ಬೊಗಳೆ ರಗಳೆ

header ads

ಬಸವನ್ಗುಡೀಲಿ ಅಂತರ್ಜಾಲದಿಂದ ಉದುರಿದ ನಕ್ಷತ್ರಗಳು

(ತಡವಾಗಿ ಫ್ಲ್ಯಾಶ್ ಆದ ಸುದ್ದಿ)
ಬೊಗಳೂರು, ಮಾ.18- ಬೊಗಳೂರಿನಲ್ಲಿ ಭಾನುವಾರ ನಡೆದ ಅಂತರ್ಬ್ಲಾಗು ಕನ್ನಡಿಗರ ರಹಸ್ಯ ಸಮಾವೇಶದಲ್ಲಿ ಕೆಲವರು ತಮಗೆ ಕಾಮೆಂಟ್ ಹಾಕ್ತಿರೋರು ಯಾರು ಅಂತ ಪತ್ತೆ ಮಾಡಲಾಗದೆ ಬೊಗಳೆ ರಗಳೆ ಬ್ಯುರೋ ಮೊರೆ ಹೋದ ಘಟನೆಯೊಂದು ತುಂಬಾ ತಡವಾಗಿ ಫ್ಲ್ಯಾಶ್ ಸುದ್ದಿಯಾಗಿ ವರದಿಯಾಗಿದೆ.

ಈ ಸಮಾವೇಶದ ಬಗ್ಗೆ ಬಹುತೇಕ ಬ್ಲಾಗುಗಳಲ್ಲಿ ಗೌಪ್ಯವಾಗಿ ಕಾಮೆಂಟ್ ಹಾಕಿ ಆಹ್ವಾನಿಸಲಾಗಿತ್ತು. ಪ್ರತಿಯೊಬ್ಬರೂ ಈ ರಹಸ್ಯ ಕಾಮೆಂಟ್‌ಗಳನ್ನು ತಮ್ಮ ಮಿತ್ರರ ಬ್ಲಾಗುಗಳಲ್ಲಿ ಗೌಪ್ಯವಾಗಿಯೇ ಹಾಕುತ್ತಾ ಯಾರಿಗೂ ಏನೂ ತಿಳಿಯದಂತೆ ಆಹ್ವಾನಿಸುತ್ತಿದ್ದರು.

ಅಂತೂ ಇದುವರೆಗೆ ಕಾಮೆಂಟುಗಳಲ್ಲಷ್ಟೇ ಪರಸ್ಪರರನ್ನು ಒಂದು ಕೈ ನೋಡಿಕೊಳ್ಳುತ್ತಿದ್ದ ಅಂತರ್ಜಾಲಿ ಕನ್ನಡಿಗರು ಪರಸ್ಪರರನ್ನು ಅಲ್ಲಿ ಕಣ್ಣಾರೆ ನೋಡಿದರು ಮತ್ತು ಕಿವಿಯಾರೆ ಕೇಳಿದರು. ವಿಶೇಷವೆಂದರೆ ತಮ್ಮ ಹೆಸರು ಹೇಳಿದರೆ ಯಾರಿಗೂ ಕೂಡ ಪರಿಚಯವಾಗುತ್ತಿರಲೇ ಇಲ್ಲ. ಇದಕ್ಕೆ ಪ್ರಧಾನ ಕಾರಣವೆಂದರೆ ಒಂದಷ್ಟು ಶ್ರೀಗಳು, ನಿಧಿಗಳು ಅಂತರ್ಜಾಲದಲ್ಲಿ ಹೆಸರು ಸ್ಥಾಪಿಸಿ ಗೊಂದಲ ಸೃಷ್ಟಿಸಿರುವುದು. ಕೊನೆಗೂ ಬ್ಲಾಗಿನ ಯುಆರ್ಎಲ್ ಹೇಳಿದ ಬಳಿಕವಷ್ಟೇ ಕೆಲವರು 'ಓಹ್ ನೀವಾ' ಅಂತ ಹೃದಯಾಘಾತಕ್ಕೀಡಾಗದೆ ಸಾವರಿಸಿಕೊಂಡ ಘಟನೆಯೂ ನಡೆದಿದ್ದು, ನಾವಿಂದು ಯಾವ ರೀತಿ ವರ್ಚುವಲ್ ಜಗತ್ತಿನಲ್ಲಿದ್ದೇವೆ ಎಂಬುದಕ್ಕೆ ಸಾಕ್ಷಿ ಮತ್ತು ಭೂತವಾಯಿತು.

ಬೊಗಳೆಯ ಬಣ್ಣ ಬಯಲು ಮಾಡುವ ಪ್ರಯತ್ನಗಳೂ, ಹುನ್ನಾರಗಳೂ ಅಲ್ಲಲ್ಲಿ ಗೊತ್ತಾಗದಂತೆ ನಡೆದವು. ಇದರಿಂದ ತೀರಾ ಕಳವಳಗೊಂಡ ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳಲ್ಲೊಬ್ಬರು, "ನಾವಲ್ಲ ನಾವಲ್ಲ, ದಯವಿಟ್ಟು ಬಿಟ್ಬಿಡಿ" ಅಂತ ಗೋಗರೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಪರಾಧಿ ನಾನಲ್ಲ, ಅಪರಾಧ ಎನಗಿಲ್ಲ ಎಂಬ ದಾಸರ ಪದವೇ ಬೊಗಳೆಯನ್ನು ರಕ್ಷಿಸಿತು.

ಪಬ್ಬಿಗರು, ಮಜಾವಾಣಿ ಸೊಂಪಾದಕರು, ಜತೆಗೆ ಸೊಂಪಾದ ಗ್ರಹಗಳನ್ನು ಒಂದು ಬುಟ್ಟಿಯಲ್ಲಿ ಹಾಕಿ ಉಣಬಡಿಸುತ್ತಿರುವ ಅಂತರ್ಜಾಲ ನಾಡಿಗರು, ಕೆಂಡಾಮಂಡಲರಾಗದೇ ಇರೋ ಕೆಂಡಸಂಪಿಗೆಯ ರಶೀದರು, ಇದಲ್ಲ, ಅದುವೇ ಕನ್ನಡ ಎನ್ನುತ್ತಾ, ಹಾರ ತುರಾಯಿ ಬದಲು ಆಹಾರದ ಬುಟ್ಟಿ ನೀಡಿದವರನ್ನು ಮನಸಾ ಸ್ಮರಿಸಿದ ಶಾಮಿಯಾನಾ ರೂವಾರಿಗಳು... ಮುಂತಾದವರೆಲ್ಲರೂ ನೆಟ್ಟಾಗಿರೋ ಕನ್ನಡವನ್ನು ನೆಟ್ಟಗೇ ನಿಲ್ಲಿಸುವತ್ತ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು. ಮಾತ್ರವಲ್ಲ, ಅಕ್ಕನ ಲಹರಿ, ಭಾವನ ಲಹರಿ ಬಿಟ್ಟು, ಬೇಲಿ ಹಾರಿ ಆಚೆ ಬರಬೇಕು ಎಂದು ಸಲಹೆ ನೀಡಿದರು. ಸಾಹಿತಿಗಳೂ ಮಾಹಿತಿ ನೀಡುವಂತಾಗಬೇಕು, ಮಾಹಿತಿ ನೀಡುವವರೂ ಸಾಹಿತಿಗಳಂತಾಗಬೇಕು ಎಂಬುದು ಎಲ್ಲರ ಕೊರಳಿನ ಮಧ್ಯಭಾಗದಲ್ಲಿರುವ ಧ್ವನಿಪೆಟ್ಟಿಗೆಯಿಂದ ಹೊರಟ ಧ್ವನಿ.

ಈ ಬ್ಲಾಗಂಗಳದ ನಕ್ಷತ್ರಗಳನ್ನೆಲ್ಲಾ ಒಂದೊಂದಾಗಿ ಹೆಕ್ಕುವ ಪ್ರಯತ್ನ ಮಾತ್ರ ಅಲ್ಲಿ ವಿಫಲವಾಯಿತು. ಆದರೆ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಕಲ್ಚರ್ಡ್ ಆಗಿರೋರೇ ಬಂದು ಸೇರಿದ ಕಾರಣ, ಬ್ಲಾಗಿಗರೆಲ್ಲರೂ ಪ್ರಾಣಾಯಾಮ ಮಾಡಿ ರಿಫ್ರೆಶ್ ಆಗುವಂತೆ ಮಾಡಿದ ಪ್ರಣತಿಯು ಜಹಾಪನಾರಂತೆ ನೀಡಿದ ಆಣತಿಯಂತೆ, ಕಾರ್ಯಕ್ರಮದ ಮಧ್ಯೆ ಒಂದು ಬಾರಿ ಚಹಾ ಪಾನ ಗೋಷ್ಠಿಯೂ ನಡೆಯಿತು.

ಸಮಾರಂಭದ ನಂತರ, ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳೂ, ಕಾರು, ಬಸ್ಸು, ವಿಮಾನ, ರೈಲು, ಎತ್ತಿನ ಬಂಡಿಗಳನ್ನೇರಿ ಸದ್ದಿಲ್ಲದೆ ಬೊಗಳೂರು ಸೇರಿಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

12 ಕಾಮೆಂಟ್‌ಗಳು

  1. " ಪ್ರಣತಿ" ಯ ಕಾರ್ಯಕ್ರಮದ ಬಗ್ಗೆ ವಿವರವಾಗಿ ವರದಿ ಮಾಡಿದ್ದಕ್ಕೆ ಧನ್ಯವಾದಗಳು ಅನ್ವೇಷಿಗಳೇ. ಅಲ್ಲಿ ನಿಮ್ಮನ್ನು ಯಾರೂ ಗುರುತು ಹಿಡಿದಿಲ್ಲ ಎಂದು ಕೇಳಿ ಸಿಕ್ಕಾಪಟ್ಟೆ ಸಂತೋಷವಾಯಿತು.

    ಪ್ರತ್ಯುತ್ತರಅಳಿಸಿ
  2. ಬೆಂಗಳೂರಿನಲ್ಲಿ ನಕ್ಷತ್ರ ಪತನವಾ?!

    ನಮ್ಮೂರಿನಲ್ಲೂ ನಕ್ಷತ್ರಗಳು ಬಂದಿವೆ, ಆದರೆ ಅವು ಕ್ಷುದ್ರ ನಕ್ಷತ್ರಗಳೆಂದು ಬೊಗಳೂರಿನ ಬೊಗಳೆಗಾರರು ವದರುತ್ತಿದ್ದಾರೆ. ಇಂದಿನ ವರದಿ ಓದಿ ನಾನು ಮನಸಾರೆ ಗಹಗಹಿಸಿ ಕಣ್ಣೀರಿಡುತ್ತಿರುವೆ. ಛೇ! ಆ ಮೀಟಿನಲ್ಲಿ ಮೀಟೋಕ್ಕೆ ನಾನ್ಯಾಕೆ ನಕ್ಷತ್ರ ಆಗ್ಲಿಲ್ಲ, ಅಟ್‍ಲೀಸ್ಟ್ ನಕ್ಷತ್ರಿಕನಾದರೂ ಆಗ್ಬೇಕಿತ್ತು ಅಂತ ಹಪಹಪಿಸುತ್ತಿರುವೆ.

    ಅದೇನೋ ನಾನು ಉಲ್ಕೆ ಅಂತ ನಮ್ಮವಳು ನನ್ನ ಬಗ್ಗೆ ಹೇಳ್ತಿರ್ತಾಳೆ. ಈ ಉಲ್ಕೆ ಅಂದ್ರೇನು ಅನ್ವೇಷಿಗಳೇ?

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸ್,

    ಅನ್ವೇಷಿಗಳು ಹೇಳಿದ್ದು ಭೂಮಿಗೆ ಉದುರಿದ ನಕ್ಷತ್ರಗಳ ಬಗ್ಗೆ.
    ಉಲ್ಕಾಪಾತದ ಬಗ್ಗೆ ಅಲ್ಲ.

    ಅದು ಬ್ರಹ್ಮಾಂಡದ ಅವಶೇಷಗಳು (ಸೆಲೆಸ್ಟಿಯಲ್ ಡೆಬ್ರಿ) ಅಂತಾರಲ್ಲ ಅವು ಭೂಮಿಯ ಗುರುತ್ವಾಕರ್ಷಣಕ್ಕೆ ಸಿಕ್ಕಾಗ ವೇಗವಾಗಿ ವಾಯುಮಂಡಲ ಪ್ರವೇಶಿಸಿ ಬಿಸಿಯಾಗಿ ಉರಿಯುತ್ತವೆ. ಅದನ್ನ ಉಲ್ಕಾಪಾತ ಅಂತಾರೆ.

    ಶೇಕಡಾ ತೊಂಭತ್ತೊಂಭತ್ತು ಉಲ್ಕೆಗಳು ಭೂಮಿ ತಲುಪೋಕೆ ಮೊದಲೇ ಸುಟ್ಟು ಆವಿಯಾಗಿಯೋ, ಬೂದಿಯಾಗಿಯೋ ಅಂತೂ ನಶಿಸಿಹೋಗುತ್ತಂತೆ.

    ನಿಮ್ಮವರು ನಿಮ್ಮನ್ನು ಉಲ್ಕೆ ಅಂತ ಬಣ್ಣಿಸಿದ್ದು ಅದಕ್ಕೇ ಇರಬೇಕು. ನೀವು ಆವತ್ತು ಧರೆಗಿಳಿಯಲಿಲ್ಲವಲ್ಲಾ ಅಂತ ;-)
    -ನವರತ್ನ ಸುಧೀರ್

    ಪ್ರತ್ಯುತ್ತರಅಳಿಸಿ
  4. asatyigLe ,
    neevu allidra?
    nimma ek -bureo sadasya alli yaavaga baMdu mayavadaru.....

    nimmanna tuMba jana keLidaru , adarallu femalegLe jaasti......

    naanu avarige illa avaru bandilla aMta heLibiTTe...

    ಪ್ರತ್ಯುತ್ತರಅಳಿಸಿ
  5. ಅಯ್ಯೋ, ಶ್, ಮೆಲ್ಲಗೆ ಹೇಳಿ. ನಂಗೊತ್ತಾಗೋದಗಿದೆ, ನೀವು ಪಕ್ಕಾ ಬೊಗಳಿಗರು ಅಂತ.

    ಅಲ್ಲ, ಬೊಗಳೂರಿನ ಬಿಳಾಗುಕೂಟಕ್ಕೆ ಬರದೇನೇ ಅಲ್ಲಿಗೆ ಬಂದಿದ್ದವರ ರೀತಿ ವರದಿಮಾಡಿದ್ರಲ್ಲಾ. ಸುಸ್ತಾಗೋದೆ.

    ಪ್ರತ್ಯುತ್ತರಅಳಿಸಿ
  6. ನೀಲಗಿರಿಯವರೆ,
    ನೀವು ಸಂತೋಷಪಟ್ಟಿರೆಂದು ಕೇಳಿ ಹೆಚ್ಚು ಹೆಚ್ಚು ಉದ್ವಿಗ್ನರಾಗಿದ್ದೇವೆ.

    ಪ್ರತ್ಯುತ್ತರಅಳಿಸಿ
  7. ಶ್ರೀನಿವಾಸರೆ,

    ನೀವು ನಕ್ಷತ್ರಿಕರಾಗುವಂತೆ ಎಲ್ಲ ಬೊಗಳಿಗರೂ ಹಾರೈಸಿದ್ದಾರೆ.

    ನಮಗೆ ಉಲ್ಕೆ ಗೊತ್ತಿಲ್ಲ. ಪುಲ್ಕಾ ಗುಳುಂಕರಿಸಿ ಮಾತ್ರವೇ ಗೊತ್ತು...

    ಪ್ರತ್ಯುತ್ತರಅಳಿಸಿ
  8. ಒಂಬತ್ತು ರತ್ನಗಳಲ್ಲೊಬ್ಬರಾದ ಸುಧೀರರೇ, ನಿಮಗಿದೋ ಸ್ವಾಗತ.

    ನಿಮ್ಮ ವಿವರಣೆ ನೋಡಿದ ಮೇಲೆ, ಶ್ರೀನಿವಾಸರು ಹೇಳಿದ್ದು ಬೊಗಳೆ ಬ್ಯುರೋದ ಉಲ್ಕೆಗಳ ಬಗ್ಗೆ ಅಂತ ಈಗ ಗೊತ್ತಾಯಿತು.

    ನಮ್ಮ ವ-ರದ್ದಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದು ನೋಡಿ ತುಂಬಲಾರದ ಸಂತೋಷವಾಗಿದೆ.

    ಬರ್ತಾ ಇರಿ

    ಪ್ರತ್ಯುತ್ತರಅಳಿಸಿ
  9. ಮಹಾಂತೇಶರೇ,

    ನಾವು ಬಂದಿಲ್ಲ ಅಂತ ಹೇಳುವ ಮೂಲಕ, ಅಂತೂ ನೀವು ಕೂಡ ಬೊಗಳೆ ಬಿಡಲು ರೆಡಿಯಾಗಿದ್ದೀರಿ ಅಂತಾಯ್ತು.

    ಒಂದು ಮಾತ್ರ ನೆನಪಿಡಿ, ನಾವು ಬೇಕೂಂತ ಮಾಯವಾಗಿಲ್ಲ.... ನಮ್ಮನ್ನೇ ಅಲ್ಲಿಂದ ಮಹಾಂತೇಶರು ಓಡಿಸಿಬಿಟ್ರು ಅಂತ ಪ್ರಚಾರ ಮಾಡಲಾರಂಭಿಸಿದ್ದೇವೆ....

    ಪ್ರತ್ಯುತ್ತರಅಳಿಸಿ
  10. ಸು-ನೀಲರೇ,

    ನಾವು ಯಾವತ್ತೂ ಇಡೀ ಊರಿಗೇ ಕೇಳಿಸುವಷ್ಟು ಮಾತ್ರ ಮೆಲ್ಲಗೆ ಹೇಳ್ತಾ ಇದೀವಿ.

    ಬಿಳಾಗುಕೂಟದಲ್ಲಿ ನೀಲಿಯುಡುಗೆ ತೊಟ್ಟ ನಿಮ್ಮನ್ನು ನೋಡಿದ ನಂತರವೇ ನಾವು ಅಲ್ಲಿಂದ ಪರಾರಿಯಾಗಿದ್ದು.

    ಪ್ರತ್ಯುತ್ತರಅಳಿಸಿ
  11. ನೀವು ಬೊಗಳೆ ಬಿಡುವುದು ಗೊತ್ತಿರುವ ವಿಷಯವೇ. ಆದರೆ ಅದನ್ನು "ಪಬ್ಬಿಗರೂ ಬ್ಲಾಗರ್‍ಸ್ ಮೀಟಿಗೆ ಬಂದಿದ್ದರು" ಎಂದು ಬೊಗಳೆ ಬಿಟ್ಟು ಸಾಧಿಸಬೇಕಾಗಿರಲಿಲ್ಲ.

    -ಪಬ್

    ಪ್ರತ್ಯುತ್ತರಅಳಿಸಿ
  12. ಪಬ್ಬಿಗರೇ,
    ಬೊಗಳೆ ಬಿಡುವುದನ್ನು ನಾವು ಯಾವ ರೀತಿ ಸಾಧಿಸಲು ಹೊರಟಿಲ್ಲವೋ, ಅದೇ ರೀತಿ ಪಬ್ಬಿಗರು ಕೂಡ ಅಲ್ಲಿ ಪಬ್ಬಿಗರಾಗಿ ಬಂದಿಲ್ಲ ಎಂಬುದೂ ಪತ್ತೆಯಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D