMshOdane - nimmadu aMta tiLiyabEDi) :)

    ಪ್ರತ್ಯುತ್ತರಅಳಿಸಿ
  4. ಲಕ್ಷ್ಮಿಯವರೆ,
    ನಿಮ್ಮ ಲ್ಯಾಬಿನಿಂದಲೇ ಆಯಸ್ಕಾಂತಗಳನ್ನು ಎಗರಿಸಿ ಅವರ ಪಕ್ಷಕ್ಕೆ ಸೇರಿಸಿಕೊಳ್ಳೋ ಹುನ್ನಾರ ನಡೆಯುತ್ತಿದೆ... ಎಚ್ಚರ ವಹಿಸಿ....

    ಪ್ರತ್ಯುತ್ತರಅಳಿಸಿ
  5. ಸುನಾಥರೆ,

    ಗಮಾರಸ್ವಾಮಿಯ ತಲೆಯ ಒಳಗೇ ಬಕರಮೂತ್ರ ಬಳೀಬೇಕು ಕಣಣ್ಣಾ... ಇಲ್ಲಾಂದ್ರೆ ಅವರ ಮಗ, ಮೊಮ್ಮಗನೂ ಚುನಾವಣಾ ಕಣಕ್ಕೆ ಟಿಕೆಟ್ಟು ಪಡೀಬೌದು.

    ಪ್ರತ್ಯುತ್ತರಅಳಿಸಿ
  6. ಕುರುಕುರೇ.... ಅಲ್ಲಲ್ಲ ತಿರುಕರೆ....

    ತಲೇಲಿ ಯಾವ್ದೂ ಬೇಡ... ಯಾಕಂದ್ರೆ ಜನಾ ಏನೇನೋ ಅಂದ್ಕೋತಾ ಇದ್ದಾರೆ. ಹೀಗಾಗಿ ತಲೆಯಲ್ಲಿ ಏನಾದ್ರೂ ಇದ್ದರೆ ತಲೆ ಕೆಟ್ಟು ಹೋಗುತ್ತೆ... ಸೋ... ಯಾವಾಗ್ಲೂ ತಲೆ ಖಾಲಿ ಇಟ್ಕೋಬೇಕೂಂತ ಅಪ್ಪನಿಗೆ ಮಗ ಮತ್ತು ಮಗನಿಗೆ ಅಪ್ಪ ಉಪದೇಶ ಮಾಡ್ಕೋತಾ ಇದ್ದಾರೆ...

    ಪ್ರತ್ಯುತ್ತರಅಳಿಸಿ
  7. vesapande avara sahvasadinda namma
    vedegowdrige taleli belli kudalu bandiathe kananna

    ಪ್ರತ್ಯುತ್ತರಅಳಿಸಿ
  8. ಗುರೂ ನಿಮ್ಮ ಬರಹ ಎಲ್ಲ ಓದಿದೆ ನಿಮ್ಮ ಹಾಸ್ಯ ಮಿಶ್ರಿತ ಚೂಪು ಬರಹಗಳು ಖಂಡಿತವಾಗಿಯೂ ಮೆಚ್ಚ್ಕದೆ ಇರಲಿಕ್ಕೆ ಸಾಧ್ಯವಿಲ್ಲ....

    ನನ್ನ, ನಿಮ್ಮ ಬರಹಗಳ ಬಗೆಗಿನ ಹೊಗಳಿಕೆಯನ್ನ, ಕನ್ನಡವಿರಲಿ ಯಾವ ಭಾಷೆಯ ಪದಗಳಿಂದಲೂ ಬಳಸಿ ಹೇಳಲು ಸಾಧ್ಯವಿಲ್ಲ...
    ಒಟ್ಟಿನಲ್ಲಿ ನಿಮ್ಮ ಬರಹಗಳು ನನಗೆ ತುಂಬಾ ಇಷ್ಟವಾಗಿವೆ...
    ನಿಮ್ಮ ಬರಹಗಳನ್ನ ನಾನು ಮೊದಲು ಓದಿದ್ದು ಸಂಪದ.ನೆಟ್ ನಲ್ಲಿ...
    ಕೀಪ್ ಇಟ್ ಅಪ್ ಗುರೂ ...

    v
    venkatb83@yahoo.co.in

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D