Tuesday, May 20, 2008

ಭಯೋತ್ಪಾದನೆ ನಿಷೇಧ ಇಲ್ಲ: ಮಾನ್ಯ ನಿಧಾನಮಂತ್ರಿ

(ಬೊಗಳೂರು ನಿರುದ್ಯೋಗ ನಿವಾರಣಾ ಬ್ಯುರೋದಿಂದ)
ಬೊಗಳೂರು, ಮೇ 17- ಒಂದು ಕಡೆಯಿಂದ ಕಳ್ಳಭಟ್ಟಿ ದುರಂತ, ಮತ್ತೊಂದು ಕಡೆಯಿಂದ ಭಯೋತ್ಪಾದಕರ ಹಾವಳಿ..., ಇವೆಲ್ಲಕ್ಕಿಂತ ಮೇಲೆ ಏರುತ್ತಿರುವ ಬೆಲೆಗಳು ಜನಸಾಮಾನ್ಯರ ಜೀವನವನ್ನು ನರಕ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ Unprecedented Price Agenda (UPA) ಸರಕಾರವು ಭಯೋತ್ಪಾದನೆಯನ್ನು ನಿಷೇಧಿಸುವುದೇ ಇಲ್ಲ ಎಂದು ಕಟ್ಟಖಂಡಿತವಾಗಿ ಹೇಳಿದೆ.

ಇದಕ್ಕೆ ಕಾರಣ ಪಟ್ಟಿ ಮಾಡಿ ಬೊಗಳೆ ಬ್ಯುರೋಗೆ ಕಳುಹಿಸಿರುವ, (ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ) ನಿಧಾನಿ ಮನಮೋಹಕ ಸಿಂಗರು, ಭಯೋತ್ಪಾದನೆಯನ್ನು ನಿಷೇಧಿಸಿದರೆ ಹಲವರಿಗೆ ಉದ್ಯೋಗ ನಷ್ಟವಾಗುತ್ತದೆ, ನಮ್ಮ ಓಟಿನ ಬ್ಯಾಂಕು ಕೂಡ ನಷ್ಟಕ್ಕೀಡಾಗಿ ದಿವಾಳಿ ಆಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಯೋತ್ಪಾದಕರನ್ನು ನಿಷೇಧಿಸಿದರೆ ನಮ್ಮ ಓಟಿನ ಬ್ಯಾಂಕು ದಿವಾಳಿಯಾಗುತ್ತದೆ. ಈ ಕಾರಣಕ್ಕೆ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್, ಕಂಡಿರಾ ಗಾಂಧಿ ಆವಾಸ್ ಯೋಜನೆಯ ಮನೆ ಎಲ್ಲವನ್ನೂ ಒದಗಿಸುತ್ತೇವೆ ಎಂದಿರುವ ನಿಧಾನಮಂತ್ರಿ ಅವರು, ಭಯೋತ್ಪಾದಕರಿಲ್ಲದೇ ಇದ್ದರೆ ನಮ್ಮ ಪೊಲೀಸರಿಗೇನು ಕೆಲಸವಿರುತ್ತದೆ? ಅವರು ಸುಮ್ಮನೆ ಕೈಕಟ್ಟಿ ಕೂರಬೇಕಾಗುತ್ತದಲ್ಲ? ನಮ್ಮ ಗುಪ್ತಚರ ವಿಭಾಗಕ್ಕೂ ಕೆಲಸವಿರುವುದಿಲ್ಲ. ಅವರೆಲ್ಲಾ ಉದ್ಯೋಗಹೀನರಾಗುವರು ಎಂದು ಕಳವಳ ವ್ಯಕ್ತಪಡಿಸಿದರು.

ಈಗ ಕೆಲಸವಿಲ್ಲದ ಪೊಲೀಸರಿಗೆ ಕನಿಷ್ಠ ಪಕ್ಷ ಭಯೋತ್ಪಾದಕರನ್ನು ಹುಡುಕುತ್ತಲಾದರೂ ಕಾಲ ಕಳೆಯಬಹುದಲ್ಲವೇ ಎಂಬ ಲಾಜಿಕ್ಕನ್ನು ಮಾನ್ಯ ನಿಧಾನಿಯವರು ಬೊಗಳೆ ಮುಂದಿಟ್ಟಾಗ ಬೆಚ್ಚಿದ ಬೊಗಳೆಯೆದುರು, ಹೇಳಲೋ ಬೇಡವೋ ಅಂತ ತಿಣುಕಾಡುತ್ತಿದ್ದುದು ಕಂಡುಬಂತು. ಹೇಳಿ ಹೇಳಿ ಅಂತ ಧೈರ್ಯ ತುಂಬಿದಾಗ.... ಭಯೋತ್ಪಾದನೆಯೇ ನಡಿಯದೆ ಇದ್ದರೆ, ದೇಶದಲ್ಲಿ ವಿರೋಧ ಪಕ್ಷಗಳನ್ನು ಟೀಕಿಸೋದು, ಅವರು ನಮ್ಮನ್ನು ಟೀಕಿಸೋದಾದರೂ ಹೇಗೆ? ನಮ್ಮ ಹೆಸರು ಕೂಡ ಮುಂದಿನ ಚುನಾವಣೆವರೆಗೆ ಚಾಲ್ತಿಯಲ್ಲಿರಬೇಕಲ್ಲ... ಮತ್ತು ಈ ಮೂಲಕ ನಾವು ಇದ್ದೇವೆ ಎಂಬುದು ಮತದಾರರಿಗೆ ತಿಳಿಯಬೇಕಲ್ಲ ಎಂದು ಕೇಳಿದರು.

ಹಾಗಿದ್ದರೆ ನೀವೇಕೆ ಭಯೋತ್ಪಾದನೆಯನ್ನು ನಿಷೇಧಿಸುವುದಿಲ್ಲ ಎಂದು ಈ ಮೊದಲೇ ಕೇಳಿದ ಪ್ರಶ್ನೆಗೆ ನಿಧಾನಿಯವರು ಪಟ್ಟಿ ನೀಡಿದರು.

ನೋಡಿ ದೇಶದಲ್ಲಿ ಗುಟ್ಕಾ, ತಂಬಾಕು, ಸಿಗರೇಟು ನಿಷೇಧ ಮಾಡಿದರೆ ಅಡಕೆ ಬೆಳೆಗಾರರಿಗೆ, ತಂಬಾಕು ಬೆಳೆಗಾರರಿಗೆ ನಷ್ಟವಾಗುತ್ತದೆ. ಬೀಡಿ ನಿಷೇಧಿಸಿದರೆ ಬೀಡಿ ಕಟ್ಟುವವರು ಎಲ್ಲಿಗೆ ಹೋಗಬೇಕು? ಸಾರಾಯಿ ನಿಷೇಧಿಸಿದರೆ ಸಾರಾಯಿ ದಂಧೆಕೋರರು ಎಲ್ಲಿಗೆ ಹೋಗಬೇಕು? ರಮ್, ವಿಸ್ಕಿ ಎಲ್ಲಾ ನಿಷೇಧಿಸಿಬಿಟ್ಟರೆ ದೊಡ್ಡ ದೊಡ್ಡ ಮದ್ಯದ ದೊರೆಗಳು ಎಲ್ಲಿಗೆ ಹೋಗಬೇಕು? ಐಪಿಎಲ್‌ನಂತಹ ಕ್ರೀಡೆಯನ್ನು ನಡೆಸುವುದಾದರೂ ಹೇಗೆ? ವೇಶ್ಯಾವಾಟಿಕೆ ನಿಷೇಧಿಸಿದರೆ ರಾಜಕಾರಣಿಗಳು, ರೌಡಿಗಳು ಏನು ಮಾಡಬೇಕು?

ಕೊನೆಯದಾಗಿ, ಪ್ಲಾಸ್ಟಿಕ್ ನಿಷೇಧ ಮಾಡಿದರೆ, ಏರುತ್ತಿರುವ ಬೆಲೆಗಳ ಈ ಯುಗದಲ್ಲಿ ಜನ ತಿನ್ನೋದನ್ನಾದರೂ ಏನನ್ನು? ಹೀಗಾಗಿ ಏನೇ ನಿಷೇಧ ಮಾಡಿದರೂ ದೇಶದಲ್ಲಿ ಭೀಕರ ನಿರುದ್ಯೋಗ ಸಮಸ್ಯೆ ತಲೆದೋರುತ್ತದೆ ಎಂದು ವಿವರ ಬಿಡಿಸಿಟ್ಟಾಗ ಬೊಗಳೆ ರಗಳೆ ಬ್ಯುರೋ ಅಲ್ಲಿಂದ ಒಂದೇ ಓಟಕ್ಕೆ ಪರಾರಿ.

Thursday, May 15, 2008

ಭಗ್ನ ಹೃದಯಿಗಳ ವರ್ತನೆಗೆ ಕಾರಣ Some-ಶೋಧನೆ!

(ಬೊಗಳೂರು ಭಗ್ನ ಹೃದಯೋತ್ತೇಜನ ಬ್ಯುರೋದಿಂದ)
ಬೊಗಳೂರು, ಮೇ 15- ಯುರೇಕಾ ಯುರೇಕಾ!!!
ಅಚ್ಚರಿಯಾಗದಿರಿ... ಪ್ರೇಮಿಗಳೆಲ್ಲಾ ಹಂದಿಗಳಂತೆ, ಎತ್ತುಗಳಂತೆ ಯಾಕೆ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಕಾರಣವನ್ನು ಇಲ್ಲಿ ಪತ್ತೆ ಮಾಡಲಾಗಿದೆ.

ಇವರೆಲ್ಲರೂ ಪ್ರೇಮಿಗಳು ಅಂತ ಇಲ್ಲಿ ಮೆನ್ಷನ್ ಮಾಡಿದ್ದಷ್ಟೇ. ಆದರೆ ಅವರೆಲ್ಲರೂ ಪೂರ್ವ ಪ್ರೇಮಿಗಳು, ಅಥವಾ ಭೂತ ಪ್ರೇಮಿಗಳು ಅಥವಾ ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದುಕೊಂಡು ಈಗ ಹೃದಯದ ರಕ್ತನಾಳಗಳನ್ನು ಒಡೆದುಕೊಂಡು (ಅವರೇ ಒಡೆದುಕೊಂಡಿದ್ದಲ್ಲ) ಪುಡಿಮಾಡಲ್ಪಟ್ಟವರು, ಅಂದರೆ ಚುಟುಕಾಗಿ, ಸರಿಯಾಗಿ, ಏನೂ ಸತಾಯಿಸದೆ ಹೇಳಬೇಕೆಂದಾದರೆ ಅವರು 'ಭಗ್ನ ಪ್ರೇಮಿಗಳು' ಎಂಬುದನ್ನೂ ಇಲ್ಲಿ ಸತ್ಯ ಹೇಳಲಾಗುತ್ತದೆ.

ಆದರೆ ಇಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಹೇಳಿರುವ ಪ್ರಕಾರ, ಪುಟ್ಟು ಪುಟಾಣಿಗಳಿಗೂ ಹಂದಿಯ ರಕ್ತನಾಳಗಳನ್ನು ಜೋಡಿಸಬೇಕಾದ ಪ್ರಸಂಗ ಬಂದಿರುವುದು ವಿಶ್ವಾದ್ಯಂತ ಆತಂಕ ಮೂಡಿಸಿದೆ. ಈಗೇನಿದ್ದರೂ ಮುಂದುವರಿದ ಯುಗ. ಅಂದರೆ ಹುಟ್ಟುವಾಗಲೇ ಮಕ್ಕಳು ಅತ್ಯಂತ ಬುದ್ಧಿವಂತರಾಗಿದ್ದುಕೊಂಡು, ವಂಡರ್ ಕಿಡ್ ಎಂದು ಕರೆಸಿಕೊಳ್ಳುತ್ತಿರುವುದನ್ನು ಕೇಳಿದ್ದೇವೆ. ಆದರೆ ಈ ರೀತಿ ಭಗ್ನ ಹೃದಯದೊಂದಿಗೇ ಮಕ್ಕಳು ಹುಟ್ಟುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಹೃದಯ ವಿದ್ರಾವಕವಾಗಿ ಆತಂಕ ವ್ಯಕ್ತಪಡಿಸಿರುವ ಅಖಿಲ ಬೊಗಳೂರು ಪೋಷ-ಕರುಗಳ ಸಂಘವು, ಪುಟಾಣಿಗಳು ಹುಟ್ಟುತ್ತಲೇ ಪ್ರೇಮದ ಬಲೆಗೆ ಬೀಳುತ್ತಿವೆಯೇ ಎಂಬ ಬಗ್ಗೆ ಸಂಶೋಧನೆಯಾಗಬೇಕು ಎಂದು ಬೊಗಳೂರು ಬೊಗಳೆ ಬ್ಯುರೋಗೆ ಹಕ್ಕೊತ್ತಾಯ ಮಂಡಿಸಿದ್ದರೂ, ಆ ಮೇಲೆ ತಪ್ಪು ತಿದ್ದಿಕೊಂಡು, ನೀವು ಈ ಮಕ್ಕಳ ಪೂರ್ವಜನ್ಮದ ಜೀವನ ಚರಿತ್ರೆಯನ್ನು ತಂದೊಪ್ಪಿಸಬೇಕು ಎಂದು ದುರ್ಆಗ್ರಹಿಸಿದ್ದಾರೆ.

ಈ ಭಗ್ನ ಪ್ರೇಮಿಗಳು ತಮ್ಮ ಹೃದಯ ಒಡೆದು ಹೋದ ಬಳಿಕ ಹಂದಿಗಳಂತೆಯೇ ಚರಂಡಿಯಲ್ಲಿ ಬೀಳುತ್ತಿದ್ದಾರೆ. ಆದರೆ ಹೈಟೆಕ್ ಸಿಟಿಗಳಲ್ಲಿ ಚರಂಡಿ ಫೆಸಿಲಿಟಿ ಇಲ್ಲದಿರುವುದರಿಂದ ಇದ್ದುದರಲ್ಲೇ ರಸ್ತೆ ಬದಿಯಲ್ಲಿ ಸುಧಾರಿಸುತ್ತಾರೆ. ಅಂತೆಯೇ, ಎತ್ತುಗಳ ಮಾದರಿಯಲ್ಲಿ ಹಳ್ಳಗಳಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಾ ದೇಹ ತಂಪು ಮಾಡಿಕೊಳ್ಳುತ್ತಾರೆ. ಹೈಟೆಕ್ ಸಿಟಿಗಳಲ್ಲಿ ಅದಕ್ಕೂ ಫೆಸಿಲಿಟಿ ಇದೆ. ಬಾತ್ ಟಬ್ಬೋ, ಅಥವಾ ಸೀವೇಜ್ ಗಟಾರವೋ ಏನಾದರೂ ಇರುತ್ತವೆ.

ಕೆಲವರಂತೂ ಬೊಗಳೆಯೂರಿನ ಅಂದರೆ ಬ್ಲಾಗೂರಿನ ಚರಂಡಿಗಳಲ್ಲೂ ಬಿದ್ದು ಒದ್ದಾಡುತ್ತಿರುತ್ತಾರೆಂಬುದನ್ನು ಪತ್ತೆ ಹಚ್ಚಲಾಗಿದೆ. ಇದೇ ಕಾರಣಕ್ಕಾಗಿ ಕೆಲವೊಂದು ಅತ್ಯುತ್ತಮ ಸರಸ ಕವನಗಳೂ, ವಿರಸ ಕವನಗಳೂ ದಿಢೀರನೇ ಸೃಷ್ಟಿಯಾಗುತ್ತಿರುತ್ತವೆ. ಆದರೆ ಕೆಲವರು ಹೃದಯ ಭಗ್ನ ಮಾಡಿಕೊಳ್ಳದಿದ್ದರೂ ಭಗ್ನಪ್ರೇಮಿಗಳಿಗಿಂತಲೂ ಮಿಗಿಲಾಟಿ ಮನಸ್ಸಿಗೆ ನಾಟೋ ಕವನಗಳನ್ನು, ಪತ್ರಗಳನ್ನು ಹೇಗೆ ಬರೆಯುತ್ತಾರೆ ಎಂಬುದರ ಕುರಿತು ಸಂಶೋಧನೆ ನಡೆಯುತ್ತಿದೆ.

Tuesday, May 13, 2008

ಕುಡಿತ ವಯಸು ಶೂನ್ಯಕ್ಕಿಳಿಸಲು ಪುಟಾಣಿಗಳ ಆಗ್ರಹ!

(ಬೊಗಳೂರು ಕುಡಿಯೋತ್ತೇಜನ ಬ್ಯುರೋದಿಂದ)
ಬೊಗಳೂರು, ಮೇ 13- ಕುಡಿಯುವ ವಯಸ್ಸನ್ನು 25ರಿಂದ ಕೇವಲ 21ಕ್ಕೆ ಇಳಿಸುವ ಪ್ರಸ್ತಾಪದ ವಿರುದ್ಧ ಸಿಡಿದೆದ್ದಿರುವ ಅಖಿಲ ಭಾರತ ಬಾಲ ಪುಟಾಣಿ ಪರಿಷತ್, ನಮಗೂ ಸಮಾನತೆ ಬೇಕು, ಹುಟ್ಟಿದಾಗಲೇ ಕುಡಿಯುವ ಅರ್ಹತೆ ದೊರಕಿಸಬೇಕು ಎಂದು ಒತ್ತಾಯಿಸಿದೆ.

'ಕುಡಿಯುವುದು ನಮ್ಮ ಆಜನ್ಮ ಸಿದ್ಧ ಹಕ್ಕು' ಎಂಬ ಘೋಷಾ ವಾಕ್ಯದೊಂದಿಗೆ ಹೋರಾಟದ ಕಣಕ್ಕಿಳಿದಿರುವ ಈ ಅಖಿಲ ಭಾರತ ಪುಟಾಣಿ ಪರಿಷತ್ತಿಗೆ, ಅಖಿಲ ಭಾರತ ಅಂಗನವಾಡಿ ಪುಟಾಣಿಗಳ ಸಂಘವೂ ಬೇಷರತ್ ಬೆಂಬಲ ಘೋಷಿಸಿದೆ.

ಕಾಂಗ್ರೆಸ್‌ನೋರು, ಜೆಡಿಎಸ್‌ನೋರು ರಾಜ್ಯದಲ್ಲಂತೂ ಈಗಾಗಲೇ ಎಲ್ಲರನ್ನೂ ಕುಡುಕರಾಗಿಸುತ್ತೇವೆ ಎಂದು ಹೇಳುತ್ತಾ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕತೊಡಗಿದ್ದಾರೆ. ಈ ಪರಿಸ್ಥಿತಿಯಲ್ಲಿ ನಮ್ಮನ್ನು ಕುಡಿಯುವ 'ಕೆನೆಪದರ'ದಿಂದಲೂ ಕಿತ್ತು ಹಾಕುವುದು ಎಷ್ಟು ಸಮಂಜಸ ಎಂದು ಜಂಟಿ ಮತ್ತು ಒಂಟಿ ಪತ್ರಿಕಾಗೋಷ್ಠಿಗಳಲ್ಲಿ ಎರಡೂ ಸಂಘಗಳ ಪದಧಿಕ್ಕಾರಿಗಳು ಸರಕಾರವನ್ನು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಪಬ್ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಬದಲಾಗುತ್ತಿರುವ ಯುಗದೊಂದಿಗೆ ನಾವೂ ಬದಲಾಗಬೇಕಾಗಿದೆ, ಆಧುನಿಕತೆಗೆ ಒಗ್ಗಿಕೊಳ್ಳಬೇಕಾಗಿದೆ. ಹೀಗಿರುವಾಗ ಹುಟ್ಟಿನಿಂದಲೇ ಎಲ್ಲವನ್ನೂ ಕಲಿತುಕೊಂಡು ಬಿಟ್ಟರೆ, ಮುಂದೆ ದೊಡ್ಡವರಾದ ಬಳಿಕ ಸರಕಾರಿ ಕೆಲಸ ಪಡೆಯಲು ಅತ್ಯಂತ ನೆರವಾಗುತ್ತದೆ. ಯಾವುದೇ ಕೆಲಸ ಸಿಗದಿದ್ದರೂ ರಾಜಕಾರಣಿಯಾಗಲು ಸಾಕಷ್ಟು ಕುಡುಕ ಮಿತ್ರರ ಸಹವಾಸ ಇದ್ದರೆ ಅತ್ಯಂತ ಹೆಚ್ಚು ಸುಲಭ. ಮತ್ತು ರಾಜಕಾರಣಿಯಾಗುವ ಮೂಲಕ ದಿಢೀರ್ ಶ್ರೀಮಂತರಾಗಲು ಕೂಡ ಇದು ಭದ್ರ ಬುನಾದಿ ಹಾಕಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

Monday, May 12, 2008

ರಾಜ್ಯಾದ್ಯಂತ ಭಯೋತ್ಪಾದನೆ, ಎಲ್ಲರಿಗೂ ಕೆಂಗಣ್ಣು!

(ಬೊಗಳೂರು ಭಯಭೀತ ಬ್ಯುರೋದಿಂದ)

ಬೊಗಳೂರು, ಮೇ 12- ಚುನಾವಣೆಯಲ್ಲಿ ಭಯೋತ್ಪಾದನೆಯ ಕರಿ ನೆರಳು ಕಾಣಿಸಿಕೊಂಡಿದ್ದು, ದುರ್ಬೀನಿನಲ್ಲಿ ನೋಡಿದಾಗ ಈ ನೆರಳು ಮತ್ತಷ್ಟು ಕಪ್ಪಾಗಿ ಕಂಡಿರುವುದು ಪತ್ತೆಯಾಗಿದೆ. ಇದಲ್ಲದೆ, ಎಲ್ಲೆಡೆ ಕೆಂಗಣ್ಣು ರೋಗ ಕಾಣಿಸಿಕೊಂಡಿದ್ದು, ಇದು ಮದ್ರಾಸ್ ಐ ಅಲ್ಲ ಎಂಬುದನ್ನೂ ಬೊಗಳೆ ಬ್ಯುರೋ ಖಚಿತಪಡಿಸಿಕೊಂಡಿದೆ.

ರಾಜ್ಯಾದ್ಯಂತ ಭಯೋತ್ಪಾದಕರು ಎಗ್ಗಿಲ್ಲದೆ ಓಡಾಡುತ್ತಿದ್ದು, ಅನೇಕ ಬಾಂಬುಗಳನ್ನು ಸಿಡಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ನಿದ್ದೆಯನ್ನು ಕಳೆದುಕೊಂಡು, ರಾತ್ರಿಯಂತೂ ಕೆಂಗಣ್ಣೇ, ಹಗಲಲ್ಲೂ ಸಹ ಕೆಂಗಣ್ಣು ಮಾಡಿಕೊಂಡು ಕುಳಿತುಕೊಳ್ಳತೊಡಗಿದ್ದಾರೆ ಎಂದು ನಮ್ಮ ಆತ್ಮೀದಾರರು ಕೆಂಗಣ್ಣು ತೇಲಾಡಿಸುತ್ತಾ ವರದ್ದಿ ಮಾಡಿದ್ದಾರೆ ಎಂದು ನಮ್ಮ ವಿರೋಧಿ ಪತ್ರಿಕೆಗಳು ಫ್ಲ್ಯಾಶ್ ನ್ಯೂಸ್ ಪ್ರಕಟಿಸಿವೆ.

ಭಯೋತ್ಪಾದಕರ ಹಾವಳಿಯಿಂದ ಜನರೆಲ್ಲಾ ಯಾಕೆ ಕೆಂಗಣ್ಣು ಮಾಡಿಕೊಂಡು ಕುಳಿತುಕೊಳ್ಳಬೇಕು? ಭಯೋತ್ಪಾದನೆ ಎಲ್ಲಿ? ಏನು? ಎತ್ತ? ಎಂದೆಲ್ಲಾ ಜನ ಸಾಮಾನ್ಯರನ್ನು ಕೇಳಿದಾಗ ಅವರ ಬಾಯಿಂದ ಬಂದ ಉತ್ತರ:

ನಾವು ಬಡತನ ನಿವಾರಿಸುತ್ತೇವೆ ಎಂದು ಈ ಉಗ್ರ-ಗಾಮಿಗಳು ನಮ್ಮನ್ನು ಹೆದರಿಸುತ್ತಿದ್ದಾರೆ. ಬಡತನ ನಿವಾರಿಸಿ ಬಿಟ್ಟರೆ ನಮಗೆ ಕೊಡುವ ಬಿಪಿಎಲ್ ಕಾರ್ಡನ್ನೇನು ಮಾಡುವುದು? ಎಂದು ಬೋರೇಗೌಡರೊಬ್ಬರು ಪ್ರಶ್ನಿಸಿದರೆ, ಕಲರ್ ಟೀವಿ, ಎರಡು ರೂಪಾಯಿಗೆ ಅಕ್ಕಿ ಕೊಡುತ್ತೇವೆ ಅಂತಲೂ ಹೇಳಿಕೆ ನೀಡಿ ಭಯ ಉತ್ಪಾದಿಸುತ್ತಿದ್ದಾರೆ. ಎರಡ್ರುಪಾಯಿಗೆ ಅಕ್ಕಿ ತಿಂದರೆ ನಾವು ಬಡವರಾಗಿ ಉಳಿಯುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸೀರೆಗಳನ್ನೂ ತಂದುಕೊಡುತ್ತೇವೆ ಅಂತಾನೂ ಹೇಳಿದ್ದಾರೆ, ನಮ್ ಹೆಂಡಿರು ಮಕ್ಕಳೆಲ್ಲರೂ ಸೀರೆ ತೆಗೆದುಕೊಳ್ಳಲೆಂದು ಹೋದವರು ಯಾವ ಸೀರೆ ಆಯ್ದುಕೊಳ್ಳಬೇಕೆಂದು ತಿಳಿಯದೆ ಎಂದಿನಂತೆ ಗೊಂದಲದಲ್ಲಿ ಸಿಲುಕುತ್ತಾರೆ ಎಂಬ ಭೀತಿಯೂ ಮತ್ತೆ ಕೆಲವರದು.

ಹಾಗಿದ್ದರೆ ನಿಮ್ಮ ಕಣ್ಣು ಕೆಂಪಗೇಕಿದೆ? ಎಂದು ಪ್ರಶ್ನಿಸಿದಾಗ ಒಳ್ಳೆಯ ಉತ್ತರವೊಂದು ಅಲೆ ಅಲೆಯಾಗಿ 'ತೇಲಾಡುತ್ತಾ' ಬಂತು:

ನಿನ್ನೆ ರಾತ್ರಿ ಆ ಪಕ್ಷ ಈ ಪಕ್ಷ ಅಂತ ನಮ್ಮ ಮನೆಗೆ ಒಬ್ಬರ ಹಿಂದೊಬ್ಬರಂತೆ ಬಂದಿದ್ದೇ ಬಂದಿದ್ದು. ಅವರೇನೋ ಕೊಟ್ಟರು, ಇಲ್ಲ ಅನ್ನೋಕ್ಕಾಗುತ್ತದೆಯೇ ಅಂತ ಬಾಟ್ಲಿಯಲ್ಲೂ, ತೊಟ್ಟೆಯಲ್ಲೂ ಸೇರಿಸಿಕೊಂಡು ಹೊಟ್ಟೆಗೆ ಸುರಿದುಕೊಂಡಿದ್ದೆವು. ಅದೇನೋ... ನಮ್ಮದು ನಿಮಗೇ... ಆದ್ರೆ ನಿಮ್ಮದು (ಬಾಟ್ಲಿಯೆಲ್ಲಾ) ನಮಗೇ ಕೊಡಬೇಕು ಅಂತ ತಾಕೀತು ಮಾಡಿದ್ದೆವು ಎಲ್ಲರಿಗೂ ಎಂದು ಮತ್ತೊಂದು ಕೈಯ ಬಾಟಲಿಯನ್ನು ಸುರಿದುಕೊಳ್ಳುತ್ತಾ ಹೇಳಿದರು ಮತದಾರ ಮಹಾಪ್ರಭುಗಳು!

Friday, May 09, 2008

ಟ್ರಾಫಿಕ್ ಪೊಲೀಸರ ಸಂಪಾದನೆ ಕೇವಲ 4 ಕೋಟಿ!

(ಬೊಗಳೂರು ಟ್ರಾಫಿಕ್‌ನಲ್ಲಿ ಮೇಯೋರ ಬ್ಯುರೋದಿಂದ)
ಬೊಗಳೂರು, ಮೇ 9- ಟ್ರಾಫಿಕ್ ಪೊಲೀಸರು ಕೇವಲ 4 ಕೋಟಿ ರೂ. ಮಾತ್ರ ಸಂಪಾದನೆ ಮಾಡಿದ್ದಾರೆ ಎಂಬುದಾಗಿ ಸುಳ್ಳು ಸುಳ್ಳು ವರದಿ ಪ್ರಕಟಿಸುತ್ತಿರುವ ಟಾಯ್ ಪತ್ರಿಕೆ ವಿರುದ್ಧ ಬೊಗಳೆ ರಗಳೆ ಬ್ಯುರೋ ಅವಮಾನ ನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದೆ.

ಟ್ರಾಫಿಕ್ ಪೊಲೀಸರು ಬಡಜನರನ್ನು ಸುಲಿಯುವುದೇನು ಸಾಮಾನ್ಯವೇ? ಇಡೀ ಹಗಲು ಬಿಸಿಲಲ್ಲಿ ಬೆಂದು, ರಾತ್ರಿಯೆಲ್ಲಾ ಚಳಿಯಲ್ಲಿ ನೊಂದು ಅವರು ರಸ್ತೆಗಳ ಮೂಲೆ ಮೂಲೆಗಳಲ್ಲಿ ಸಂಪಾದನೆಗೆ ನಿಲ್ಲುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು, ಬೆವರು ಸುರಿಸಿ (ಕೆಲವೊಮ್ಮೆ ಹಣೆಯಲ್ಲಿ ಮಾತ್ರ ಬೆವರು ಬರುತ್ತದೆ) ದುಡಿದ ಹಣವನ್ನು ಇಷ್ಟು ಅಲ್ಪ ಪ್ರಮಾಣದ್ದು ಎಂದು ಲೆಕ್ಕ ತೋರಿಸಿದ ಈ ಪತ್ರಿಕೆಯು ಬೊಗಳೆ ಪತ್ರಿಕೆಗಳ ಅನೀತಿಯನ್ನೇ ಉಲ್ಲಂಘಿಸಿದೆ ಎಂದು ನಮ್ಮ Someಪಾದ-ಕರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲಾ ದಾಖಲೆ ಪತ್ರಗಳಿದ್ದರೂ, ನೀನು ಅತಿವೇಗದ ಚಾಲನೆ ಮಾಡುತ್ತಿದ್ದೀ ಅಂತ ಹೇಳಿ ಎರಡ್ಮೂರು ಸಾವಿರ ರೂ. ದಂಡ ಕಟ್ಟುವಂತೆ, ದಂಡದಲ್ಲಿ 'ರಶೀದಿ ಬೇಡ ಎಂದಾದರೆ' ಕೇವಲ ಒಂದು ಸಾವಿರದೊಳಗೆ ಕೆಲಸ ಮುಗಿಸಿಕೊಡುವುದಾಗಿಯೂ ಹೇಳಬಲ್ಲ ಸಾಮರ್ಥ್ಯವಿರುವ ಏಕೈಕ ಉದ್ಯೋಗ ಎಂದರೆ ಸಂಚಾರಿ ಪೊಲೀಸರದು ಎಂಬುದನ್ನು ಪತ್ತೆ ಹಚ್ಚಲಾಗಿದೆ.

ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾದರೆ ಅದಕ್ಕೆ ಅನುಲೋಮ ಅನುಪಾತದಲ್ಲಿ ಈ ಟ್ರಾಫಿಕ್ ಪೊಲೀಸರ ಕಮಾಯಿ ಹೆಚ್ಚಾಗುತ್ತದೆ ಎಂದು ಐನ್‌ಸ್ಟೈನ್ ಅಥವಾ ಆರ್ಕಿಮಿಡಿಸ್‌ಗಳು ಈ ಹಿಂದೆಯೇ ದೊಡ್ಡ ದೊಡ್ಡ ಗಣಿತ ಸೂತ್ರಗಳನ್ನು ತಯಾರಿಸಿಕೊಟ್ಟಿದ್ದಾರೆ. ಅದರ ಅನುಸಾರವಾಗಿಯೇ ಕೆಲಸ ಮಾಡಬಲ್ಲ ಸಾಮರ್ಥ್ಯವಿರುವ ಈ ಬಿಳಿಯ ಪೊಲೀಸರು, ಮೊಬೈಕ್ ಸವಾರರಲ್ಲಿ ಏನೂ ದಕ್ಕದಿದ್ದರೆ, ಕನಿಷ್ಠ ಒಂದು ಲೋಟ ಚಹಾ ಕುಡಿಯಲಾರದೂ ಏನಾದರೂ 'ದಂಡ' ನೀಡು ಎಂದು ಹಲ್ಕಿರಿಯುತ್ತಾರೆ. ಹೀಗಾಗಿ ಅವರಿಗೂ ಹಲ್ಲುಗಳಿವೆ ಎಂಬುದನ್ನು ಪತ್ತೆ ಮಾಡುವುದು ಕೂಡ ಸುಲಭಸಾಧ್ಯವಾಗಿದೆ.

ಅಲ್ಲದೆ, ಏನೂ ತಪ್ಪು ಮಾಡದಿದ್ದರೂ ನೀನು ತಪ್ಪು ಮಾಡಿದ್ದೀ ಅಂತ ಕೋರ್ಟುಗಳು ಕೂಡ ಸಾಬೀತು ಮಾಡಲಾಗದ ಪ್ರಕರಣಗಳನ್ನು ಈ ಬಿಳಿಯರು ಮಾಡಿ ತೋರಿಸುತ್ತಿರುವುದು ವಿಶ್ವದಾಖಲೆಯೇ ಆಗಿದೆ. ಎಲ್ಲಾ ದಾಖಲೆ ಪತ್ರ ಸರಿಯಾಗಿದ್ದರೆ, ತಲೆ ಕೆರೆದುಕೊಂಡ ತಕ್ಷಣ ಅವರಿಗೆ ಹಲವು ತಪ್ಪುಗಳು ತಲೆಯೊಳಗಿಂದಲೇ 'ಹೊಳೆಯುತ್ತವೆ'. ಅವುಗಳಲ್ಲಿ, ಓವರ್‌ಸ್ಪೀಡ್, ರಾಂಗ್ ಸೈಡ್, ಒನ್ ವೇ, ಇಂಡಿಕೇಟರ್ ಹಾಕಿಲ್ಲ, ಹಾರ್ನ್ ವರ್ಕ್ ಆಗುತ್ತಿಲ್ಲ ಎಂಬಿತ್ಯಾದಿಗಳು ಬಹುತೇಕ ಹೆಚ್ಚು.

ಇಂಥ ದಂಧೆಯವರು ಕೇವಲ ನಾಲ್ಕು ಕೋಟಿ ಸಂಪಾದಿಸಿದ್ದಾರೆ ಎಂಬುದನ್ನು ಪ್ರಜ್ಞಾವಂತರು ಯಾರು ಕೂಡ ಒಪ್ಪುವುದಿಲ್ಲ ಎಂದು ಅಖಿಲ ಭಾರತ ಟ್ರಾಫಿಕ್ ಪೊಲೀಸ್ ಪೀಡಿತ ಸಂಘದ ಅಧ್ಯಕ್ಷರು ಘಂಟಾಘೋಷವಾಗಿ ಸಾರಿದ್ದು, ಕನಿಷ್ಠಪಕ್ಷ ಅದರಲ್ಲಿ 4 ಎಂಬ ಅಂಕಿಯ ಬಳಿಕ ಒಂದೆರಡ್ಮೂರ್ನಾಲ್ಕೈದಾರೇಳೆಂಟೊಂಭತ್ಹತ್ತು ಸೊನ್ನೆಗಳು ಬಿಟ್ಟು ಹೋಗಿರಬಹುದು ಎಂದು ಹೇಳಿದ್ದಾರೆ.

Thursday, May 08, 2008

ಹಣದುಬ್ಬರದಿಂದ ಚುನಾವಣೆ ಟಿಕೆಟ್ ದರ ದುಬಾರಿ!

(ಬೊಗಳೂರು ಉಬ್ಬರ ಬ್ಯುರೋದಿಂದ)
ಬೊಗಳೂರು, ಮೇ 8- ಹಣದುಬ್ಬರವು ದೇಶದ ಆರ್ಥಿಕತೆಯ ಮೇಲೆ ಭಾರಿ ಪ್ರಮಾಣದ ಪರಿಣಾಮ ಬೀರಿರುವಂತೆಯೇ, (ದಢೂತಿ) ದೇಹದ ಆರ್ಥಿಕತೆಯ ಮೇಲೂ ಅಷ್ಟೇ ಪ್ರಮಾಣದ ಪ್ರಭಾವ ಬೀರಿದೆ. ಇದು ಬೊಗಳೂರು ಬ್ಯುರೋಗೆ ಆಕಸ್‌ಮಿಕವಾಗಿ ಹೊಳೆದದ್ದು ಚುನಾವಣೆ ಘೋಷಣೆಯಾದ ಬಳಿಕದಿಂದೀಚೆಗೆ ಹಿನ್ನೋಟ ಹರಿಸಿದಾಗ.

ಹಣದುಬ್ಬರದಿಂದಾಗಿ ಆವಶ್ಯಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡ ಮತದಾರನಂತೂ ಯಾವುದೇ ಬೆಲೆಗಳು ಕೈಗೆಟುಕದಷ್ಟು ಮೇಲಕ್ಕೇರಿರುವುದರಿಂದ ಆಕಾಶಕ್ಕೆ ಹಾರಲು ಮತ್ತು ಆ ಬೆಲೆಗಳನ್ನು ಹಿಡಿಯಲು ಎಷ್ಟೇ ಪ್ರಯತ್ನ ಪಟ್ಟರೂ ಸೋತಿದ್ದಾನೆ. ಇದೇ ಸಂದರ್ಭ ಊರು-ಪರವೂರುಗಳಿಗೆ ಹೋಗುವ ವಿಮಾನ ಯಾನದ ಟಿಕೆಟ್ ದರಗಳೂ ರಾಕೆಟ್‌ನಂತೆ ಮೇಲೇರುತ್ತಿವೆ ಎಂಬುದು ಕೂಡ ಪತ್ತೆಯಾಗಿದೆ. ಅದೇ ರೀತಿಯಲ್ಲಿ ವಿಧಾನಸಭೆಗೆ ಪ್ರಯಾಣದ ಟಿಕೆಟ್ ದರವೂ ಪೈಪೋಟಿಯಿಂದಾಗಿ ಮೇಲಕ್ಕೇರಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಇದರಿಂದಾಗಿಯೇ ಹಣದುಬ್ಬರದಿಂದ ಟಿಕೆಟ್ ಬೆಲೆಯೂ ಏರಿದ್ದು, ದೇಶದ ಅರ್ಥಿಕತೆಗೂ ದಢೂತಿ ದೇಹದ ಆರ್ಥಿಕತೆಗೂ ಹೊರೆ ಬಿದ್ದಿದೆ. ಜನ ಸಾಮಾನ್ಯರು ಬುಟ್ಟಿ ತುಂಬಾ ಹಣ ತೆಗೆದುಕೊಂಡು ಹೋಗಿ, ಜೇಬು ತುಂಬಾ ಅಕ್ಕಿಯನ್ನು ಹೇಗೆ ತರುತ್ತಾರೋ... ಅದೇ ಮಾದರಿಯಲ್ಲಿ, ಈ ದಢೂತಿ ದೇಹಿಗಳು ಅಂದರೆ ಜಾರಕಾರಣಿಗಳು, ಟಿಕೆಟ್ ಪಡೆಯುವುದಕ್ಕಾಗಿ ಸೂಟ್‌ಕೇಸು ತುಂಬಾ ನೋಟುಗಳ ಕಂತೆ ತೆಗೆದುಕೊಂಡು ಹೋಗಿ, ಒಂದು ಪುಟ್ಟ ಕಾಗದದ ತುಂಡನ್ನು ಹಿಡಿದುಕೊಂಡು ಬರಬೇಕಾಗಿದೆ. ಇಂಥ ದುರಂತ ಯಾರಿಗೂ ಬರಬಾರದಪ್ಪಾ ಎಂದು ನಾಡಿಗೆ ನಾಡೇ ಕಣ್ಣೀರಿಡುತ್ತಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ, ವಿಧಾನಭೆಗೆ ತೆರಳುವ ಬಸ್ಸಿನ ಟಿಕೆಟ್ ದೊರೆತು, ಗಮ್ಯ ಸ್ಥಾನ ತಲುಪಿದ ಬಳಿಕ ತುಟ್ಟಿ ಭತ್ಯೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲು ಎಲ್ಲಾ ಟಿಕೆಟ್‌ಸಹಿತ ಪ್ರಯಾಣಿಕರು ತೀರ್ಮಾನಿಸಿದ್ದಾರೆ.

Monday, May 05, 2008

ಭಾರತೀಯರು ತಿಂಡಿಪೋತರೆಂದು ಬೊಗಳೆ ಬಿಟ್ಟ ಲಾರ್ಜ್ ಬುಷ್‌ಗೆ ಗಾಳ

(ಬೊಗಳೂರು ಗಾಳ ಹಾಕೋ ಬ್ಯುರೋದಿಂದ)
ಬೊಗಳೂರು, ಮೇ 6- ಅಮೆರಿಕದ (ಅತ್ಯಂತ) ಅದಕ್ಷ ಲಾರ್ಜ್ ಬುಷ್ ಅವರನ್ನು ಬೊಗಳೆ ರಗಳೆ ಬ್ಯುರೋಗೆ ಸೇರಿಸಿಕೊಳ್ಳಲು ಗಾಳ ಹಾಕಲಾಗುತ್ತಿದೆ.

ಇದಕ್ಕೆ ಪ್ರಧಾನ ಕಾರಣವೆಂದರೆ, ಭಾರತೀಯರ ತಿಂಡಿಪೋತತನದಿಂದಾಗಿಯೇ ಜಾಗತಿಕವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ಲಾರ್ಜ್ ಬುಷ್ ಹೇಳಿಕೆ ನೀಡಿದ್ದು. ಬೊಗಳೆಗೇ ಸೆಡ್ಡು ಹೊಡೆಯುವ ಮಾದರಿಯಲ್ಲಿ ಲಾರ್ಜ್ ಬುಷ್ ಈ ಹೇಳಿಕೆ ನೀಡಿದ್ದು ಎಲ್ಲಿ ಎಂಬುದನ್ನು ಪತ್ತೆ ಮಾಡಲು ಹೊರಟಾಗ ತಿಳಿದು ಬಂದ ವಿಷಯವೆಂದರೆ, ಅವರು ಈ ಹೇಳಿಕೆ ನೀಡಿದ್ದು ಅಪ್ಪಟ ಭಾರತೀಯ ಮದ್ಯ ಒದಗಿಸುತ್ತಿರುವ 'ಮಜ'ಯ ಮಲ್ಯರ ಆತ್ಮೀಯ ಅಡಗುದಾಣದಿಂದ.

ಬೆಲೆ ಏರಿಕೆಗೆ ಮಧ್ಯಮ ವರ್ಗ ಕಾರಣ ಅಂತ ಲಾರ್ಜ್ ಬುಷ್ ಹೇಳಿದ್ದರೂ, ಅವರ ಹೇಳಿಕೆಯನ್ನು ಮತ್ತೊಮ್ಮೆ ಸರಿಯಾಗಿ ರಿವೈಂಡ್ ಮಾಡಿ ಕೇಳಿದಾಗ, ನಿಜಕ್ಕೂ ಅವರು ಹೇಳಿದ್ದು 'ಮದ್ಯ'ಮ ವರ್ಗದಿಂದಾಗಿ ಅಂತ ಎಂಬುದು ಖಚಿತವಾಯಿತು. ಯಾಕೆಂದರೆ ಅವರು ಕೂಡ 'ಮದ್ಯ'ವರ್ತಿತನ ಮಾಡಿಕೊಂಡೇ ಅಪಮೌಲ್ಯವರ್ಧಿಸಿಕೊಳ್ಳುತ್ತಿದ್ದರು ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ.

ಭಾರತೀಯರ ತಿಂಡಿಪೋತತನದಿಂದಾಗಿಯೇ ಜಾಗತಿಕ ಮೌಲ್ಯ ಹೆಚ್ಚಾಗಿದೆ, ಡೌಲರ್ ಮೌಲ್ಯ ಕುಸಿಯುತ್ತಿದೆ ಎಂದೆಲ್ಲಾ ಅಷ್ಟು ನಿಖರವಾಗಿ ಬೊಗಳೆ ಬಿಡಬಲ್ಲ ಲಾರ್ಜ್ ಬುಷ್‌ರಂತವರು ನಮ್ಮ ಏಕ ಸದಸ್ಯ ಬ್ಯುರೋದಲ್ಲಿದ್ದರೆ ಎಂಥೆಂಥಾ ಬೆಲೆಗಳನ್ನೇ ಇಳಿಸಬಹುದಲ್ಲ ಎಂದು ಯೋಚಿಸಿರುವ ಬೊ.ರ. ಸೊಂಪಾದ-ಕರುಗಳು, ಈ ನಿರ್ಧಾರ ಕೈಗೊಂಡಿದ್ದು, ಗಾಳ ಹಾಕುವ ತಿಮಿಂಗಿಲವು ದೊಡ್ಡದಾಗಿರುವುದರಿಂದ ಗಾಳದಲ್ಲಿ ಒಪ್ಪಂದ ಚಾಲ್ತಿಯಲ್ಲಿರುವ ಅಣ್ವಸ್ತ್ರವನ್ನೇ ಸಿಕ್ಕಿಸಲಾಗಿದೆ ಎಂದು ಬಲ್ಲ ಮೂಲಗಳು ಹೇಳಿವೆ.

ವಿಶ್ವಕ್ಕೇ ಹಿರಿಯಣ್ಣ ಅಂತ ಕರೆಸಿಕೊಳ್ಳುವವರು ಭಾರತದಂತಹ ರಾಷ್ಟ್ರಕ್ಕೆ ಗೂಬೆಯೊಂದನ್ನು ತಂದು ಅದರ ತಲೆ ಮೇಲೆ ಕೂರಿಸಲು ಎಷ್ಟು ಚೆನ್ನಾಗಿ ಪೊಗರು ಬೆಳೆಸಿಕೊಂಡಿರಬೇಕು ಎಂಬುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸೊಂಪಾದಕರು, ಭಾರತದಲ್ಲಿ ಹಣವನ್ನೇ ನುಂಗುವಂಥವರಿದ್ದಾರೆ ಎಂಬುದು ವರದಿಯಾಗಿರುವುದರಿಂದಾಗಿಯೇ ಲಾರ್ಜೆಸ್ಟ್ ಬುಷ್ ಈ ರೀತಿ ಆರೋಪ ಮಾಡಿರಬೇಕು ಎಂಬುದಾಗಿ ಆಮಶಂಕಿಸಲಾಗಿದೆ.

ಇದಲ್ಲದೆ, ಭಾರತೀಯರಿಗೆ ರುಚಿಕಟ್ಟಾದ ತಿಂಡಿ ಬೇಕು, ಅವರೆಲ್ಲಾ ನಮ್ಮ ಹಾಳು-ಮೂಳು ಜಂಕ್ ಫುಡ್ ಸೇವಿಸೋದು ಕಡಿಮೆ. ಇದರಿಂದಾಗಿ ಅಮೆರಿಕನ್ ಜಂಕ್ ಫುಡ್ ಕಂಪನಿಗಳಿಗೆ ಅಲ್ಲಿ ಸರಿಯಾಗಿ ವ್ಯಾಪಾರವಾಗುತ್ತಿಲ್ಲ ಎಂಬುದು ಲಾರ್ಜ್ ಬುಷ್ ಅರಿವಿಗೆ ಬಂದಿದೆ. ಇದೇ ಕಾರಣಕ್ಕೆ 'ಭಾರತೀಯರು ಹಾಳು ಮೂಳು ತಿನ್ನುವ ಬದಲು, ಪ್ರಕೃತಿದತ್ತ ಆಹಾರವನ್ನೇ ತಿಂದು ಪ್ರಕೃತಿಯನ್ನು ಸರ್ವ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ' ಅಂತ ಆರೋಪಿಸಿರುವುದನ್ನೂ ಕೂಡ ಈ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿದೆ.

Friday, May 02, 2008

ಹಣ ಗುಳುಂಕರಿಸುವ ತರಬೇತಿ ಶಿಬಿರಕ್ಕೆ ಚಿಂತನೆ

(ಬೊಗಳೂರು ನುಂಗೋ ಬ್ಯುರೋದಿಂದ)
ಬೊಗಳೂರು, ಮೇ 2- ಹಣ ನುಂಗುವುದರಲ್ಲಿ ಎಕ್ಸ್‌ಪರ್ಟ್ ಆಗಿರುವ ಪೊಲೀಸ್ ಅಧಿಕಾರಿಯೊಬ್ಬ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದ್ದಾನೆ ಎಂಬ ಸುದ್ದಿ ಕೇಳಿದ ತಕ್ಷಣವೇ ಕಿವಿ ನಿಮಿರಿಸಿಕೊಂಡ ರಾಜ್ಯಾಂಗ ಮತ್ತು ಕಾರ್ಯಾಂಗದ ಅಧಿಕಾರಿಗಳು, ಆತನನ್ನು ಎಳೆದು ತಂದು ತಮ್ಮ ಬುಟ್ಟಿಯೊಳಗೆ ಹಾಕಿಕೊಳ್ಳುವ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೇಗಿದ್ದರೂ ಬೇರೆ ಬೇರೆ ಪಕ್ಷಗಳ ಟಿಕೆಟ್ ಪಡೆಯುವುದಕ್ಕೆ ಕೋಟ್ಯಂತರ ರೂಪಾಯಿ, ಮತದಾರರಿಗೆ ಆಮಿಷವೊಡ್ಡುವುದಕ್ಕೆ ಕೋಟಿ ಕೋಟಿ ರೂಪಾಯಿ ಎಲ್ಲಾ ನೀಡಲಾಗಿದೆ. ಚುನಾವಣೆಯಲ್ಲಿ ಆರಿಸಿ ಬಂದ ಬಳಿಕ ಇವನ್ನೆಲ್ಲಾ ಬಡ್ಡಿ ಸಮೇತ ಹಿಂದೆ ಪಡೆಯುವುದಕ್ಕೆ ಇಂಥವರ ಅಗತ್ಯವಿದೆ ಎಂಬುದನ್ನು ಮನಗಂಡ ಜಾರಕಾರಣಿಗಳು ಆತನ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇನ್ನೊಂದೆಡೆ, ಜನಸಾಮಾನ್ಯರನ್ನು ಎಷ್ಟು ಹಿಂಡಿದರೂ ಈ ರೀತಿ ಹಣ ನುಂಗುವಿಕೆ ತಮಗೆ ಕಷ್ಟ-ಸಾಧ್ಯ. ಹೀಗಾಗಿ ಈ ಪೊಲೀಸಪ್ಪನಿಂದ ತರಬೇತಿ ಪಡೆಯವುದಕ್ಕೆ, ಆತನ ಮೂಲಕ ತರಬೇತಿ ಶಿಬಿರವೊಂದನ್ನು ಏರ್ಪಡಿಸುವುದಕ್ಕೆ ಪ್ಲಾನ್ ಹಾಕುತ್ತಿದ್ದಾರೆ.

ಈ ಮಧ್ಯೆ, ನುಂಗಿದ ಹಣವನ್ನು ವಾಂತಿ ಮಾಡಿಸುವುದಕ್ಕೆ ವೈದ್ಯರು ಬರೆದುಕೊಟ್ಟಿರುವ ಮಾತ್ರೆಯ ಹೆಸರು ಯಾವುದು ಎಂಬುದನ್ನು ಕೂಡ ಪತ್ತೆ ಮಾಡಲಾಗುತ್ತಿದೆ. ಯಾಕೆಂದರೆ ಬರೇ ನೋಟು ನುಂಗಣ್ಣಗಳನ್ನು ತಂದು ಕೂರಿಸಿದರೆ ಯಾವುದೇ ಕೆಲಸವಾಗಲಾರದು. ಅವರು ನುಂಗಿದ್ದನ್ನು ಕಕ್ಕಿಸದಿದ್ದರೆ ತಮ್ಮ ಶ್ರಮವೆಲ್ಲಾ ವ್ಯರ್ಥ ಎಂಬ ಗೂಢಚಿಂತನೆ ಅವರದು.

Wednesday, April 30, 2008

ಕತ್ತೆಗಳ ಪ್ರಣಾಳಿಕೆ ಬಿಡುಗಡೆ: ಗಾರ್ದಭ ಸಂಘ ಹರ್ಷ

(ಬೊಗಳೂರು ಕತ್ತೆ ಸಂರಕ್ಷಣಾ ಬ್ಯುರೋದಿಂದ)

ಬೊಗಳೂರು, ಏ.30- ಇಷ್ಟು ವರ್ಷ ಆರಿಸಿ ಬಂದರೂ ಕೂಡ, ಅಧಿಕಾರ ಹೊಂದಿದರೂ ಕೂಡ, ಕತ್ತೆಗಳು ಅಭಿವೃದ್ಧಿಯಾಗಲಿಲ್ಲ ಎಂದು ಸುಳ್ಳು ಸುಳ್ಳೇ ಅಪಪ್ರಚಾರ ಮಾಡುತ್ತಿರುವ ಪ್ರತಿಭಟನಾ ಪಕ್ಷವೊಂದರ ವಿರುದ್ಧ ಮತ ಚಲಾಯಿಸಲು ಮತದಾರರು ನಿರ್ಧರಿಸಿದ್ದಾರೆ.

ಯಾರ 'ಪರ'ವಾಗಿ ಮತ ಚಲಾಯಿಸದಿದ್ದರೂ ಪರವಾಗಿಲ್ಲ, ಆದರೆ 'ಕತ್ತೆಗಳ ಅಭಿವೃದ್ಧಿಯಾಗಿಲ್ಲ' ಎನ್ನುತ್ತಾ ಅದಕ್ಕಾಗಿಯೇ ಪ್ರಣಾಳಿಕೆ ಬಿಡುಗಡೆ ಮಾಡಿರುವ ಪಕ್ಷದ 'ವಿರುದ್ಧ' ಮತ ಚಲಾಯಿಸುವುದು ಗ್ಯಾರಂಟಿ ಎಂದು ಬೊಗಳೂರಿನ ಮಹಾ ಪ್ರಜೆಗಳು ತೀರ್ಮಾನಿಸಿದ್ದಾರೆ ಎಂಬುದಾಗಿ ನಮ್ಮ ವರದ್ದಿಗಾರರು ಅರಚಿದ್ದಾರೆ.

ರಾಜ್ಯದ ಖಜಾನೆಯು ಬರಿದಾಗಿರುವುದೇ ಇಂಥಹ ಕತ್ತೆಗಳಿಂದಾಗಿ. ರಾಜ್ಯದಲ್ಲಿ ಕತ್ತೆಗಳು ಭಯಂಕರ ಅನ್ನಿಸುವ ರೀತಿಯಲ್ಲಿ ಅಭಿವೃದ್ಧಿ ಸಾಧಿಸಿದ್ದು, ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಸಂತಾನಕ್ಕಾಗುವಷ್ಟು ಸಂಪತ್ತನ್ನು ಈಗಾಗಲೇ ಗುಡ್ಡೆ ಹಾಕಿಕೊಂಡಿವೆ. ಆದರೆ ಅಖಿಲ ಕರುನಾಟಕ ಪ್ರತಿಭಟನಾ ಪಕ್ಷವು ಮಾತ್ರ, 'ಕತ್ತೆಗಳು ಅಭಿವೃದ್ಧಿಯಾಗಿಲ್ಲ, ಅವುಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ' ಎಂದು ಸಾರಿರುವುದು ಅಸತ್ಯದ ಪರಮಾವಧಿ ಎಂದು ದೂರಿರುವ ಬೊಗಳೂರು ಮತದಾರರು, ಕತ್ತೆಗಳ ಅಭಿವೃದ್ಧಿಯಾಗದಬೇಕಿದೆ ಎಂದು ಹೇಳಿರುವುದು ಯಾವ ನಿಟ್ಟಿನಲ್ಲಿ? ಅದೇನು ಕತ್ತೆಗಳ ಸಂತಾನ ಅಭಿವೃದ್ಧಿಯೇ? ಈ ಮೂಲಕ ಮತ್ತಷ್ಟು ಓಟುಗಳನ್ನು ಪಡೆಯುವ ಸಂಚೇ? ಎಂದೂ ಪ್ರಶ್ನಿಸಿದ್ದಾರೆ.

ಅಲ್ಲದೆ, ಈಗಾಗಲೇ ಬೀದಿ ಬೀದಿಗಳಲ್ಲಿ ಸಾಕಷ್ಟು ಕತ್ತೆಗಳು ಕಾರಿನ ಮೇಲೇರಿ, ಬೈಕಿನಲ್ಲಿ ಮೈಕು ಹಿಡಿದು ಅರಚಾಡುತ್ತಿವೆಯಲ್ಲ? ಇನ್ನೆಂತಕ್ಕೆ ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು? ಎಂದು ಏನೂ ಅರಿಯದ ಮುಗ್ಧರಂತಿರುವ ಬೊಗಳೂರಿನ ಮತಬಾಂಧವರು ಮತ್ತು ಮದಬಾಂಧವರು ಹಾಗೂ ಮತ-ದಾರ ಬಾಂಧವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಏನೇ ಸಂಭವಿಸಿದರೂ ಪ್ರತಿಭಟನೆ ಮಾಡಬೇಕಾಗುತ್ತದೆ. ಈ ಪ್ರತಿಭಟನಾ ಪ್ರದರ್ಶನದಲ್ಲಿ ಕೂರಲು, ಮೆರವಣಿಗೆಯಲ್ಲಿ ಸಾಗಲು ಸಾಕಷ್ಟು ಸಂಖ್ಯೆಯ ಕತ್ತೆಗಳ ಅವಶ್ಯಕತೆಯಿದೆ. ಈ ಏಕೈಕ ಉದ್ದೇಶವೇ ಈ ಪ್ರಣಾಳಿಕೆಯ ಹಿಂದಿರಬಹುದು ಎಂದು ಬಲವಾಗಿ ಶಂಕಿಸಲಾಗುತ್ತಿದೆ.

ಮನೆಮನೆಗೆ ಟೀವಿ: ರಾಜ್ಯಾದ್ಯಂತ ಪ್ರಣಾಳಿಕೆಗಳನ್ನು, ಪ್ರಣಾಳ ಶಿಶುಗಳನ್ನು ಬಿಡುಗಡೆ ಮಾಡುತ್ತಿರುವ ಪಕ್ಷಗಳ ಸಾಲಿಗೆ ಈ ಪಕ್ಷವೂ ತೂರಿಕೊಂಡಿದ್ದು, ಬೇರೆ ಪಕ್ಷಗಳು ಟೀವಿ, ಕರೆಂಟು, ರೋಡು, ನೀರು ಇತ್ಯಾದಿ ಕೊಡುವುದಾಗಿ ಘೋಷಿಸಿವೆ. ಆದರೆ ಪ್ರತಿಭಟನಾ ಪಕ್ಷವು ಪುಟ್ಟ ಪಕ್ಷವಾಗಿರುವುದರಿಂದ ಪಕ್ಷದ ಚಿಹ್ನೆಯಾಗಿ ಟೀವಿಯನ್ನೇ ಇಟ್ಟುಕೊಂಡಿದ್ದು, ರಾಜ್ಯದ ಎಲ್ಲ ಮತದಾರರ ಮನೆ ಮನೆಗೆ ಸಾಕು ಬೇಕಾಗುವಷ್ಟು ಟೀವಿಗಳನ್ನು ಠೀವಿಯಿಂದಲೇ ವಿತರಿಸಲು ಆ ಪಕ್ಷದ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿರುವುದಾಗಿ ನಮ್ಮ ಬೇನಾಮಿ ಸುದ್ದಿ ಮೂಲಗಳು ವರದ್ದಿ ಹಾಕಿವೆ.

ಟೀವಿಯಿಲ್ಲದ ಮನೆಗಳಿಗೆ ಟೀವಿಯ ಚಿಹ್ನೆ ನೀಡಿ, ಪ್ರತಿಯೊಂದು ಮನೆಗೂ ಟೀವಿ ನೀಡುವ ಗುರಿಯನ್ನು ಆರಿಸಿಬರುವ ಮೊದಲೇ... ಅಷ್ಟೇಕೆ, ಚುನಾವಣೆಯಾಗುವ ಮೊದಲೇ ವಿತರಿಸಿ, ಆಶ್ವಾಸನೆ ಈಡೇರಿಸಿದ ಅಪಖ್ಯಾತಿಗೆ ಗುರಿಯಾಗುವ ಹುನ್ನಾರವಿದು ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

ಆದರೆ, ಇನ್ನೊಂದೆಡೆ ಗಾರ್ದಭ ಸಮುದಾಯವಂತೂ ಆನಂದತುಂದಿಲವಾಗಿದ್ದು, ಈಗಾಗಲೇ ರಾಜ್ಯ ರಾಜಕೀಯದಲ್ಲಿ ಮೆರೆಯುತ್ತಿರುವ ತಮ್ಮ ಕುಟುಂಬದವರ ಸಂಖ್ಯೆಗೆ ಹೊಸ ಹೊಸ ತಳಿಗಳು ಸೇರ್ಪಡೆಯಾಗಲಿವೆ, ಇದೂ ಅಲ್ಲದೆ, ಟೀವಿ ಜಾಹೀರಾತುಗಳ ಮಧ್ಯೆ ಮಧ್ಯೆ ಆಗಾಗ್ಗೆ ಇಣುಕುತ್ತಿರುವ ಧಾರಾವಾಹಿಗಳಂತೆ ದಿನಕ್ಕೆ ನೂರಾರು ಬಾರಿ ಟೀವಿಯಲ್ಲಿ ಕಾಣಿಸಿಕೊಳ್ಳಲೂ ಬಹುದು ಎಂದು ಹರ್ಷಚಿತ್ತರಾಗಿ ನುಡಿದಿದ್ದಾರೆ ಅಖಿಲ ಭಾರತ ಗಾರ್ದಭ ಸಂಘದ ಅತಿಹಿರಿಯ ಕಾರ್ಯನಿರ್ವಾಹಕ ಆಡಳಿತ ನಿರ್ದೇಶಕ ಶ್ರೀಮಾನ್ ಕ.ಕುಮಾರ್ ಅವರು.

Tuesday, April 29, 2008

ಪಕ್ಷದಲ್ಲಿ ಕೀಳ್ಯಾವುದೋ... ಹುಚ್ಚಪ್ಪಾ...!

(ಬೊಗಳೂರು ಕುಲಗೆಡಿಸುವ ಬ್ಯುರೋದಿಂದ)

ಬೊಗಳೂರು, ಏ.29- ಯಾವ ಪರಿಯೆಲ್ಲಾ ಕುಲಗೆಡಿಸಬಹುದೋ, ಆ ಮಾದರಿಯಲ್ಲಿ ಗಬ್ಬೆದ್ದು ನಾದುತ್ತಾ ಇರುವ "ಕರುನಾಟಕ ರಾಜಕೀಯ"ವೆಂಬ ಹುಲುಸಾಗಿ ಬೆಳೆ ತೆಗೆಯಬಹುದಾದ ಕಾಳ ಸಂತೆಯಲ್ಲಿ ಟಿಕೆಟ್ ಮಾರುತ್ತಿದ್ದ ಬೊಗಳೂರಿನ ಬಹು ಗೌರವಾನ್ವಿತ ರಾವಣ, ರಾಸಂಧ, ಕೀಚಕ, ಮರಾಜರನ್ನು ಬಂಧಿಸಿದ್ದೇ ಅಸತ್ಯಾನ್ವೇಷಿ ಬೊಗಳೂರಿನಿಂದ ನಾಪತ್ತೆಯಾಗುವುದಕ್ಕೆ ಪ್ರಧಾನ ಕಾರಣ ಎಂದು ಪತ್ತೆಯಾಗಿದೆ.

ಇಲ್ಲಿ ಯಾವುದೇ ಪಕ್ಷದ ಹಾಗೂ ಯಾವುದೋ ಪಕ್ಷದ ಟಿಕೆಟ್‌ಗಳು ಕೂಡ ಸಿದ್ಧವಿದೆ. ಒಂದು ಕಂಡಿಷನ್ ಮತ್ತು ಏಕಮಾತ್ರ ಅರ್ಹತೆಯೆಂದರೆ ಐಪಿಎಲ್ ಪಾಲಿಸಿ. ಅಂದರೆ ಐಪಿಎಲ್ ಎಂಬ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕೆಂದು ಅರ್ಥವಲ್ಲ. ಐಪಿಎಲ್ ನೀತಿ. ಏನೇ ಆಗಬೇಕಿದ್ದರೂ ಹಣ ಝಣ ಝಣ. ಕುಲದಲ್ಲಿ ಕೀಳ್ಯಾವುದೋ... ಹುಚ್ಚಪ್ಪ ಎಂಬ ಹಾಡು ನೆನಪಾಗಿದ್ದು ಇದೇ ಕಾರಣಕ್ಕೆ. ಹಣದ ಎದುರು ಪಕ್ಷನಿಷ್ಠೆ, ತತ್ವ, ಸಿದ್ಧಾಂತ, ಜನಸೇವಾ ತುಡಿತ ಇವೆಲ್ಲಾ ನಿರ್ದಾಕ್ಷಿಣ್ಯವಾಗಿ ಮಾಯವಾಗುವುದರಿಂದಾಗಿ ಪಕ್ಷದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಎಂಬ ಹಾಡು ಬೀದಿ ಬೀದಿಯಲ್ಲಿ ಕೇಳಿಬರುತ್ತಿದೆ. ಐಪಿಎಲ್‌ನ ತಂಡವೊಂದರ ಹೆಸರು ಹೇಳಲು ಹಣ, ಆ ತಂಡದಲ್ಲಿದ್ದ ಒಬ್ಬ ಕ್ರಿಕೆಟಿಗನ ಹೆಸರು ಹೇಳಬೇಕಿದ್ದರೆ ಹಣ, ಆ ಆಟಗಾರ ಒಂದು ರನ್ನು ತೆಗೆದರೆ ಹಣ, ಚೆಂಡು ಮುಟ್ಟಿದರೆ ಹಣ, ಅವರು ಏನು ಮಾಡಿದರು, ಎಷ್ಟು ಚಚ್ಚಿದರು, ಚಚ್ಚಿಸಿಕೊಂಡರು ಎಂಬುದನ್ನು ಬೊಗಳೆಯಂತಹಾ ಪತ್ರಿಕೆಗಳಲ್ಲಿ ಬರೆಯಬೇಕಿದ್ದರೂ ಹಣ.... ಝಣ... ಝಣ....

ಇದೇ ಪಾಲಿಸಿಯನ್ನು ಈ ರಂಗು ರಂಗಿನ ಚುನಾವಣಾ ಕಣದಲ್ಲೂ ಅನುಸರಿಸಲು ನಿರ್ಧರಿಸಲಾಗಿದ್ದು, ಹೈಯೆಸ್ಟ್ ಬಿಡ್ಡು ಸಲ್ಲಿಸಿ ದುಡ್ಡು ಕಳೆದುಕೊಂಡವರಿಗೆ ಮಣೆ. ಈ ಪಕ್ಷದಲ್ಲಿ ಟಿಕೆಟ್ ಸಿಗದೆ ಬೇರೆ ಪಕ್ಷದ ಟಿಕೆಟ್ ಸಿಗಬೇಕಿದ್ದರೆ ಆ ಪಕ್ಷಕ್ಕೆ ದುಪ್ಪಟ್ಟು ಹಣ. ಈ ಪಕ್ಷಕ್ಕಾದರೆ ಇಂತಿಷ್ಟು, ಹೇಳ ಹೆಸರಿಲ್ಲದ ಪಕ್ಷಕ್ಕಾದರೆ ಅತಿ ಕಡಿಮೆ. ಎಲ್ಲಾ ಬಿಟ್ಟು ನಿಮ್ಮದೇ ಸ್ವಂತ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸುತ್ತೀರೆಂದಾದರೆ, ಅದಕ್ಕೆ ನಾಮಿನಲ್ ಹಣ ಕೊಟ್ಟರಾಯಿತು.

ಕೊಟ್ಟ ಕೊನೆಗೆ, ನಮ್ಮ ಬ್ಯುರೋದಲ್ಲಿರುವ ಭಾವಚಿತ್ರವನ್ನು ಹೋಲುವವರಂತೆ ಟಿಕೆಟಿಗಾಗಿ ಮರದಿಂದ ಮರಕ್ಕೆ ಹಾರುವ ಪಂಗಡಕ್ಕೆ ಸೇರಿದವರು, ತಮ್ಮ ಕೈಯಲ್ಲಿರೋದು ಯಾವ ಪಕ್ಷದ ಟಿಕೆಟ್, ತಾವು ಯಾವ ಪಕ್ಷಗಳ ಬಾಗಿಲನ್ನೆಲ್ಲಾ ಬಡಿದೆವು, ನಿಜವಾಗಿ ತಾವು ಸ್ಪರ್ಧಿಸಬೇಕಿರುವ ಪಕ್ಷ ಯಾವುದು, ಯಾವ ಪಕ್ಷವನ್ನು ಸೋಲಿಸಬೇಕು ಎಂಬಿತ್ಯಾದಿಗಳನ್ನು ನೆನಪಿಸಿಕೊಳ್ಳಲು ಹತ್ತು ಹಲವಾರು ಸೆಕ್ರೆಟರಿಗಳನ್ನು ಇರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವುದಾಗಿ ನಮ್ಮ ವರದ್ದಿಗಾರರು ಒದರಿದ್ದಾರೆ.

ಒಟ್ಟಿನಲ್ಲಿ ಟಿಕೆಟ್ ಪಟ್ಟಿ ಬಿಡುಗಡೆ ಎಂಬುದು ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗಿದಂತಹಾ ಸನ್ನಿವೇಶವನ್ನು ಸೃಷ್ಟಿಸಿದ್ದು, ಕರ್ನಾಟಕದ ಮತದಾರರಂತೂ ಟಿಕೆಟಿಲ್ಲದೆಯೇ ಮನರಂಜನೆ ಅನುಭವಿಸುತ್ತಿದ್ದಾರೆ.

ವಿ.ಸೂ.: ಇಂಥದ್ದೇ ಸಾಕಷ್ಟು ಮನರಂಜನಾ ಚಟುವಟಿಕೆಗಳನ್ನು ಸವಿಯುವುದಕ್ಕಾಗಿ ಬೊಗಳೂರಿನ ಕೆಲಸವಿಲ್ಲದ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು, ರಜಾ ಕಾಲದ ಪ್ರವಾಸಕ್ಕಾಗಿ ಬೊಗಳೂರಿಗೇ ರಜೆ ಸಾರಿದ್ದು, ಬೊಗಳೂರಿನಲ್ಲಿ ಶೋಕಾಚರಣೆ ನಡೆದಿತ್ತು. ಇಷ್ಟು ದಿನಗಳ ಕಾಲ ದುಡ್ಡು ಕೊಟ್ಟವರಿಗೆ ಮಾತ್ರವೇ ಪತ್ರಿಕೆ ಸರಬರಾಜು ಮಾಡಲಾಗುತ್ತಿತ್ತು ಎಂಬುದನ್ನು ನಾವು ಯಾರಿಗೂ ಜ್ಞಾಪಿಸಲು ಇಚ್ಛಿಸುವುದಿಲ್ಲ.