ಬೊಗಳೆ ರಗಳೆ

header ads

ಚಿಲ್ಲರೆ ಕ್ಷೇತ್ರಕ್ಕೆ ವಿದೇಶೀ ಹೂಡಿಕೆ: ಚಿಲ್ಲರೆ ಕೊಡದ ಕಂಡಕ್ಟರುಗಳು!


(ಬೊಗಳೂರು ಚಿಲ್ಲರೆ ಬ್ಯುರೋದಿಂದ)
ಬೊಗಳೂರು, ಡಿ.2- ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶೀ ನೇರ ಹೂಡಿಕೆಗೆ ಕೇಂದ್ರ ಸರಕಾರವು ಅನುಮತಿ ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಚಿಲ್ಲರೆಯ ಕೊರತೆ ಕಾಣತೊಡಗಿರುವುದು ಈಗಷ್ಟೇ ಬೊಗಳೆ ರಗಳೆ ಬ್ಯುರೋದ ಅನುಭವಕ್ಕೆ ಬಂದಿದೆ.

ಕಳೆದ ಕೆಲವು ದಿನಗಳಿಂದ ಬೊಗಳೂರಿನ ಬಸ್ಸುಗಳಲ್ಲಿ ಓಡಾಡಿ ಅನುಭವವಿದ್ದ ಏಕ ಸದಸ್ಯ ಬ್ಯುರೋದ ಎಲ್ಲ ಸಿಬ್ಬಂದಿಗಳು, ಚೀಟಿಯನ್ನು ಚುಚ್ಚಿ ತೂತು ಕೊರೆದು ವಿತರಿಸುವ ಕಂಟ್ರಾಕ್ಟರಿಗೆ ನೋಟು ನೀಡಿ ಚಿಲ್ಲರೆ ಕೇಳಿದರು. ಏನಾಶ್ಚರ್ಯ! ಈ ಕಂಟ್ರಾಕ್ಟರರ ಬಾಯಲ್ಲಿ ಒಂದೇ ಒಂದು ಶಬ್ದವಿಲ್ಲ, ಬದಲಾಗಿ ಚೀಟಿಯ ಹಿಂದುಗಡೆ 1 ಅಂತ ಗೀಚಿ ವಾಪಸ್ ಕೊಟ್ಟಿದ್ದರು.

ಇದರ ಹಿಂದಿನ ಮರ್ಮ ಹುಡುಕಿದಾಗ ನಮಗೆ ತಿಳಿದದ್ದು ಇಷ್ಟು. ದೇಶದಲ್ಲಿ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶೀ ನೇರ ಹೂಡಿಕೆಗೆ ಕೇಂದ್ರದ ಬೆಲೆ ಏರಿಕೆ ಸರಕಾರವು ಅನುಮತಿ ನೀಡಲು ನಿರ್ಧರಿಸಿರುವುದರಿಂದ ಎಲ್ಲ ಚಿಲ್ಲರೆಗಳಿಗೂ ಬೇಡಿಕೆ ಹೆಚ್ಚಾಗಿದೆಯಂತೆ. ಹೀಗಾಗಿ ಚಿಲ್ಲರೆಯನ್ನೇ ಬಂಡವಾಳವಾಗಿಸಿಕೊಳ್ಳುವ ಈ ಬಸ್ ಕಂಟ್ರಾಕ್ಟರುಗಳು, ಈ ಚಿಲ್ಲರೆಗಳನ್ನೆಲ್ಲಾ ಒಳಗೆ ಹಾಕಿಕೊಳ್ಳುವ ನಿಟ್ಟಿನಲ್ಲಿ ಇಂಥದ್ದೊಂದು ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ಬೊಗಳೆ ರಗಳೆಯ ಅನ್ವೇಷಕರು ಕಂಡುಕೊಂಡಿದ್ದಾರೆ.

ಈ ತಂತ್ರಗಾರಿಕೆಯ ಪ್ರಕಾರ, ಹಣ ಕೇಳಿ ಪಡೆದುಕೊಂಡ ಚೀಟಿಯ ಹಿಂದುಗಡೆ 1 ಅಥವಾ 2 ಅಂತೆಲ್ಲಾ ಗೀಚಿ ಬರೆಯುವುದು, ರಶ್ ಇರುವ ಸಂದರ್ಭದಲ್ಲೆಲ್ಲಾ ಪ್ರಯಾಣಿಕರು ಇಳಿಯುವಾಗ ಅವರು ಇರುವಲ್ಲಿಂದ ಮತ್ತೊಂದು ಬಾಗಿಲಿನ ಬಳಿ ನಿಂತುಕೊಂಡು ರೈಟ್ ರೈಟ್ (ಈ ನತದೃಷ್ಟ ಪ್ರಯಾಣಿಕನ ಕಡೆ ಬೆನ್ನು ಹಾಕಿ, ಅಂದರೆ ತಿರುಗಿಯೂ ನೋಡದೆ) ಹೇಳುತ್ತಾ ಇರುವುದು .... ಇದರಿಂದಾಗಿ ಚಿಲ್ಲರೆಗಳೆಲ್ಲವೂ ಚರ್ಮದ ಚೀಲದೊಳಗೆಯೇ ಭದ್ರವಾಗಿ ಕುಳಿತಿರುತ್ತವೆ.

ಎಲ್ಲಾದರೂ ಅಪ್ಪಿ ತಪ್ಪಿ ಪ್ರಯಾಣಿಕರು ಚಿಲ್ಲರೆ ವಾಪಸ್ ಕೇಳಿಯೇ ಬಿಟ್ಟರೋ... ಅವರನ್ನು ಚಿಲ್ಲರೆಯಂತೆಯೇ ನೋಡಲಾಗುತ್ತದೆಯಾದರೂ, ಬಸ್ ಈ ಕಂಡಕ್ಟರುಗಳ ಲಾಭದ ಪ್ರಮಾಣವು ಹೆಚ್ಚಾಗುತ್ತದೆ! ಹೇಗೆ ಗೊತ್ತೇ? ಚಿಲ್ಲರೆ ಕೊಡುತ್ತೇನೆ ಎಂಬ ನೆಪದಲ್ಲಿ, ಎಷ್ಟು ಬರೆದಿದ್ದು ಎಂಬುದನ್ನು ನೋಡಲೆಂದು, ಅವರಿಂದ ಪ್ರಯಾಣದ ಚೀಟಿಯನ್ನು ಕಿತ್ತುಕೊಳ್ಳುವುದು; ಒಂದೋ ಎರಡೋ ಚಿಲ್ಲರೆ ಕೊಡುವುದು, ಆದರೆ ತನ್ನ ಕೈಗೆ ಸಿಕ್ಕಿದ ಅದೇ ಚೀಟಿಯನ್ನು ಬೇರೊಬ್ಬ ಪ್ರಯಾಣಿಕನಿಗೆ ವಿತರಿಸುವುದು! ಹೇಗಿದೆ ಚಿಲ್ಲರೆ ಐಡಿಯಾ? ಹೀಗಾಗಿ ಬೊಗಳೂರೆಂಬ ಬೊಗಳೂರಲ್ಲಿ ಹೇಗಾದರೂ ಬದುಕಬಹುದು ಎಂಬುದಕ್ಕೆ ಈ ಕಂಟ್ರಾಕ್ಟರುಗಳು ದಾರಿಯನ್ನು ತೋರಿಸಿದ್ದಾರೆ. ಈಗ ಇದೇ ಅಡ್ಡದಾರಿ ಹಿಡಿಯಲು ಬೊಗಳೂರು ಬ್ಯುರೋದ ಸರ್ವ ಸದಸ್ಯರೂ ಉದ್ಯುಕ್ತರಾಗಿದ್ದಾರೆ ಎಂಬುದನ್ನು ನಮ್ಮ ಹದ್ದಿನ ಕಣ್ಣಿನ ತನಿಖಾ ಮಂಡಳಿ ಪತ್ತೆ ಹಚ್ಚಿರುವುದಾಗಿ ಬೊಗಳೂರಿನ ಪ್ರತಿಸ್ಪರ್ಧಿ ಪತ್ರಿಕೆಯಲ್ಲಿ ವರದಿ ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಮೆಟ್ರೋ ರೈಲೇ ಇರುವಾಗ ಬಸ್ಸಿನಲ್ಲಿ ಚಿಲ್ಲರೆ ವ್ಯವಹಾರ ಯಾಕೆ ಮಾಡಿದ್ರಿ.. ಅನ್ವೇಶಿಗಳೆ...??? :))

    ಪ್ರತ್ಯುತ್ತರಅಳಿಸಿ
  2. ಕಂಡಕ್ಟರುಗಳನ್ನು ಚಿಲ್ಲರೆ ಅಂತ ತಿಳ್ಕೋಬ್ಯಾಡ್ರೀ. ಅವರೇ ಕೆ‍ಎಸ್‍ಆರ‍್ಟಿ‍ಸಿಯ ಬೆನ್ನೆಲೆಬು!

    ಪ್ರತ್ಯುತ್ತರಅಳಿಸಿ
  3. ಚುಕ್ಕಿಗಳೇ ಚಿತ್ತಾರರೇ,
    ಮೆಟ್ರೋ ರೈಲು ತೀರಾ ಫಾಸ್ಟಾಗಿ ಹೋಗುತ್ತೆ... ಟ್ರಾಫಿಕ್ಕು ಜಾಮೇ ಆಗಲ್ಲ... ಹೀಗಾಗಿ ಅದರಲ್ಲಿ ಹೋದ್ರೂ ಹೋಗದ ಹಾಗೆ ಆಗುತ್ತೆ....

    ಪ್ರತ್ಯುತ್ತರಅಳಿಸಿ
  4. ಸುಬ್ರಹ್ಮಣ್ಯರೇ,
    ಚಿಲ್ಲರೆಗಳನ್ನು ಸೇರಿಸಿದ್ರೇ ನೋಟಾಗುತ್ತೆ... ಚಿಲ್ಲೆಗಳು ಹೆಚ್ಚಿದ್ದಷ್ಟೂ ಒಳ್ಳೇದಲ್ವೇ??

    ಪ್ರತ್ಯುತ್ತರಅಳಿಸಿ
  5. ಸುನಾಥರೇ,
    ಅಂದ್ರೆ... ಚಿಲ್ಲರೆ ಕಂಟ್ರಾಕ್ಟರುಗಳೇ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D