ಬೊಗಳೆ ರಗಳೆ

header ads

ಡೆಮಾಕ್ರಸಿ ನಾಶಕ್ಕೆ ಸಂಸದರಿಂದ ಓಟಿ ಡ್ಯೂಟಿ!

(ಬೊಗಳೂರು ಅಸತ್ಯ ಸಂಶೋಧನಾ ಬ್ಯುರೋದಿಂದ)
ಬೊಗಳೂರು, ಮಾ.3- ಅಗತ್ಯ ಬಿದ್ದಾಗಲೆಲ್ಲಾ 'ರಜಾ'ಕಾರಣಿಗಳಾಗುವ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಗದ್ದಲವೆಬ್ಬಿಸುತ್ತಿರುವ ಸಂಸದರ ಮತ್ತು ಜಾರಕಾರಣಿಗಳ ಜನ್ಮವನ್ನು ಜಾಲಾಡಿದಾಗ ಸತ್ಯವಾಕ್ಯವೊಂದು ಹೊರಬಿದ್ದಿರುವುದು 'ಅಚಾನಕ್' ಎಂದು ಹೋಂಥಿಯೇಟರ್ ಸ್ಪೀಕರ್ ಸಿಸ್ಟಂ ಕಚೇರಿ ಮೂಲಗಳು ಅವಸರವಸರವಾಗಿ ಸ್ಪಷ್ಟಪಡಿಸಿವೆ.

ಎಲ್ಲಾ ರಜಾಕಾರಣಿಗಳು ಕೂಡ ಭಾರತೀಯ ಪ್ರಜಾಸತ್ತೆಯನ್ನು ಪ್ರಜೆ ಸತ್ತೇ ಹೋಗುವ ಮಾದರಿಯಲ್ಲಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿರುವುದು ಸತ್ಯ ಹರಿಶ್ಚಂದ್ರನಿಗೆ ಮಾಡಿರುವ ಅಪಮಾನ ಎಂದು ಗದ್ದಲದಲ್ಲೇ ಕಾಲ ಕಳೆಯುತ್ತಿರುವ, ಕಾಲೆಳೆಯುತ್ತಿರುವ ಸಂಸದರು ಮತ್ತು ಇತರ ರಜಾಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ, ತಾವೂ ಒಬ್ಬ ಸಂಸದ ಮತ್ತು ರಜಾಕಾರಣಿಯೂ ಆಗಿರುವುದರಿಂದ ಸ್ಪಷ್ಟನೆ ನೀಡಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ Woofer ಸ್ಪೀಕರ್ ಕಚೇರಿ, ಇದೊಂದು ಪ್ರಮಾದವಾಗಿದ್ದು, ಬೊಗಳೆ-ರಗಳೆಯ ಬಾಯಿಗೆ ಬಿದ್ದರೆ, 'ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು' ಎಂಬ ಧ್ಯೇಯ ವಾಕ್ಯದೊಂದಿಗೆ ಹೋರಾಟ ಆರಂಭಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ದಯವಿಟ್ಟು ದನಿಯೆತ್ತದಂತೆ ಮನವಿ ಮಾಡಿಕೊಂಡರು.

ಫಾಲೋ ಅಪ್
ಆದರೆ ಡೆಮಾಕ್ರಸಿ ಎಂದರೇನು, ಅಂಥದ್ದೊಂದು ನಮ್ಮ ಸಂಸತ್ತಿನಲ್ಲಿ ಇದೆಯೇ ಎಂಬುದರ ಬಗ್ಗೆ ಸಂಸದರು ಯೋಚನೆ ಮಾಡಲಾರಂಭಿಸಿದ್ದೇ, ಸ್ಪೀಕರ್ ಅವರು ಈ ಹೇಳಿಕೆ ನೀಡಿದ ನಂತರವೇ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಯಾರಿಗೂ ಗೊತ್ತಾಗದಂತೆ ಪತ್ತೆ ಮಾಡಿದೆ.

ಇದಲ್ಲದೆ, ಸದನದಲ್ಲಿ ಮನೆಯ ಬಾವಿ (Well of the house) ತೋಡಿದ್ದೇಕೆ? ಅದು ಇದ್ದದ್ದರಿಂದಲೇ ಅಲ್ಲವೇ, ಸಂಸದರೆಲ್ಲಾ ಬಾವಿಗೆ ಬೀಳಲು ಧಾವಿಸುತ್ತಿದ್ದದ್ದು ಎಂಬುದರ ಕುರಿತಾಗಿಯೂ ಬೊ.ರ. ಬ್ಯುರೋ ಸಂಶೋಧನೆ ನಡೆಸಿದಾಗ ಮತ್ತೊಂದು ವಿಷವಿಷಯವೂ ಪತ್ತೆಯಾಯಿತು. ಬಜೆಟಿನಲ್ಲಿ ರೈತರ ಆತ್ಮಹತ್ಯೆ ತಡೆಗಾಗಿ ಘೋಷಿಸಲಾಗುವ ಪ್ಯಾಕೇಜಿಗಾಗಿ ತಾವು ಕೂಡ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿತ್ತು ಎಂಬುದನ್ನು ಜನತೆಗೆ ತಿಳಿಸಲು ಸದನದಲ್ಲಿರುವ ಬಾವಿಯೇ ಅತ್ಯಂತ ಸೂಕ್ತ ವೇದಿಕೆ ಅಂತ ಅವರೆಲ್ಲಾ ತೀರ್ಮಾನಿಸಿದ್ದರು.

ಈ ಗದ್ದಲಕ್ಕೆ ಮತ್ತೊಂದು ಕಾರಣವೂ ಇದೆ. ಪ್ರಜಾಸತ್ತೆಯನ್ನು ಮುಗಿಸಿಬಿಡಲು ಓವರ್ ಟೈಮ್ ಕೆಲಸ ಮಾಡಿದರೆ, ತಮಗೆ ಸರಕಾರದಿಂದ ದೊರೆಯುವ ಭರ್ಜರಿ ಸವಲತ್ತುಗಳ ಪಟ್ಟಿಯಲ್ಲಿ ಟಿಎ, ಡಿಎ, ಬಿಎ, ಸಿಎ, ಎಕ್ಸ್ಎ, ವೈಎ, ಝಡ್ಎ ಮುಂತಾದವುಗಳ ಜತೆ "ಓಟಿ" ಸೌಲಭ್ಯವನ್ನೂ ಸೇರಿಸಿಕೊಳ್ಳಬಹುದು ಎಂಬುದು ಸಂಸದರ ಲೆಕ್ಕಾಚಾರವಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಅಯ್ಯೋ! ನೀವು ಇದನ್ನೂ ವರದಿ ಮಾಡ್ಬಿಟ್ರಾ. ಒಳಗೊಳಗೇ ಏನೋ ಮಾಡೋಣ ಅಂತ ನಾವಿದ್ರೆ - ನಮ್ಮ ಹೊಂಚಿಕೆ ಹಂಚಿಕೆಯ ಮೇಲೆ ಹೀಗೆ ತಣ್ಣೀರೆರೆಯೋದಾ? ನಿಮ್ಮ ಪಾಲಿನದನ್ನು ನಿಮಗೆ ಕೊಡ್ತೀನಿ, ದೇವ್ರೂ - ಯಾಕೆ ಹೀಗೆ ಬೀದಿ ರಂಪ ಮಾಡಿ ನಮ್ಮ ಮಾನ ಹರಾಜು ಹಾಕ್ತೀರಿ :P

    ಪ್ರತ್ಯುತ್ತರಅಳಿಸಿ
  2. ಯಾಕೆ? ಲೋಕಸಭೆಯ ಬಾವಿಯಲ್ಲಿ ಬಿದ್ದು, ಪರಲೋಕಸಭೆಗೆ
    ಹೋಗಲು ಬಯಸುತ್ತಿರುವರೆ ನಮ್ಮ ಸದಸ್ಯರು? ಅವರಿಗೆ
    Good bye, Good riddance, Happy journey ಎಂದು ಹೇಳೋಣವೇ/

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸರೆ,
    ನಾವೆಂದಿಗೂ ಇಲ್ಲದ ಮಾನವನ್ನು ಹರಾಜು ಹಾಕೋದಿಲ್ಲ ಅಂತ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ನಿಮ್ಮ ಶುಭಾಶಯಗಳ ಸರಮಾಲೆ ಕೇಳಿ ರಜಾಕಾರಣಿಗಳು ಬೆಚ್ಚಿ ಬಿದ್ದಿದ್ದಾರೆ. ಆದರೂ ಪರಲೋಕ ಯಾತ್ರೆಗೆ ವಿಶೇಷ ವಿಮಾನವೇ ಆಗಬೇಕೆಂದೂ ಅವರು ಹಠ ಹಿಡಿದಿದ್ದಾರೆ ಅಂತಲೂ ವರದಿಯಾಗಿದೆ.

    ಪ್ರತ್ಯುತ್ತರಅಳಿಸಿ
  5. Nieevu bareva reethi tumba tumba muddaagide..padagala jodane adbhutavaagide…

    Nanna putaani blog

    www.navilagari.wordpress.com

    idakke nimma blaag rolnalli swalpa jaaga kodi:)

    Nimma somu

    ಪ್ರತ್ಯುತ್ತರಅಳಿಸಿ
  6. ನವಿಲಗರಿಯೊಂದಿಗೆ ಬಂದಿರುವ ಸೋಮು ಅವರಿಗೆ ಸ್ವಾಗತ.

    ಬನ್ನಿ... ನವಿಲಗರಿಯನ್ನು ನಮ್ಮ ಕಿರೀಟದಲ್ಲಿ ಸಿಕ್ಕಿಸಿಕೊಂಡಿದ್ದೇವೆ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D